ಶಿರಾ ಕ್ಷೇತ್ರದಲ್ಲಿ ಮತದಾನ ಶಾಂತಿಯುತ: ಶೇ 82.31ರಷ್ಟು ಮತ ಚಲಾವಣೆ
ತುಮಕೂರು.ನ.03: ಶಿರಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಮತದಾನ ಶಾಂತಿಯುತವಾಗಿ ನಡೆದಿದ್ದು, ಮತದಾನದ ಪ್ರಮಾಣ ಶೇ82.31 ರಷ್ಟಾಗಿದೆ.
ಶಾಸಕ ಬಿ.ಸತ್ಯನಾರಾಯಣ ಅವರ ಅಕಾಲಿಕ ಸಾವಿನಿಂದ ತೆರವಾದ ಸ್ಥಾನಕ್ಕೆ ಇಂದು ಮತದಾನ ನಡೆದಿದ್ದು, ಬಿಜೆಪಿ, ಜೆಡಿಎಸ್, ಕಾಂಗ್ರೆಸ್, ಸಿಪಿಐ ಪಕ್ಷಗಳ ಅಭ್ಯರ್ಥಿಗಳು ಸೇರಿದಂತೆ ಒಟ್ಟು ಕಣದಲ್ಲಿ 15 ಜನರಿದ್ದು, ಇವರ ಭವಿಷ್ಯ ಮತಪೆಟ್ಟಿಗೆಯಲ್ಲಿ ಭದ್ರವಾಗಿದೆ.
ಮಂಗಳವಾರ ಬೆಳಗ್ಗೆ 7 ಗಂಟೆಗೆ ಆರಂಭವಾದ ಮತದಾನದಲ್ಲಿ ಬಿಜೆಪಿ ಅಭ್ಯರ್ಥಿ ರಾಜೇಶ್ ಗೌಡ ತಮ್ಮ ಗ್ರಾಮದ ಚಿರತೆಹಳ್ಳಿ ಮತಗಟ್ಟೆಯಲ್ಲಿ ಕುಟುಂಬದ ಸದಸ್ಯರೊಂದಿಗೆ ಮತ ಚಲಾಯಿಸಿದರೆ, ಮಾಜಿ ಸಚಿವ ಹಾಗೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಟಿ.ಬಿ.ಜಯಚಂದ್ರ ತಮ್ಮ ಪತ್ನಿ ಹಾಗೂ ಕುಟುಂಬದ ಸದಸ್ಯರೊಂದಿಗೆ ಜೋತಿ ನಗರದ ಪದವಿ ಪೂರ್ವ ಕಾಲೇಜಿನಲ್ಲಿ ಮತದಾನ ಮಾಡಿದರು. ಬೆಳಗ್ಗೆ 10 ಗಂಟೆ ಸುಮಾರಿಗೆ ಜೆಡಿಎಸ್ ಪಕ್ಷದ ಅಭ್ಯರ್ಥಿ ಅಮ್ಮಾಜಮ್ಮ ಶಿರಾದ ಜೋತಿ ನಗರದ ಪದವಿ ಕಾಲೇಜಿನಲ್ಲಿ ತಮ್ಮ ಪುತ್ರ ಸತ್ಯಪ್ರಕಾಶ್ ಹಾಗೂ ಕುಟುಂಬದ ಸದಸ್ಯರೊಂದಿಗೆ ಮತದಾನ ಮಾಡಿದರು.
ಇಂದು ಬೆಳಗ್ಗೆ ಆರಂಭವಾದ ಮತದಾನದಲ್ಲಿ ಗ್ರಾಮಾಂತರ ಪ್ರದೇಶದಲ್ಲಿ ಚುರುಕಿನಿಂದ ಮತದಾನವಾಗಿದ್ದರೆ, ನಗರ ಪ್ರದೇಶದಲ್ಲಿ ಅತಿ ನಿಧಾನದ ಮತದಾನವಾಗಿತ್ತು. ಗ್ರಾಮೀಣ ಭಾಗದ ಬ್ರಹ್ಮಸಂದ್ರ, ತರೂರು, ತಾಳಗುಂದ, ಗೌಡಗೆರೆ, ಬೇವಿನ ಹಳ್ಳಿ, ತಾವರೆಕೆರೆ ಗ್ರಾಮಗಳಲ್ಲಿ ಬೆಳಗ್ಗೆ 11 ಗಂಟೆಯ ವೇಳಗೆ ಶೇ40 ರಷ್ಟು ಮತದಾನವಾಗಿದ್ದರೆ, ನಗರ ಪ್ರದೇಶದ ಶಿರಾನಿ ಮೊಹಲ್ಲದಾ 11 ಬೂತ್ಗಳು, ಜೋತಿ ನಗರದ ಪದವಿಪೂರ್ವ ಮತ್ತು ಪದವಿ ಕಾಲೇಜುಗಳಲ್ಲಿ ಶೇ25ರಷ್ಟು ಮತದಾನವಾಗಿತ್ತು. ಆದರೆ 11 ಗಂಟೆಯ ನಂತರ ಮತದಾನ ಚುರುಕಿನಿಂದ ಕೂಡಿದ್ದು, ಮಧ್ಯಾಹ್ನ 1 ಗಂಟೆಯ ವೇಳೆ ಒಟ್ಟಾರೆ ಕ್ಷೇತ್ರದಲ್ಲಿ 44.13 ರಷ್ಟು ಮತದಾನವಾಗಿತ್ತು.
ಮಧ್ಯಾಹ್ನ 3 ಗಂಟೆಯ ವೇಳೆಗೆ 62.10ರಷ್ಟು ಮತದಾನವಾಗಿತ್ತು. ಸಂಜೆ 5 ರ ವೇಳೆ 77.34 ರಷ್ಟು ಮತದಾನವಾಗಿತ್ತು. ಮತದಾನದ ಕೊನೆಯ ಒಂದು ಗಂಟೆ ಕೋವಿಡ್ ಸೋಂಕಿತರು, ಹಿರಿಯ ಮತದಾರರಿಗೆ ಅವಕಾಶವಿದ್ದು, ಚುನಾವಣೆ ಸಿಬ್ಬಂದಿ ಪಿಪಿಇ ಕಿಟ್ ಧರಿಸಿ ಮತದಾನದಲ್ಲಿ ಪಾಲ್ಗೊಂಡಿದ್ದರು. ಒಟ್ಟಾರೆ ಮತದಾನ ಶೇ.82.31 ರಷ್ಟಾಗಿದೆ.
ಶಿರಾ ಪಟ್ಟಣದಲ್ಲಿ ಮಾದರಿ ಮತಗಟ್ಟೆ: ಮಹಿಳೆಯರು, ಪುರುಷರಿಗೆ, ಅಂಗವಿಕಲರಿಗೆ ಪ್ರತ್ಯೇಕ ದಾರಿಯ ವ್ಯವಸ್ಥೆ, ಪ್ರತಿದಾರಿಗೂ ರೆಡ್ಕಾರ್ಪೆಟ್ ಹಾಸುವ ಮೂಲಕ ಮತದಾರರಿಗೆ ಸ್ವಾಗತ ಕೋರುವ ಮಾದರಿ ಮತಗಟ್ಟೆಯನ್ನು ಶಿರಾ ನಗರದ ಜ್ಯೋತಿನಗರದ ಸರಕಾರಿ ಬಾಲಕಿಯ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಲಾಗಿತ್ತು. 455 ಜನ ಮತದಾರರನ್ನು ಒಳಗೊಂಡ ಈ ಮತಗಟ್ಟೆಯಲ್ಲಿ ಪ್ರವೇಶದ್ವಾರದಿಂದ ಮತಪೆಟ್ಟಿಗೆಯವರೆಗೆ ರೆಡ್ ಕಾರ್ಪೆಟ್ ಹಾಕಿದ್ದಲ್ಲದೆ, ದಾರಿಯ ಇಕ್ಕೆಲಗಳಲ್ಲಿ ಸುಂದರ ಬ್ಯಾರಿಕೇಡ್, ಮತದಾರರ ದೇಹದ ಉಷ್ಠಾಂಶ ಪರೀಕ್ಷಿಸಲು ಅಗತ್ಯ ಸೌಲಭ್ಯವನ್ನು ಒಳಗೊಂಡ ಥರ್ಮಲ್ ಸ್ಕ್ರಿನಿಂಗ್ ಸೆಂಟರ್ ಸೇರಿದಂತೆ ಹಲವು ವಿಶೇಷತೆಗಳನ್ನು ಈ ಮಾದರಿ ಮತಗಟ್ಟೆ ಹೊಂದಿತ್ತು.
ವಿಶೇಷವಾಗಿ ಮಾಡಿರುವ ಈ ಮತದಾನ ಕೇಂದ್ರಕ್ಕೆ ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಚುನಾವಣಾಧಿಕಾರಿ ಗಳಾದ ಡಾಕ್ಟರ್ ರಾಕೇಶ್ ಕುಮಾರ್ ಅವರು ಭೇಟಿ ನೀಡಿ ಪರಿಶೀಲಿಸಿ ಸಂತಸ ವ್ಯಕ್ತಪಡಿಸಿದರು.
ಶಿರಾ ತಾಲ್ಲೂಕಿನ ಚಿರತನಹಳ್ಳಿಯಲ್ಲಿ ಮತದಾನ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ಅಭ್ಯರ್ಥಿ ಡಾ.ರಾಜೇಶಗೌಡ ಶಿರಾ ಕ್ಷೇತ್ರದ ಮತದಾರರು ಈ ಬಾರಿ ನೂರಕ್ಕೆ ನೂರರಷ್ಟು ಕಮಲವನ್ನು ಅರಳಿಸುತ್ತಾರೆ ಎಂಬ ವಿಶ್ವಾಸವಿದೆ. ಭಾರತೀಯ ಜನತಾ ಪಾರ್ಟಿಯ ಜನಪರ ಕಾರ್ಯಕ್ರಮಗಳಿಗೆ ಕ್ಷೇತ್ರದ ಜನತೆ ಮನ್ನಣೆ ನೀಡುತ್ತಾರೆ. ಈ ಬಾರಿ ಶಿರಾದಲ್ಲಿ ತಮ್ಮ ಗೆಲುವು ಖಚಿತ. ಶಿರಾ ತಾಲೂಕಿನ ಸರ್ವಾಂಗೀಣ ಅಭಿವೃದ್ಧಿಗೆ ಬಿಜೆಪಿ ಬದ್ಧವಾಗಿದೆ. ಕ್ಷೇತ್ರದ ಮತದಾರರು ಸಹ ಪಕ್ಷದ ಗೆಲುವಿಗೆ ಸಕಾರಾತ್ಮಕ ಒಲವು ತೋರಿದ್ದಾರೆ. ಈಗಾಗಲೇ ನಮ್ಮ ಪಕ್ಷದ ನಾಯಕರು ಕ್ಷೇತ್ರ ಸರ್ವಾಂಗೀಣ ಅಭಿವೃದ್ಧಿಗೆ ಬದ್ಧರಾಗಿರುವುದಾಗಿ ಹೇಳಿದ್ದಾರೆ. ಕ್ಷೇತ್ರದ ಜನತೆಗೂ ಭರವಸೆ ನೀಡಿದ್ದಾರೆ. ಹಾಗಾಗಿ ಈ ಬಾರಿ ನಮ್ಮ ಗೆಲುವು ಶತಸಿದ್ದ ಎಂದರು.
ಚುನಾವಣಾ ಪ್ರಚಾರದ ವೇಳೆ ನಮ್ಮ ಪಕ್ಷದ ವತಿಯಿಂದ ಯಾರಿಗೂ ಅಕ್ರಮವಾಗಿ ಹಣ ಹಂಚಿಕೆ ಮಾಡಿಲ್ಲ. ಈ ಬಗ್ಗೆ ಪ್ರತಿಪಕ್ಷಗಳು ಮಾಡಿರುವ ಆರೋಪದಲ್ಲಿ ಹುರುಳಿಲ್ಲ ಎಂದರು.
ಮಾಜಿ ಸಚಿವ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ.ಜಯಚಂದ್ರ ಮಾತನಾಡಿ, ಶಿರಾ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಮತದಾನಕ್ಕೆ ಬಳಸಲಾಗಿರುವ ಇವಿಎಂ ಯಂತ್ರಗಳ ಬಗ್ಗೆ ಸಂಶಯ ವ್ಯಕ್ತಪಡಿಸಿದ್ದು, ಚುನಾವಣಾ ಆಯೋಗದ ವಿರುದ್ಧ ಕಿಡಿಕಾರಿದ್ದಾರೆ.
ಈ ಚುನಾವಣೆ ನನಗೆ 10ನೇ ಚುನಾವಣೆಯಾಗಿದೆ. ಆದರೆ ಹಿಂದೆಂದೂ ಕಾಣದಂತಹ ಭ್ರಷ್ಟಾಚಾರ ಈ ಚುನಾವಣೆಯಲ್ಲಿ ನಡೆಯುತ್ತಿದೆ. ಅಧಿಕಾರಿಗಳು ಪಕ್ಷವೊಂದರ ಏಜೆಂಟರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ, ಇದು ಅತ್ಯಂತ ಹೇಯ ಕೃತ್ಯವಾಗಿದೆ ಎಂದು ಆಕ್ರೋಶ ಹೊರ ಹಾಕಿದರು. ಈಗಾಗಲೇ ನಾನು ಚುನಾವಣಾಧಿಕಾರಿಗಳಿಗೆ ದೂರು ನೀಡಿದ್ದೇನೆ. ಆದರೂ ಯಾವುದೇ ಕ್ರಮವನ್ನು ಕೈಗೊಂಡಿಲ್ಲ ಎಂದು ದೂರಿದರು.
ರವಿವಾರ ಬೆಳಗ್ಗೆಯಿಂದ ಸಂಜೆಯವರೆಗೂ ಸುಮಾರು ನೂರಕ್ಕೂ ಹೆಚ್ಚು ಮಂದಿ ಹಾಸನ ಮೂಲದವರು ಮತದಾರರಿಗೆ ಹಣ ಹಂಚುವಾಗ ಸಿಕ್ಕಿ ಬಿದ್ದಿದ್ದಾರೆ. ಜನರು ಅವರನ್ನು ಕೂಡಿ ಹಾಕಿದ್ದರು. ಆದರೆ ಮಾನವೀಯತೆ ದೃಷ್ಟಿಯಿಂದ ಅವರನ್ನು ಬಿಟ್ಟು ಕಳುಹಿಸಲಾಗಿದೆ. ಪೊಲೀಸರು ಏಜೆಂಟರಂತೆ ವರ್ತಿಸುತ್ತಿದ್ದಾರೆ. ಇಂತಹ ಕೆಟ್ಟ ಚುನಾವಣೆಯನ್ನು ನನ್ನ ಜೀವಮಾನದಲ್ಲಿ ನೋಡಿಲ್ಲ ಎಂದು ಅವರು ಹೇಳಿದರು.
ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮ ಮಾತನಾಡಿ, ಜೆಡಿಎಸ್ ಪಕ್ಷದ ವರಿಷ್ಠರಾದ ದೇವೇಗೌಡರು, ಕುಮಾರಸ್ವಾಮಿ ಅವರು ಸೇರಿದಂತೆ ಶಿರಾ ತಾಲೂಕಿನ ಜನರು ಅನುಕಂಪದ ಅಲೆಯಲ್ಲಿ ಮತಚಲಾಯಿಸಿದ್ದಾರೆ. ನಾನು ಅವರಿಗೆ ಆಭಾರಿಯಾಗಿದ್ದೇನೆ. ನನ್ನ ಪತಿಯವರು ಸಹ ಕ್ಷೇತ್ರ ಅಭಿವೃದ್ಧಿಗಾಗಿ ಕೆಲಸ ಮಾಡಿದ್ದಾರೆ. ಇದೆಲ್ಲಾ ಜನರ ಮನಸ್ಸಿನಲ್ಲಿದೆ. ಹಾಗಾಗಿ ಕ್ಷೇತ್ರದ ಜನತೆ ತಮ್ಮನ್ನು ಆಶೀರ್ವದಿಸಲಿದ್ದಾರೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.
ಜಿಲ್ಲಾಡಳಿತ ಚುನಾವಣೆಯನ್ನು ಸಮರ್ಥವಾಗಿ ನಡೆಸಿದೆ: ಸೀಮಂತ್ ಕುಮಾರ್ ಸಿಂಗ್
ಶಿರಾ ಉಪಚುನಾವಣೆ ಆರಂಭವಾದಾಗಿನಿಂದ ಐದು ಬಾರಿ ಭೇಟಿ ನೀಡಿದ್ದೇನೆ. ನಮ್ಮ ಅಧಿಕಾರಿಗಳು ಸಮರ್ಥವಾಗಿ ಚುನಾವಣೆ ನಡೆಯೆಲು ಅಗತ್ಯ ಕ್ರಮ ಕೈಗೊಂಡಿದ್ದಾರೆ. ಹಲವಾರು ಪ್ರಕರಣಗಳನ್ನು ದಾಖಲಿಸಿ ಕೊಂಡು ತನಿಖೆ ಕೈಗೊಂಡಿದ್ದಾರೆ ಎಂದು ಕೇಂದ್ರ ವಲಯದ ಐಜಿಪಿ ಸೀಮಂತ್ ಕುಮಾರ್ ಸಿಂಗ್ ತಿಳಿಸಿದ್ದಾರೆ.