ಜೈಲಿನಿಂದ ಬಿಡುಗಡೆಯಾದ ದಿನವೇ ಯುವಕನ ಬರ್ಬರ ಹತ್ಯೆ

Update: 2020-10-30 17:08 GMT

ಮಂಡ್ಯ, ಅ30: ಜೈಲಿನಿಂದ ಬಿಡುಗಡೆಯಾದ ದಿನವೇ ರೌಡಿಶೀಟರ್ ಯುವಕನನ್ನು ಕೊಚ್ಚಿ ಕೊಲೆ ಮಾಡಿರುವ ಘಟನೆ ನಗರದ ಗುತ್ತಲು ರಸ್ತೆಯ ಬಸವನಗುಡಿ 4ನೇ ಕ್ರಾಸ್‍ನಲ್ಲಿ ಶುಕ್ರವಾರ ಸಂಜೆ ನಡೆದಿದೆ.

ನಗರದ ಸ್ವರ್ಣಸಂದ್ರ ಬಡಾವಣೆಯ ನಿವಾಸಿ ದುಂಡುಮಾದ ಅವರ ಪುತ್ರ ಸುಮಂತ್(21) ಕೊಲೆಯಾದ ಯುವಕ. ಈತ ಹಾಲು ಕೊಡಲು ಹೋದಾಗ ಬೈಕ್‍ನಲ್ಲಿ ಬಂದ ಮೂವರು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಪರಾರಿಯಾದರು ಎನ್ನಲಾಗಿದೆ.

ಹಾಲುಮತ ಜನಾಂಗದ ಸುಮಂತ್, ಸ್ವರ್ಣಸಂದ್ರದ ಅನ್ಯ ಜಾತಿಯ ಹುಡುಗಿಯೊಬ್ಬಳನ್ನು ಪ್ರೀತಿಸಿ ಕಳೆದ ಹಲವು ತಿಂಗಳ ಹಿಂದೆ ಹುಡುಗಿಯನ್ನು ಕರೆದುಕೊಂಡು ಬೆಂಗಳೂರಿಗೆ ಪರಾರಿಯಾಗಿದ್ದ. ಹುಡುಗಿ ಇನ್ನೂ ಅಪ್ರಾಪ್ತಳಾಗಿದ್ದರಿಂದ ಹುಡುಗಿಯ ಪೋಷಕರು ದೂರು ನೀಡಿದ್ದರು. ಅದರಂತೆ ಪೊಲೀಸರು ಇಬ್ಬರನ್ನು ಪತ್ತೆಹಚ್ಚಿ ಹುಡುಗಿಯನ್ನು ಪೋಷಕರಿಗೆ ಒಪ್ಪಿಸಿದ್ದರು ಎನ್ನಲಾಗಿದೆ. ಹುಡುಗಿಯ ವಿಚಾರದಲ್ಲಿ ಜೈಲು ಸೇರಿದ್ದ ಸುಮಂತ್, ಜೈಲಿನಿಂದ ಬಿಡುಗಡೆಯಾಗಿ ಮನೆಗೆ ಬಂದಿದ್ದ ದಿನವೇ ಹತ್ಯೆಯಾಗಿದೆ. 

ಸುಮಂತ್ ಈಗಾಗಲೇ ಎರಡು ಕೊಲೆ ಪ್ರಕರಣಗಳಲ್ಲಿ ಆರೋಪಿಯಾದ ಹಿನ್ನೆಲೆಯಲ್ಲಿ ಆತ ರೌಡಿಶೀಟರ್ ಆಗಿದ್ದನು. ದುಷ್ಕರ್ಮಿಗಳು ಪತ್ತೆಗೆ ಕ್ರಮವಹಿಸಲಾಗಿದೆ ಎಂದು ಪೂರ್ವ ಠಾಣೆ ಪೊಲೀಸರು ತಿಳಿಸಿದ್ದಾರೆ. ಎಸ್ಪಿ ಕೆ.ಪರಶುರಾಮ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News