"ಸಿಗಂದೂರು ದೇವಾಲಯದ ಗಲಾಟೆ ಹಿಂದೆ ಶಾಸಕ ಹರತಾಳು ಹಾಲಪ್ಪ,ಗುರುಮೂರ್ತಿ ಕೈವಾಡ"
ಶಿವಮೊಗ್ಗ, ನ.3: ಸಿಗಂದೂರು ಶ್ರೀ ಚೌಡೇಶ್ವರಿ ದೇವಾಲಯದ ಗಲಾಟೆಯ ಹಿಂದೆ ಸಾಗರ ಕ್ಷೇತ್ರದ ಶಾಸಕ ಹರತಾಳು ಹಾಲಪ್ಪ ಹಾಗೂ ಎಂಎಡಿಬಿ ಅಧ್ಯಕ್ಷ ಎಂ.ಗುರುಮೂರ್ತಿಯವರ ಕೈವಾಡವಿದೆ ಎಂದು ಮಾಜಿ ಶಾಸಕ, ಕಾಂಗ್ರೆಸ್ ವಕ್ತಾರ ಬೇಳೂರು ಗೋಪಾಲಕೃಷ್ಣ ಆರೋಪಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿಗಂದೂರು ಶ್ರೀ ಚೌಡೇಶ್ವರಿ ದೇವಾಲಯದ ಸಮಸ್ಯೆ ಬಗೆಹರಿಸಲು ತಾನು ಪ್ರಯತ್ನ ಪಟ್ಟಿದೆ. ಇದಕ್ಕೆ ಅರ್ಚಕ ಶೇಷಗಿರಿ ಭಟ್ ಹಾಗೂ ಧರ್ಮದರ್ಶಿ ರಾಮಪ್ಪ ಇಬ್ಬರು ಒಪ್ಪಿಕೊಂಡಿದ್ದರು. ಆದರೆ ಹರತಾಳು ಹಾಲಪ್ಪ ಹಾಗೂ ಗುರುಮೂರ್ತಿ ಮಧ್ಯಪ್ರವೇಶಿಸಿ ಗಲಾಟೆ ನಡೆಯುವಂತೆ ವ್ಯವಸ್ಥಿತ ಪಿತೂರಿ ನಡೆಸಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶೇಷಗಿರಿ ಭಟ್ ಮತ್ತು ರಾಮಪ್ಪ ನಡುವೆ ಸಂಧಾನ ನಡೆಸುವ ಬದಲು ಹರತಾಳು ಹಾಲಪ್ಪ ಜಾತಿ ಜಾತಿಗಳ ನಡುವೆ ಬೆಂಕಿ ಹಚ್ಚಿ ಮಜಾ ತೆಗೆದುಕೊಳ್ಳುತ್ತಿದ್ದಾರೆ. ಹಾಲಪ್ಪ ಈಡಿಗ ಸಂಘವನ್ನು ಸುಡುಗಾಡು ಸಂಘ ಅಂತ ನಾಲಿಗೆ ಹರಿಬಿಟ್ಟಿದ್ದಾರೆ.ಈಡಿಗರ ಕೋಟಾದಡಿ ಮುಜರಾಯಿ ಇಲಾಖೆ ಸಚಿವರಾಗಿರುವ ಶ್ರೀನಿವಾಸ್ ಪೂಜಾರಿ ಈಡಿಗರ ಆಡಳಿತ ಮಂಡಳಿ ಕಿತ್ತುಕೊಳ್ತಿದ್ದಾರೆ ಎಂದು ಗೋಪಾಲಕೃಷ್ಣ ಆರೋಪಿದ್ದಾರೆ.
ದುರುದ್ದೇಶ ಇಟ್ಕೊಂಡು ದೇವಸ್ಥಾನವನ್ನು ಮುಜರಾಯಿ ಇಲಾಖೆಗೆ ಸೇರಿಸಲು ಮುಂದಾದರೆ ಸುಮ್ಮನಿರುವದಿಲ್ಲ ಎಂದು ಎಚ್ಚರಿಕೆ ನೀಡಿದರು.
ಜಿಲ್ಲಾಧಿಕಾರಿ ವಿರುದ್ಧ ಹರಿಹಾಯ್ದ ಬೇಳೂರು:
ಗೋಕರ್ಣ ದೇವಾಲಯವಾಗಿ ಎಷ್ಟು ಹೊಡೆದಾಟ ಬಡಿದಾಟ ಆಯ್ತು ಆಗ ಏನಾದರೂ ಮಾಡಿದ್ರಾ?. ಕೊಲ್ಲೂರಲ್ಲೂ ಆಗಿದೆ, ಕನಕ ದಾಸರ ವಿಚಾರವಾಗಿ ಉಡುಪಿಯಲ್ಲಿಯೂ ಗಲಾಟೆ ಆಗಿತ್ತು. ಇವ್ಯಾವು ಮುಜರಾಯಿಗೆ ಸೇರಿಸಲಿಲ್ಲ ಯಾಕೆ? ಸಿಗಂದೂರು ದೇವಾಲಯ ಮಾತ್ರ ಯಾಕೆ ನಿಮ್ಮ ಕಣ್ಣಿಗೆ ಬಿದ್ದಿದೆ? ಸಿಗಂದೂರು ವಿಚಾರವಾಗಿ ಸಮಿತಿ ರಚನೆ ಮಾಡಲು ಅಧಿಕಾರ ಕೊಟ್ಟವರು ಯಾರು ಎಂದು ಜಿಲ್ಲಾಧಿಕಾರಿಗೆ ಪ್ರಶ್ನಿಸಿದ ಬೇಳೂರು, ಜಿಲ್ಲಾಧಿಕಾರಿ ಬಿಜೆಪಿ ಪಕ್ಷದ ಏಜೆಂಟ್ ಆಗಿ ಕೆಲಸ ಮಾಡಬಾರದು ಎಚ್ಚರಿಕೆ ನೀಡಿದರು.
ಸಿಗಂದೂರಿನಲ್ಲಿ ಅರಣ್ಯ ಪ್ರದೇಶ ಒತ್ತುವರಿಯಾಗಿದೆ ಎಂದು ಜಿಲ್ಲಾಧಿಕಾರಿ ಹೇಳುತ್ತಿದ್ದಾರೆ. ಜಿಲ್ಲಾಧಿಕಾರಿ ಕಚೇರಿ, ನಗರದ ಬಸ್ ನಿಲ್ದಾಣ, ಸರ್ಕ್ಯೂಟ್ ಹೌಸ್ನಲ್ಲಿರುವ ಪ್ರವಾಸಿ ಮಂದಿರ ಕೂಡ ಅರಣ್ಯ ಪ್ರದೇಶದಲ್ಲಿದೆ. ಈ ಪ್ರದೇಶಗಳನ್ನು ತೆರವುಗೊಳಿಸುತ್ತೀರಾ ಎಂದು ಬೇಳೂರು ಗೋಪಾಲಕೃಷ್ಣ ಪ್ರಶ್ನಿಸಿದರು.
ಈಡಿಗ ಸಮುದಾಯ ಸ್ವಯಂ ಘೋಷಿತ ಸಂಘ ಎಂದು ಜಿಲ್ಲಾಧಿಕಾರಿ ಹೇಳಿದ್ದು, ಈ ವಿಚಾರವಾಗಿ ಅವರು ಕ್ಷಮೆ ಕೇಳಬೇಕು. ಇಲ್ಲವಾದಲ್ಲಿ ಡಿಸಿ ಕಚೇರಿ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸಿಗಂದೂರು ದೇವಾಲಯದ ವಿಚಾರದಲ್ಲಿ ಅನ್ಯರ ಹಸ್ತಕ್ಷೇಪ ಬೇಡ. ಧರ್ಮದರ್ಶಿ ರಾಮಪ್ಪ ಹಾಗೂ ಅರ್ಚಕ ಶೇಷಗಿರಿ ಭಟ್ ಹೊಂದಾಣಿಕೆಯಲ್ಲಿ ಹೋಗಲಿ. ಮುಂದಿನ ದಿನಗಳಲ್ಲಿ ಜಾತ್ಯಾತೀತವಾಗಿ ಸಿಗಂದೂರು ಉಳಿಸಿ ಬೃಹತ್ ಹೋರಾಟ ರೂಪಿಸಲಾಗುವುದು. ಎಲ್ಲಾ ಸಮಾಜದ ಮುಖಂಡರ ಜೊತೆ ಚರ್ಚೆ ನಡೆಸಿದ್ದೇವೆ. ಹೋರಾಟಕ್ಕೆ ಬೆಂಬಲ ನೀಡಿದ್ದಾರೆ. ಶೀಘ್ರದಲ್ಲೇ ಬೃಹತ್ ಹೋರಾಟ ರೂಪಿಸಲಾಗುವುದು ಎಂದು ಬೇಳೂರು ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಮುಖಂಡರಾದ ಹುನಗೋಡು ರತ್ನಾಕರ್, ಬರಮಪ್ಪ, ವಿರೂಪಾಕ್ಷಪ್ಪ ಗೌಡ ಮತ್ತಿತರರು ಉಪಸ್ಥಿತರಿದ್ದರು.