"ಕಬ್ಬಿಗೆ ನ್ಯಾಯಯುತ ಬೆಲೆ ನಿಗದಿಗೆ ಒತ್ತಾಯಿಸಿ ನ.2ರಂದು ರಾಜ್ಯಾದ್ಯಂತ ಪ್ರತಿಭಟನೆ"

Update: 2020-10-30 16:43 GMT

ಮೈಸೂರು,ಅ.30: ಕಬ್ಬಿಗೆ ನ್ಯಾಯಯುತ ಬೆಲೆ ನಿಗದಿ ಮಾಡಲು ಒತ್ತಾಯಿಸಿ ನವೆಂಬರ್ 2ರಂದು ರಾಜ್ಯಾದ್ಯಂತ ಜಿಲ್ಲಾ, ತಾಲೂಕು ಕಚೇರಿ ಮುಂದೆ ರಾಜ್ಯ ಕಬ್ಬು ಬೆಳೆಗಾರರು ಧರಣಿ ಹಮ್ಮಿಕೊಳ್ಳಲಾಗುತ್ತಿದ್ದು, ಮೈಸೂರಿನಲ್ಲಿಯೂ ಜಿಲ್ಲಾಧಿಕಾರಿ ಕಚೇರಿಯ ಧರಣಿ ಹಮ್ಮಿಕೊಳ್ಳಲಾಗುವುದು ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ತಿಳಿಸಿದರು.

ನಗರದ ಜಲದರ್ಶಿನಿ ಅತಿಥಿಗೃಹದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದ ಸಕ್ಕರೆ ಕಾರ್ಖಾನೆಗಳು ಕಬ್ಬಿನಿಂದ ಬರುವ ಸಕ್ಕರೆ ಇಳುವರಿ ಕಡಿಮೆ ತೋರಿಸುತ್ತಿರುವ ಕಾರಣ ಕಬ್ಬಿನ ಎಫ್ ಪಿಆರ್ ದರ ನಿಗದಿ ಕಳೆದ ವರ್ಷಕ್ಕಿಂತ 2020-21ನೇ ಸಾಲಿಗೆ ಕಡಿಮೆ ಆಗಿದೆ. ರಾಜ್ಯದಲ್ಲಿ ಎಸ್ ಎಪಿ ಕಾಯ್ದೆ ಜಾರಿ ಬಂದ ಮೇಲೆ ಕಳೆದ ಮೂರು ವರ್ಷಗಳಿಂದ ಸಕ್ಕರೆ ಕಾರ್ಖಾನೆಗಳು ಇಳುವರಿ ಕಡಿಮೆ ತೋರಿಸಿ ರೈತರಿಗೆ ಅನ್ಯಾಯ ಮಾಡುತ್ತಿವೆ ಎಂದರು.

ಇದೇ ತಿಂಗಳ 15ರಂದು ನಡೆದ ಕಬ್ಬು ಖರೀದಿ ಮಂಡಳಿ ಸಭೆಯಲ್ಲಿ ಈ ಬಗ್ಗೆ ಚರ್ಚಿಸಿದಂತೆ ಸಕ್ಕರೆ ಸಚಿವ ಶಿವರಾಮ್ ಹೆಬ್ಬಾರ್ ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ 10 ದಿನದ ಒಳಗಾಗಿ ರಾಜ್ಯದಲ್ಲಿ ಎಸ್ ಎಪಿ ಬೆಲೆ ನಿಗದಿ ಮಾಡುವುದಾಗಿ ಒಪ್ಪಿ 15 ದಿನಗಳಾದರೂ ಯಾವುದೇ ತೀರ್ಮಾನ ಪ್ರಕಟಿಸದೆ ನಿರ್ಲಕ್ಷಿಸಿದ್ದಾರೆ. ಒಪ್ಪಂದ ಮಾಡಿಕೊಂಡ ರೈತರ ಕಬ್ಬಿನ ಕಟಾವು 16-17ತಿಂಗಳಾಗುತ್ತಿದೆ. ಜಿಲ್ಲಾಡಳಿತದ ಅನುಮತಿ ಇಲ್ಲದೆ ಹೊರ ಜಿಲ್ಲೆಯಿಂದ ಕಬ್ಬು ತರುತ್ತಿರುವ ಕಾರಣ ಕಾರ್ಖಾನೆ ವ್ಯಾಪ್ತಿಯ ರೈತರಿಗೆ ಕಬ್ಬು ಕಟಾವು ವಿಳಂಬವಾಗುತ್ತಿದೆ. ಕಬ್ಬು ಬೆಳೆಗಾರರು ಹಾಗೂ ಕಾರ್ಖಾನೆಗಳ ನಡುವೆ ಕಾನೂನು ಬದ್ಧ ದ್ವಿಪಕ್ಷೀಯ ಒಪ್ಪಂದ ಪತ್ರ ರಾಜ್ಯ ಸರ್ಕಾರವೇ ಸೂಚಿಸಿದರೂ ಜಾರಿ ಮಾಡಿಲ್ಲ. ಇದರಿಂದ ಕಬ್ಬಿನ ದರ ನಿಗದಿಯಲ್ಲಿಯೂ ಅನ್ಯಾಯವಾಗುತ್ತಿದೆ. ಈಗ ನಿಗದಿ ಮಾಡಿರುವ ಕಬ್ಬಿನ ಎಫ್ ಆರ್ ಪಿ ದರ ಅವೈಜ್ಞಾನಿಕವಾಗಿದೆ ಎಂದು ಆರೋಪಿಸಿದರು.

ರಾಜ್ಯ ಸರ್ಕಾರ ಭತ್ತ ಖರೀದಿ ಕೇಂದ್ರ ಆರಂಭಿಸಲು ತೀರ್ಮಾನಿಸಿದೆ ಆದರೆ ಖರೀದಿ ಮಾನದಂಡವನ್ನು ಬದಲಾಯಿಸಬೇಕು. ಪ್ರತಿ ರೈತನಿಂದ ಕನಿಷ್ಠ 100 ಕ್ವಿಂಟಾಲ್ ಭತ್ತ ಖರೀದಿ ಮಾಡುವಂತಾಗಬೇಕು. ಕನಿಷ್ಠ ಬೆಂಬಲ ಬೆಲೆಗೆ ಪ್ರೋತ್ಸಾಹಧನ 200 ಹೆಚ್ಚುವರಿ ನೀಡುವ ಯೋಜನೆ ಜಾರಿಯಾಗಬೇಕು. ಉತ್ತರ ಕರ್ನಾಟಕ ಹೈದ್ರಾಬಾದ್ ಕರ್ನಾಟಕದಲ್ಲಿ ಆಗಿರುವ ಪ್ರವಾಹ, ಅತಿವೃಷ್ಟಿ ಹಾನಿ, ಬೆಳೆ ನಷ್ಟಕ್ಕೆ ಕಬ್ಬು, ತೊಗರಿ, ಬತ್ತ, ಜೋಳ, ಹತ್ತಿ, ಬಾಳೆ ಬೆಳೆಗಳಿಗೆ ವೈಜ್ಞಾನಿಕ ಪರಿಹಾರ ಕೂಡಲೇ ನೀಡಬೇಕು. ಅತಿವೃಷ್ಟಿ ಪ್ರವಾಹಕ್ಕೆ ಸಿಲುಕುವ ಗ್ರಾಮಗಳ ಸ್ಥಳಾಂತರಕ್ಕೆ ಸರ್ಕಾರ ಉದ್ಯಮಿಗಳಿಗೆ ಗ್ರಾಮಗಳ ದತ್ತು ನೀಡುವ ಯೋಜನೆ ಜಾರಿಗೆ ತರಬೇಕು. ಯೋಜನೆಯಲ್ಲಿ ಭಾಗಿಯಾಗುವ ಉದ್ಯಮಗಳ ಆದಾಯ ತೆರಿಗೆ ಶೇ.100 ರಷ್ಟು ವಿನಾಯತಿ ನೀಡಬೇಕು. ಇದರಿಂದ ಸರ್ಕಾರಕ್ಕೂ ಹೊರೆ ಕಡಿಮೆಯಾಗುತ್ತದೆ. ಗ್ರಾಮಗಳು ಪ್ರತಿವರ್ಷ ನೆರೆಹಾವಳಿಗೆ ಸಿಲುಕುವುದು ತಪ್ಪುತ್ತದೆ. ಕೇಂದ್ರ ಸರ್ಕಾರ ರಾಜ್ಯಕ್ಕೆ ಹಣ ಬಿಡುಗಡೆ ಪರಿಹಾರ ಕ್ರಮಗಳನ್ನು ಕೈಗೊಳ್ಳುವಲ್ಲಿ ನಿರ್ಲಕ್ಷ್ಯ ನೀತಿ ವಹಿಸುತ್ತಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ರಾಜ್ಯದಿಂದ ಆಯ್ಕೆಯಾಗಿ ರಾಜ್ಯಕ್ಕೆ ದ್ರೋಹ ಬಗೆಯುತ್ತಿದ್ದಾರೆಂದು ಆರೋಪಿಸಿದರು.

ಈ ಎಲ್ಲಾ ವಿಷಯಗಳ ಬಗ್ಗೆ ರಾಜ್ಯ ಸರ್ಕಾರದ ಗಮನ ಸೆಳೆದಿದ್ದರೂ ಯಾವುದೇ ಕ್ರಮ ಜಾರಿಯಾಗಿಲ್ಲ. ಆದ್ದರಿಂದ ನವೆಂಬರ್ 2ರಂದು ರಾಜ್ಯಾದ್ಯಂತ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ರಾಜ್ಯ ಕಬ್ಬು ಬೆಳೆಗಾರರ ಸಂಘದ ವತಿಯಿಂದ ಧರಣಿಯನ್ನು 11ಗಂಟೆಯಿಂದ ನಡೆಸಲಾಗುವುದು ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ರೈತ ಮುಖಂಡರಾದ ರಾಜ್ಯ ಸಂಘಟನಾ ಕಾರ್ಯದರ್ಶಿ ಅತ್ತಹಳ್ಳಿ ದೇವರಾಜ್, ಕೆ.ಆರ್.ಎಸ್.ರಾಮೇಗೌಡ, ತಾಲೂಕು ಅಧ್ಯಕ್ಷ ಗಳಿಗರ ಹುಂಡಿ ವೆಂಕಟೇಶ್, ಬರಡನಪುರ ನಾಗರಾಜ್, ದೊಡ್ಡ ಕಾಟೂರು ಮಹದೇವಸ್ವಾಮಿ, ಸಾತಗಳ್ಳಿ ಬಸವರಾಜು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News