ದಲಿತರ ಮೇಲೆ ದೌರ್ಜನ್ಯ ಪ್ರಕರಣ: ''ಸಂತ್ರಸ್ತರ ವಿರುದ್ಧದ ಸುಳ್ಳು ಕೇಸುಗಳನ್ನು ಹಿಂಪಡೆಯದಿದ್ದರೆ ಹೋರಾಟ''

Update: 2020-10-30 17:12 GMT

ಕೊಪ್ಪಳ, ಅ. 30: `ಜಿಲ್ಲೆಯು ಕಾರಟಗಿ ತಾಲೂಕಿನ ಹಗೇದಾಳ ಗ್ರಾಮದಲ್ಲಿ ಕ್ಷುಲ್ಲಕ ಕಾರಣಕ್ಕೆ ಮಾರಣಾಂತಿಕ ಹಲ್ಲೆಗೆ ಒಳಗಾಗಿದ್ದ ದಲಿತ ಸಮುದಾಯದ ಸಂತ್ರಸ್ತರ ವಿರುದ್ಧ ಹಾಕಿರುವ ಸುಳ್ಳು ಕೇಸುಗಳನ್ನು ಕೂಡಲೇ ಹಿಂಪಡೆಯಬೇಕು. ಪೊಲೀಸರ ವೈಫಲ್ಯದಿಂದಲೇ ಈ ದೌರ್ಜನ್ಯ ನಡೆದಿದ್ದು, ಕೃತ್ಯ ನಡೆಸಿದ ಮೇಲ್ಜಾತಿಯವರು ಸೇರಿ ತಪ್ಪಿತಸ್ಥ ಪೊಲೀಸರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು' ಎಂದು ಕರ್ನಾಟಕ ರೈತ ಸಂಘದ ಮುಖಂಡ ಡಿ.ಎಚ್.ಪೂಜಾರ್ ಆಗ್ರಹಿಸಿದ್ದಾರೆ.

ಶುಕ್ರವಾರ ಪೂಜಾರ್ ನೇತೃತ್ವದ ಮುಖಂಡರ ನಿಯೋಗ ಗ್ರಾಮಕ್ಕೆ ಭೇಟಿ ನೀಡಿ ದೌರ್ಜನ್ಯಕ್ಕೆ ಒಳಗಾಗಿರುವ ಸಂತ್ರಸ್ತರಿಗೆ ಧೈರ್ಯ ಹೇಳಿತು. ಅಲ್ಲದೆ, ಇದೇ ವೇಳೆ ಸಭೆ ನಡೆಸುತ್ತಿದ್ದ ಸ್ಥಳಕ್ಕೆ ಧಾವಿಸಿದ ಡಿವೈಎಸ್ಪಿ ರುದ್ರೇಶ್ ಉಜ್ಜನಕೊಪ್ಪ ಮತ್ತು ಸಿಪಿಐ ಉದಯ ರವಿ ಸೇರಿದಂತೆ ಅಧಿಕಾರಿಗಳಿಗೆ ದೌರ್ಜನ್ಯಕ್ಕೊಳಗಾದ ಸಂತ್ರಸ್ತರ ಮೇಲೆ ಹಾಕಿರುವ ಸುಳ್ಳು ಕೇಸುಗಳನ್ನು ಕೂಡಲೇ ಹಿಂಪಡೆಯದಿದ್ದರೆ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.

`ವಾರ್ತಾಭಾರತಿ' ಪತ್ರಿಕೆಯೊಂದಿಗೆ ದೂರವಾಣಿಯಲ್ಲಿ ಮಾತನಾಡಿದ ಡಿ.ಎಚ್.ಪೂಜಾರ್, ಅ.28ರ ಬೆಳಗ್ಗೆ 6ಗಂಟೆ ಸುಮಾರಿಗೆ ಗ್ರಾಮದ ರಡ್ಡಿ ಲಿಂಗಾಯತ ಸಮುದಾಯದ ಯುವಕ ಸಿಗರೇಟ್ ತರುವಂತೆ ಗ್ರಾಮ ಮಾದಿಗ ಸಮುದಾಯದ ದುರುಗೇಶ್‍ಗೆ ಹೇಳಿದ್ದಾನೆ. ಇದೇ ವಿಚಾರಕ್ಕೆ ಮಾತಿನ ಚಕಮಕಿ ನಡೆದಿದ್ದು ಬಳಿಕ ರಾಜಿ ಸಂಧಾನ ನಡೆದಿದೆ. ಆದರೆ, ಆ ಬಳಿಕ ದಲಿತ ಕೇರಿಗೆ ನುಗ್ಗಿ ಮಹಿಳೆಯರು, ವೃದ್ಧರನ್ನು ನೋಡದೆ ಮಾರಕಾಸ್ತ್ರಗಳಿಂದ ಮರಣಾಂತಿಕ ಹಲ್ಲೆ ನಡೆಸಿದ್ದು ಅಪಮಾನ ಮಾಡಲಾಗಿದೆ.

ಆದರೆ, ಪೊಲೀಸರು ಹಲ್ಲೆ ನಡೆಸಿದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದನ್ನು ಬಿಟ್ಟು ಸಂತ್ರಸ್ತರ ವಿರುದ್ಧವೇ ಪ್ರಕರಣ ದಾಖಲಿಸಿದ್ದಾರೆ. ಆ ಮೂಲಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಮೇಲಿನ ದೌರ್ಜನ್ಯ ಕಾಯ್ದೆಯಡಿಯ ಪ್ರಕರಣದಿಂದ ದೌರ್ಜನ್ಯ ನಡೆಸಿದ ತಪ್ಪಿತಸ್ಥರನ್ನು ಕೈಬಿಡುವ ಕೆಲಸಕ್ಕೆ ಪೊಲೀಸರು ಮುಂದಾಗಿರುವುದು ಅಕ್ಷಮ್ಯ. ಹೀಗಾಗಿ ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಇಡೀ ಘಟನೆಯ ಬಗ್ಗೆ ಸೂಕ್ತ ತನಿಖೆ ನಡೆಸಿ ಯಾರೇ ತಪ್ಪಿತಸ್ಥರು ಇದ್ದರೂ ಅವರ ವಿರುದ್ಧ ಕ್ರಮ ಕೈಗೊಳ್ಳಲಿ. ಆದರೆ, ದೌರ್ಜನ್ಯಕ್ಕೊಳಗಾದ ದಲಿತರ ಮೇಲೆಯೆ ಪ್ರತಿಯಾಗಿ ಕೇಸು ಹಾಕುವ ಮೂಲಕ ದೌರ್ಜನ್ಯ ನಡೆಸುವವರಿಗೆ ಕಾನೂನಿನ ಭಯ ಇಲ್ಲದಂತೆ ಮಾಡುವುದು ಸರಿಯಲ್ಲ. ಅಲ್ಲದೆ, ದಲಿತ ಸಮುದಾಯ ಕೇರಿಗೆ ನುಗ್ಗಿ ಹಲ್ಲೆ, ದೌರ್ಜನ್ಯ ನಡೆಸುವ ಮನಸ್ಥಿತಿ ಬದಲಾಗಬೇಕು ಎಂದು ಪೂಜಾರ್ ಆಗ್ರಹಿಸಿದರು.

ಜಾತಿ ದೌರ್ಜನ್ಯ, ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ, ಅತ್ಯಾಚಾರಗಳನ್ನು ಸಮರ್ಥಿಸುವ ಕೋಮುವಾದಿ ಮನಸ್ಥಿತಿಯವರ ಅಧಿಕಾರದಿಂದ ತೊಲಗಬೇಕು. ಜಾತಿಯ ಹೆಸರಿನಲ್ಲಿ ನಡೆಯುತ್ತಿರುವ ಅಸ್ಪೃಶ್ಯತೆ, ಜಾತಿ ಅಪಮಾನ, ಹಲ್ಲೆ-ದೌರ್ಜನ್ಯದ ಘಟನೆಗಳು ಕೊನೆಗೊಳ್ಳಬೇಕು. ಎಲ್ಲ ಜಾತಿಯ ಜನರು ತಮ್ಮ ಬದುಕಿನ ಸಮಸ್ಯೆಗಳ ವಿರುದ್ಧ ಒಗ್ಗೂಡುವ ಮೂಲಕ ಸಮಾನತೆಯಿಂದ ಬದುಕವಂತಹ ವಾತಾವರಣ ಗ್ರಾಮಗಳಲ್ಲಿ ನೆಲೆಸಬೇಕು ಎಂದು ಪೂಜಾರ್ ಕೋರಿದರು.

ಈ ವೇಳೆ ದಲಿತ ಮುಖಂಡರಾದ ಆನಂದ ಬಂಡಾರಿ, ಶ್ರೀನಿವಾಸ ನಾಯಕ, ಚಿಟ್ಟೆಬಾಬು ಸೇರಿದಂತೆ ಗ್ರಾಮದ ಜನರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News