ಕ್ಷುಲ್ಲಕ ಕಾರಣಕ್ಕೆ ಸ್ನೇಹಿತರಿಬ್ಬರ ನಡುವೆ ಜಗಳ: ಓರ್ವನಿಗೆ ಚೂರಿ ಇರಿತ
ಮೈಸೂರು,ನ.4: ಜಿಲ್ಲೆಯ ನಂಜನಗೂಡು ತಾಲೂಕಿನ ತಾಂಡವಪುರ ಗ್ರಾಮದಲ್ಲಿ ಕ್ಷುಲ್ಲಕ ಕಾರಣಕ್ಕೆ ಸ್ನೇಹಿತರಿಬ್ಬರ ನಡುವೆ ಜಗಳ ನಡೆದಿದ್ದು, ಓರ್ವ ಮತ್ತೋರ್ವನಿಗೆ ಚಾಕುವಿನಿಂದ ಇರಿದಿರುವ ಘಟನೆ ನಡೆದಿದೆ.
ರೋಹನ್(19) ಚಾಕು ಇರಿತಕ್ಕೆ ಒಳಗಾದ ಯುವಕನಾಗಿದ್ದಾನೆ. ಕೊರೋನ ಹಿನ್ನೆಲೆ ಇಬ್ಬರೂ ರಜೆಯಲ್ಲಿದ್ದರು. ಲ್ಯಾಪ್ ಟಾಪ್ ನೋಡುವ ವೇಳೆ ಕ್ಷುಲ್ಲಕ ಕಾರಣಕ್ಕೆ ಇವರ ನಡುವೆ ಜಗಳ ಶುರುವಾಗಿದೆ. ಅದು ತಾರಕಕ್ಕೆ ಏರಿ ಇದ್ದಕ್ಕಿದ್ದಂತೆ ದಿಲ್ಶಾದ್, ರೋಹನ್ ಕುತ್ತಿಗೆಗೆ ಚಾಕುವಿನಿಂದ ಇರಿದಿದ್ದಾನೆ.
5ನೇ ತರಗತಿಯಿಂದಲೇ ದಿಲ್ಶಾದ್ ಮತ್ತು ರೋಹನ್ ಸ್ನೇಹಿತರು. ಸದ್ಯ ಇಬ್ಬರೂ ಇಂಜಿನಿಯರಿಂಗ್ ಓದುತ್ತಿದ್ದಾರೆ. ರೋಹನ್ ಮಂಗಳೂರಿನ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿ ಹಾಗೂ ದಿಲ್ಶಾದ್ ಮೈಸೂರಿನ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಯಾಗಿದ್ದಾನೆ.
ಘಟನೆ ನಂತರ ನಂಜನಗೂಡು ಪೊಲೀಸರು ದಿಲ್ಶಾದ್ ನನ್ನು ವಶಕ್ಕೆ ಪಡೆದಿದ್ದು, ರೋಹನ್ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾನೆ ಎಂದು ತಿಳಿದು ಬಂದಿದೆ.