×
Ad

ನಾಡಧ್ವಜಕ್ಕೆ ಅಧಿಕೃತ ಮನ್ನಣೆ ಸಿಗುವಂತೆ ಮಾಡಿ: ಸಿದ್ದರಾಮಯ್ಯ

Update: 2020-11-02 20:22 IST

ಬೆಂಗಳೂರು, ನ.2: ಕನ್ನಡ ರಾಜ್ಯೋತ್ಸವದ ದಿನ ನಾಡಧ್ವಜ ಹಾರಿಸದೆ ಹಲವಾರು ಜಿಲ್ಲಾಡಳಿತಗಳು ಅಗೌರವ ತೋರಿಸಿರುವುದು ಖಂಡನೀಯ. ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಸಮಕ್ಷಮದಲ್ಲಿಯೆ ನಾಡಧ್ವಜ ಹಾರಿಸಿರುವಾಗ ಜಿಲ್ಲಾಡಳಿತದ ಉಪೇಕ್ಷೆ ಯಾರ ಕುಮ್ಮಕ್ಕಿನಿಂದ ನಡೆಯಿತು ಎನ್ನುವುದನ್ನು ಮುಖ್ಯಮಂತ್ರಿಗಳು ಸ್ಪಷ್ಟಪಡಿಸಬೇಕು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಕನ್ನಡ ರಾಜ್ಯೋತ್ಸವದ ದಿನ ಕನ್ನಡ ಧ್ವಜವನ್ನು ಬೆಂಗಳೂರು ಸೇರಿದಂತೆ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಹಾರಿಸುವ ಸಂಪ್ರದಾಯವನ್ನು ಹಿಂದಿನ ಎಲ್ಲ ಸರಕಾರಗಳು ಪಾಲಿಸುತ್ತಾ ಬಂದಿವೆ. ಕಳೆದ ಬಾರಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಸಿ.ಟಿ.ರವಿಯವರೆ ನಾಡಧ್ವಜ ಆರೋಹಣವನ್ನು ವಿರೋಧಿಸಿದ್ದು ಜನಾಕ್ರೋಶಕ್ಕೆ ಕಾರಣವಾಗಿತ್ತು ಎಂದು ಅವರು ತಿಳಿಸಿದ್ದಾರೆ.

ನಾನು ಮುಖ್ಯಮಂತ್ರಿಯಾಗಿದ್ದಾಗ ತಜ್ಞರ ಸಮಿತಿಯನ್ನು ಆಧರಿಸಿ ನಾಡಧ್ವಜವನ್ನು ವಿನ್ಯಾಸ ಮಾಡಿ ಅಂಗೀಕಾರಕ್ಕಾಗಿ ಕೇಂದ್ರ ಸರಕಾರಕ್ಕೆ ಕಳಿಸಿದ್ದೆ. ಎರಡು ವರ್ಷಗಳಾದರೂ ಅದಕ್ಕೆ ಅಂಗೀಕಾರ ನೀಡದೆ ಇರುವುದು ಕರ್ನಾಟಕದ ನಾಡಧ್ವಜದ ಬಗ್ಗೆ ಬಿಜೆಪಿಗೆ ಇರುವ ಪೂರ್ವಗ್ರಹಕ್ಕೆ ಸಾಕ್ಷಿ ಎಂದು ಅವರು ಟೀಕಿಸಿದ್ದಾರೆ.

ನಾವೇನು ಪ್ರತ್ಯೇಕ ಧ್ವಜವನ್ನು ಕೇಳುತ್ತಿಲ್ಲ. ರಾಜ್ಯಗಳು ತಮ್ಮದೇ ಆಗಿರುವ ಧ್ವಜ ಹೊಂದಲು ಸಂವಿಧಾನದಲ್ಲಿ ಯಾವ ಅಡ್ಡಿಯೂ ಇಲ್ಲ. ಬಿಜೆಪಿಯ ಕೇಂದ್ರ ನಾಯಕರ ಅಭಿಪ್ರಾಯವೇನೇ ಇರಲಿ, ಆ ಪಕ್ಷದ ಸ್ಥಳೀಯ ನಾಯಕರು ಪ್ರಧಾನಮಂತ್ರಿ ಮೇಲೆ ಒತ್ತಡ ಹೇರಿ ಕರ್ನಾಟಕದ ನಾಡಧ್ವಜಕ್ಕೆ ಅಧಿಕೃತ ಮನ್ನಣೆ ಸಿಗುವಂತೆ ಮಾಡಬೇಕು ಎಂದು ಸಿದ್ದರಾಮಯ್ಯ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News