ಜಲಪಾತಕ್ಕೆ ಈಜಲು ತೆರಳಿದ್ದ ಬಾಲಕ ನೀರಿನಲ್ಲಿ ಮುಳುಗಿ ಮೃತ್ಯು

Update: 2020-10-31 14:30 GMT

ಕಳಸ, ಅ.31: ಇಲ್ಲಿಗೆ ಸಮೀಪದ ಅಬ್ಬುಗುಡಿಗೆ ಗ್ರಾಮದ ಸುರುಮನೆ ಜಲಪಾತದ ನೀರಿನಲ್ಲಿ ಈಜಲು ಹೋದ ಬಾಲಕನೋರ್ವ ಹೊಂಡದ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ಶನಿವಾರ ವರದಿಯಾಗಿದೆ.

ಹೋಬಳಿಯ ಸಂಸೆ ಗ್ರಾಪಂ ವ್ಯಾಪ್ತಿಯ ಗುತ್ಯಡ್ಕ ಗ್ರಾಮದ ನಿವಾಸಿ ವಂಶಿತ್(16) ಮೃತ ಬಾಲಕನಾಗಿದ್ದು, ಈತ ಶನಿವಾರ ಮಧ್ಯಾಹ್ನ ತನ್ನ ನಾಲ್ಕು ಜನ ಸ್ನೇಹಿತರೊಂದಿಗೆ ಸುರುಮನೆ ಫಾಲ್ಸ್ ನೋಡಲು ತೆರಳಿದ್ದ. ಈ ವೇಳೆ ಜಲಪಾತದ ಬಳಿ ಇರುವ ನೀರಿನ ಹೊಂಡಕ್ಕಿಳಿದು ಸ್ನಾನ ಮಾಡಲು ಮುಂದಾಗಿದ್ದಾರೆ. ಈ ವೇಳೆ ನಾಲ್ವರು ಈಜಾಡುತ್ತಿದ್ದಾಗ ವಂಶಿತ್ ಹೊಂಡದ ನೀರಿನ ಆಳ ಅರಿಯದೇ ನೀರಿನಲ್ಲಿ ಸಿಲುಕಿಕೊಂಡಿದ್ದಾನೆಂದು ತಿಳಿದು ಬಂದಿದೆ.

ಘಟನೆ ನಡೆದ ಸ್ಥಳದಲ್ಲಿ 50ಕ್ಕೂ ಹೆಚ್ಚು ಪ್ರವಾಸಿಗರಿದ್ದರೆಂದು ತಿಳಿದು ಬಂದಿದ್ದು, ವಂಶಿತ್ ಹಾಗೂ ಆತನ ಸ್ನೇಹಿತರು ಸಹಾಯಕ್ಕಾಗಿ ಕೂಗಿಕೊಂಡು ಅಂಗಲಾಚಿದರೂ ಯಾರೂ ನೆರವಿಗೆ ಧಾವಿಸಲಿಲ್ಲ ಎಂದು ತಿಳಿದು ಬಂದಿದೆ.

ಸ್ಥಳೀಯರಾದ ದಿನೇಶ್, ರಾಜೇಶ್, ಮಧು, ಪ್ರಕಾಶ್ ಕುಮಾರ್ ಎಂಬವರು ಸಂಜೆ ವೇಳೆ ಬಾಲಕನ ಮೃತದೇಹವನ್ನು ನೀರಿನಿಂದ ಹೊರ ತೆಗೆದಿದ್ದು, ಕಳಸ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News