ಗಂಡ ಸತ್ತ ಮುಂಡೆಗೆ ರಾಜಕೀಯ ಏಕೆಂದು ಮುನಿರತ್ನ ಕೇಳಿದರು: ಕಾಂಗ್ರೆಸ್ ಅಭ್ಯರ್ಥಿ ಕುಸುಮಾ

Update: 2020-11-01 12:56 GMT

ಬೆಂಗಳೂರು, ನ.1: ಆರ್‌ಆರ್ ನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಬಿಜೆಪಿ ಅಭ್ಯರ್ಥಿ ಮುನಿರತ್ನ, ನನ್ನ ವಿರುದ್ಧ ಮನೆ ಮನೆಗೆ ತೆರಳಿ ಅಪಪ್ರಚಾರ ಮಾಡುತ್ತಿದ್ದು, ಗಂಡ ಸತ್ತ ಮುಂಡೆಗೆ ರಾಜಕೀಯ ಏಕೆಂದು ಪ್ರಶ್ನಿಸಿರುವುದಾಗಿ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಆರೋಪಿಸಿದರು.

ರವಿವಾರ ನಗರದ ಕೆಪಿಸಿಸಿ ಕೇಂದ್ರ ಕಚೇರಿಯಲ್ಲಿ ಸುದ್ದಿ ಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನನ್ನ ಬಗ್ಗೆ ತೀಕ್ಷ್ಣ ಮಾತುಗಳನ್ನಾಡಿರುವ ಮುನಿರತ್ನ ಅವರು, ಗಂಡ ಸತ್ತ ಮುಂಡೆಗೆ ರಾಜಕೀಯವೇಕೆ, ಗಂಡನನ್ನು ಆಕೆ ತಿಂದಿದ್ದಾಳೆ ಎಂದೆಲ್ಲಾ ಹೇಳಿಕೊಂಡಿದ್ದಾರೆ ಎಂದು ದೂರಿದರು.

ಮತಯಾಚನೆಗೆ ಮನೆ ಮನೆಗೆ ತೆರಳುತ್ತಿರುವ ಮುನಿರತ್ನ ಅವರು, ಈ ಸಂದರ್ಭದಲ್ಲಿ ನನ್ನ ಕುರಿತು ಅಪಪ್ರಚಾರ ಮಾಡುತ್ತಿರುವುದು ಮಾತ್ರವಲ್ಲದೆ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಇದನ್ನು ಸ್ವತಃ ಕ್ಷೇತ್ರದ ಮತದಾರರೇ ತಿಳಿಸಿದ್ದಾರೆ ಎಂದು ಕುಸುಮಾ ನುಡಿದರು.

ಅಲ್ಲದೆ, ಈ ನನ್ನ ಪರಿಸ್ಥಿತಿ ಯಾರಿಗೂ ಬರಬಾರದು. ಮುನಿರತ್ನ ಅವರಿಗೂ ಇಬ್ಬರು ಪುತ್ರಿಯರಿದ್ದು, ಅವರ ಜೀವನದಲ್ಲಿ ಇಂತಹ ಘಟನೆಗಳು ನಡೆಯದಂತೆ ಇರಲಿ ಎಂದ ಅವರು, ಸಮಾಜ ಸೇವೆಗಾಗಿಯೇ ರಾಜಕೀಯಕ್ಕೆ ಬಂದಿದ್ದೇನೆ ಹೊರತು, ಬೇರೆ ಉದ್ದೇಶಗಳು ಇಲ್ಲ. ಹೀಗಾಗಿಯೇ, ನನ್ನ ವಿರುದ್ಧ ಬಿಜೆಪಿ ಸರಣಿ ಟೀಕೆಗಳನ್ನು ಮಾಡುತ್ತಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News