ಇಬ್ಬರು ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಂಡ ವಿಧವೆ

Update: 2020-11-03 14:04 GMT

ಮಂಡ್ಯ, ನ.3: ಮದುವೆಯಾಗುವುದಾಗಿ ನಂಬಿಸಿದ್ದನೆನ್ನಲಾದ ಯುವಕನಿಂದ ಮೋಸ ಹೋದ ವಿಧವೆ ತನ್ನ ಇಬ್ಬರು ಮಕ್ಕಳ ಸಮೇತ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮದ್ದೂರು ತಾಲೂಕು ಬೋರಾಪುರ ಗ್ರಾಮದಲ್ಲಿ ನಡೆದಿದೆ.

ದಿವಂಗತ ಸೋಮು ಎಂಬವರ ಪತ್ನಿ ನೇತ್ರಾವತಿ(32), ಪುತ್ರಿ ಶೋಭಿತಾ (9) ಹಾಗೂ ನಂದೀಶ್(7) ಮೃತಪಟ್ಟವರು. ನಾಲ್ಕು ವರ್ಷದ ಹಿಂದೆ ಪತಿಯನ್ನು ಕಳೆದುಕೊಂಡಿದ್ದ ನೇತ್ರಾವತಿಯನ್ನು ಅದೇ ಗ್ರಾಮದ ಯುವಕ ಆನಂದ್  ಮದುವೆಯಾಗುವುದಾಗಿ ನಂಬಿಸಿದ್ದ ಎನ್ನಲಾಗಿದೆ. ಬಳಿಕ ಆನಂದ್ ಬೇರೊಬ್ಬ ಯುವತಿಯೊಬ್ಬಳ ಜತೆ ವಿವಾಹಗಲು ಸಿದ್ಧತೆ ಮಾಡಿಕೊಂಡಿದ್ದ ಹಿನ್ನೆಲೆಯಲ್ಲಿ ರಾಜಿ ಪಂಚಾಯಿತಿ ನಡೆದಿದ್ದು, ಆದರೆ ನೇತ್ರಾವತಿಗೆ ನ್ಯಾಯ ಸಿಕ್ಕಿರಲಿಲ್ಲ ಎಂದು ತಿಳಿದು ಬಂದಿದೆ.

ಇದರಿಂದ ಮನನೊಂದ ನೇತ್ರಾವತಿ ಸೋಮವಾರ ತಡರಾತ್ರಿ ತನ್ನ ಮನೆಯಲ್ಲಿ ಮಕ್ಕಳಿಗೆ ವಿಷವುಣಿಸಿ ತಾನೂ ವಿಷ ಸೇವಿಸಿ ಅಸ್ವಸ್ಥಳಾಗಿದ್ದರು. ಗ್ರಾಮಸ್ಥರು ಎಲ್ಲರನ್ನೂ ಹತ್ತಿರದ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಜಿಲ್ಲಾಸ್ಪತ್ರೆಗೆ ಕರೆತಂದರು. ಆ ವೇಳೆಗೆ ಮಗಳು ಶೋಭಿತ ಮೃತಪಟ್ಟಿದ್ದಳು.
ತಾಯಿ ಮತ್ತು ಮಗನನ್ನು ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಆಸ್ಪತ್ರೆಗೆ ರವಾನಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಇಬ್ಬರೂ ಮಂಗಳವಾರ ಬೆಳಗ್ಗೆ ಮೃತಪಟ್ಟಿದ್ದಾರೆ.

ಪ್ರಕರಣ ದಾಖಲಿಸಿಕೊಂಡಿರುವ ಕೆ.ಎಂ.ದೊಡ್ಡಿ ಪೊಲೀಸರು ಬೆಂಗಳೂರಿನಲ್ಲಿದ್ದ ಆರೋಪಿ ಆನಂದ್‍ನನ್ನು ಬಂಧಿಸಿದ್ದಾರೆ.

ಸ್ಥಳಕ್ಕೆ ಡಿವೈಎಸ್ಪಿ ಪೃಥ್ವಿ, ವೃತ್ತ ನಿರೀಕ್ಷಕ ಶಿವಮಲ್ಲಯ್ಯ, ಕೆ.ಎಂ.ದೊಡ್ಡಿ ಸಬ್‍ಇನ್ಸ್‍ಪೆಕ್ಟರ್ ಶೇಷಾದ್ರಿ ಭೇಟಿ ನೀಡಿ ಪರಿಶೀಲಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News