ಸಿಗಂದೂರು ವಿಚಾರಕ್ಕೆ ಕೈ ಹಾಕಿದರೆ ಬಿಎಸ್‌ವೈ ಅಧಿಕಾರ ಕಳೆದುಕೊಳ್ಳುತ್ತಾರೆ: ಬೇಳೂರು ಗೋಪಾಲಕೃಷ್ಣ

Update: 2020-11-03 15:51 GMT

ಶಿವಮೊಗ್ಗ, ನ.3: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪನವರು ಸಿಗಂದೂರು ವಿಚಾರದಲ್ಲಿ ಕೈ ಹಾಕಿದರೆ ಮತ್ತೊಮ್ಮೆ ಅಧಿಕಾರ ಕಳೆದುಕೊಳ್ಳುತ್ತಾರೆ ಎಂದು ಕಾಂಗ್ರೆಸ್ ವಕ್ತಾರ ಬೇಳೂರು ಗೋಪಾಲಕೃಷ್ಣ ಭವಿಷ್ಯ ‌ನುಡಿದಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಳೆದ ಸಲ ಒಂದು ದೇವಾಲಯದ ವಿಚಾರದಲ್ಲಿ ಕೈ ಹಾಕಿ ಮುಖ್ಯಮಂತ್ರಿ ಕುರ್ಚಿ ಕಳೆದುಕೊಂಡಿದ್ದರು. ಈಗ ಪುನಃ ಸಿಗಂದೂರು ಶ್ರೀ ಚೌಡೇಶ್ವರಿ ದೇವಸ್ಥಾನದ ವಿಚಾರವಾಗಿ ಕೈ ಹಾಕಿದ್ದಾರೆ. ಚೌಡೇಶ್ವರಿ ಬಹಳ ಶಕ್ತಿ ಇರುವ ದೇವತೆ. ದೇವರನ್ನು ನಂಬುವ ಮುಖ್ಯಮಂತ್ರಿಗಳು ಸಿಗಂದೂರು ವಿಚಾರದಿಂದ‌ ಅಂತರ ಕಾಪಾಡಿಕೊಳ್ಳಬೇಕು. ಇಲ್ಲದಿದ್ದರೆ ಅಧಿಕಾರ ಕಳೆದುಕೊಳ್ಳತ್ತಾರೆ ಎಂದು ಹೇಳಿದರು.

ಬಿಜೆಪಿಗೆ ಯಾವುದೇ ತತ್ವ, ಸಿದ್ದಾಂತವಿಲ್ಲ. ಮದುವೆಗೂ ಮುನ್ನ ಲೈಂಗಿಕ ಸಂಪರ್ಕ ಹೊಂದಬಹುದು ಎಂದು ಹೇಳಿಕೆ ನೀಡಿದ್ದ ನೀಚ ಹೆಂಗಸು ಖುಷ್ಬು ಅವರನ್ನು‌ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಿದ್ದಾರೆ. ಅವರ ವಿರುದ್ಧ ಬಿಜೆಪಿ ರಾಜ್ಯ-ದೇಶದಾದ್ಯಂತ ಹೋರಾಟ ಮಾಡಿತ್ತು. ಈಗ ಅದೇ ಖುಷ್ಬು ಅವರನ್ನು ಮುನಿರತ್ನ ಪರ ಬಿಜೆಪಿಯವರು ಪ್ರಚಾರಕ್ಕೆ ಕರೆತಂದಿದ್ದಾರೆ. ಆಗ ಶೋಭಾ ಮೇಡಂ ಸಹ ಕೂಡ ಬಾಯಿ ಹರಿದುಕೊಂಡಿದ್ದರು. ಉತ್ತರ ಪ್ರದೇಶದ ಹೆಣ್ಣು ಮಗಳು ಹತ್ಯೆಯಾದಾಗಲೂ ಹೇಳಿಕೆ ಕೊಟ್ಟಿಲ್ಲ. ಈಗ ಎಲೆಕ್ಷನ್ ಟೈಮ್ ನಲ್ಲೂ ಎಲ್ಲಿಯೂ ಪ್ರಚಾರಕ್ಕೆ ಶೋಭಾ ಮೇಡಂ ಬಂದಿಲ್ಲ. ಯಾಕೋ ಏನೋ ಅದನ್ನ ಯಡಿಯೂರಪ್ಪರನ್ನೇ ಕೇಳಬೇಕು. ಭ್ರಷ್ಟಾಚಾರಿ ಮುನಿರತ್ನನಾದರೂ ಬರಲೀ, ಖುಷ್ಬುವೇ ಬರಲಿ. ಯಾವುದೇ ತತ್ವ ಸಿದ್ಧಾಂತವಿಲ್ಲದೇ, ಬಿಜೆಪಿ ಕರೆದುಕೊಂಡಿದೆ ಎಂದು ವಾಗ್ದಾಳಿ ನಡೆಸಿದರು. 

ಆರ್.ಆರ್. ನಗರ ಮತ್ತು ಶಿರಾ ಎರಡರಲ್ಲೂ ಕಾಂಗ್ರೆಸ್ ಗೆಲುವು ಸಾಧಿಸಲಿದೆ. ನಾನು ಕೂಡ ಆ ಎರಡೂ ಕ್ಷೇತ್ರಗಳಿಗೆ ಹೋಗಿ ಬಂದಿದ್ದೆನೆ. ಇದೇ ಮುನಿರತ್ನ ಭ್ರಷ್ಟಾಚಾರಿ ಎಂದು ಹೇಳಿ ಈ ಹಿಂದೆ ಯಡಿಯೂರಪ್ಪ ರಾಜ್ಯಪಾಲರಿಗೆ ದೂರು ನೀಡಿದ್ದರು. ಮೋದಿಯವರನ್ನ ಕರೆಸಿ ಮುನಿರತ್ನ ಭ್ರಷ್ಟಾಚಾರಿ ಅವರಿಗೆ ಮತ ಹಾಕಬೇಡಿ ಎಂದು ಹೇಳಿಸಿದ್ದರು. ಆದರೆ, ಈಗ ಮುನಿರತ್ನ ಒಳ್ಳೆ ಮನುಷ್ಯ ಎಂದು ಸಿ.ಟಿ. ರವಿ ಹೇಳ್ತಾರೆ. ಎಲೆಕ್ಷನ್ ನಡೆಸದೇ ನಿಲ್ಲಿಸಿದ್ದು ನಾವಾ ? ಬಿಜೆಪಿಯವರಾ ? ಹೈಕೋರ್ಟ್ ಗೆ ಮತ್ತು ಸುಪ್ರೀಂ ಕೋರ್ಟ್ ಗೆ ಮುನಿರತ್ನ ಭ್ರಷ್ಟಾಚಾರಿ ಎಂದು ಹೇಳಿ ಹೋದವರು ಬಿಜೆಪಿಯವರೇ. ಬಿಜೆಪಿಗೆ ಯಾವುದೇ ತತ್ವ, ಸಿದ್ದಾಂತವಿಲ್ಲ ಎಂದು ಬೇಳೂರು ವಾಗ್ದಾಳಿ ನಡೆಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News