ಸಿಬಿಐ ರಾಜಕೀಯ ಒತ್ತಡಕ್ಕೆ ಮಣಿಯಬಾರದು: ಡಿ.ಕೆ.ಶಿವಕುಮಾರ್
ಬೆಂಗಳೂರು, ನ. 5: `ಬಿಜೆಪಿ ರಾಜಕೀಯ ಕುತಂತ್ರ ಮಾಡುತ್ತಿದೆ. ಸಿಬಿಐ ಅಧಿಕಾರಿಗಳು ಒತ್ತಡಕ್ಕೆ ಮಣಿಯದೆ, ಕಾನೂನು ಚೌಕಟ್ಟಿನಲ್ಲಿ ವಿಚಾರಣೆ ನಡೆಸಲಿ. ನಮ್ಮ ಪಕ್ಷದ ಮುಖಂಡರು, ಕಾರ್ಯಕರ್ತರು ಯಾವುದೇ ತಪ್ಪು ಮಾಡಿಲ್ಲ, ಅವರ ಬೆನ್ನಿಗೆ ನಾವು ನಿಲ್ಲುತ್ತೇವೆ' ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇಂದಿಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ಗುರುವಾರ ಇಲ್ಲಿನ ಸದಾಶಿವನಗರದಲ್ಲಿರುವ ತನ್ನ ನಿವಾಸದ ಬಳಿ ಮಾಧ್ಯಮಗಳ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, `ನಾನು ಈಗಾಗಲೇ ನಮ್ಮ ಪಕ್ಷದ ಮುಖಂಡ ವಿನಯ್ ಕುಲಕರ್ಣಿ ಅವರ ಜತೆ ಈ ವಿಚಾರವಾಗಿ ಮಾತನಾಡಿದ್ದೇನೆ. ಅವರ ಪ್ರಕರಣವನ್ನು ರಾಜ್ಯ ಪೊಲೀಸರು ತನಿಖೆ ಮಾಡಿ ವರದಿ ಸಲ್ಲಿಸಿದ್ದಾರೆ. ಆದರೆ, ಆ ಭಾಗದ ಬಿಜೆಪಿ ನಾಯಕರು ಅವರನ್ನು ರಾಜಕೀಯವಾಗಿ ಮುಗಿಸಲು ಈ ಪ್ರಯತ್ನ ಮಾಡಿ, ಯಶಸ್ಸಾಗಿದ್ದಾರೆ. ಸಿಬಿಐ ಅಧಿಕಾರಿಗಳು ವಿನಯ್ ಕುಲಕರ್ಣಿ ಅವರ ಕಡೆಯವರನ್ನು ಕರೆದುಕೊಂಡು ಹೋಗಿ ವಿಚಾರಣೆ ನಡೆಸಿದ್ದಾರೆ. ನಾನು ಆ ಭಾಗಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಅವರು ತಮಗಾದ ತೊಂದರೆ ಹೇಳಿಕೊಂಡಿದ್ದಾರೆ ಎಂದರು.
ಸಿಬಿಐ ಅಧಿಕಾರಿಗಳು ತಮ್ಮ ಮೇಲೆ ಎಷ್ಟೇ ಒತ್ತಡ ಬಿದ್ದರೂ ಕಾನೂನಿನ ವ್ಯಾಪ್ತಿಯಲ್ಲೇ ಕೆಲಸ ಮಾಡಬೇಕಿದೆ. ವಿಚಾರಣೆ ಮಾಡಿ. ಒಂದು ಬಾರಿ ಸಾಲದಿದ್ದರೆ ಹತ್ತು ಬಾರಿ ಕರೆದು ವಿಚಾರಣೆ ಮಾಡಲಿ. ಆದರೆ, ರಾಜಕೀಯ ಒತ್ತಡಕ್ಕೆ ತಲೆ ಬಾಗಬೇಡಿ. ಇದು ಯಾವುದು ಶಾಶ್ವತವಲ್ಲ. ನಮ್ಮ ಪಕ್ಷದ ನಾಯಕ ಕೆ.ಜೆ.ಜಾರ್ಜ್ ಅವರಿಗೆ ಎಷ್ಟು ಕಿರುಕುಳ ನೀಡಿದರು. ಕೊನೆಗೆ ಅವರು ರಾಜೀನಾಮೆ ಕೊಟ್ಟರು. ಆದರೆ, ಇವತ್ತು ಅವರಿಗೆ ನ್ಯಾಯಾಲಯದಲ್ಲಿ ಕ್ಲೀನ್ಚಿಟ್ ಸಿಕ್ಕಿದೆ. ಇಂತಹ ಅನೇಕ ಘಟನೆಗಳಿವೆ ಎಂದು ವಿವರಿಸಿದರು.
ರಾಜಕೀಯದಲ್ಲಿ ಕಾಲಚಕ್ರ ತಿರುಗುತ್ತಿರುತ್ತದೆ. ಹೀಗಾಗಿ ಕಾನೂನು ವ್ಯಾಪ್ತಿಯಲ್ಲಿ ಕೆಲಸ ಮಾಡಿ, ಒತ್ತಡಕ್ಕೆ ಮಣಿಯಬೇಡಿ ಎಂದು ಸಿಬಿಐ ಅಧಿಕಾರಿಗಳಿಗೆ ಮನವಿ ಮಾಡುತ್ತೇನೆ. ನಿಮ್ಮ ಕಚೇರಿ ರಾಜಕೀಯ ಅಸ್ತ್ರವಾಗಬಾರದು. ಕೆಲವು ಬಿಜೆಪಿ ನಾಯಕರು ಈ ಬೆಳವಣಿಗೆಯನ್ನು ಆನಂದಿಸುತ್ತಿದ್ದಾರೆ. ಇದು ಹೆಚ್ಚು ದಿನ ಉಳಿಯಲ್ಲ. ಈ ದೇಶದ ಕಾನೂನು, ಸಂವಿಧಾನ ವ್ಯವಸ್ಥೆ ಬಗ್ಗೆ ನಮಗೆ ಗೌರವವಿದೆ. ನಮ್ಮ ನಾಯಕರು ಹಾಗೂ ಕಾರ್ಯಕರ್ತರು ಯಾವುದೇ ರೀತಿಯ ತಪ್ಪು ಮಾಡಿಲ್ಲ. ಅವರಿಗೆ ಕಾನೂನಿನ ರಕ್ಷಣೆ ಸಿಗುತ್ತದೆ. ಚುನಾವಣೆ ಮುನ್ನ ಹಾಗೂ ನಂತರ ಈ ರೀತಿ ಬೆದರಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಶಿವಕುಮಾರ್ ಟೀಕಿಸಿದರು.
ಸರಕಾರದ ಸಚಿವರೇ ಆಮಿಷ ತೋರಿಸಿ ನಮ್ಮ ನಾಯಕರನ್ನು ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಅವರ ಪ್ರಕರಣದಲ್ಲೇ ಪ್ರಧಾನಿ ಭಾಷಣ ಮಾಡಿದರೂ ಕ್ರಮ ಯಾಕೆ ತೆಗೆದುಕೊಳ್ಳಲಿಲ್ಲ? ಬೇರೆ ಪಕ್ಷದಲ್ಲಿ ಕೆಟ್ಟವರಾಗಿದ್ದವರು ಅವರ ಪಕ್ಷಕ್ಕೆ ಸೇರಿದ ನಂತರ ಗಂಗಾ ಜಲದಂತೆ ಪವಿತ್ರರಾಗುತ್ತಾರಾ? ನಿಮ್ಮ ಪ್ರಧಾನಿ ಭಾಷಣ ಮಾಡಿದ್ದು, ನಿಜವೋ, ಸುಳ್ಳೋ ಎಂಬುದನ್ನು ಬಿಜೆಪಿ ನಾಯಕರು ಉತ್ತರಿಸಲಿ ಎಂದು ಶಿವಕುಮಾರ್ ತಿರುಗೇಟು ನೀಡಿದರು.
ಈ ಪ್ರಕರಣದ ತನಿಖೆ ಮುಗಿಯಲಿ, ನಂತರ ನಾವು ಮಾತನಾಡುತ್ತೇವೆ. ಪ್ರತಿಯೊಬ್ಬ ಬಿಜೆಪಿ ನಾಯಕರ ಹೇಳಿಕೆಯೂ ರಾಜಕೀಯ ಉದ್ದೇಶಿತವೇ. ಅವರು ಈ ವ್ಯವಸ್ಥೆ ತಮ್ಮ ಮನೆ ಸ್ವತ್ತು ಎಂದು ತಿಳಿದುಕೊಂಡಿದ್ದಾರೆ. ಇಂತಹ ಒತ್ತಡಗಳಿಗೆ ನಾವು ಮಣಿಯುವುದಿಲ್ಲ. ತಪ್ಪು ಮಾಡದ ನಮ್ಮ ನಾಯಕರನ್ನು ನಾವು ರಕ್ಷಿಸುತ್ತೇವೆ. ಈ ದೇಶದಲ್ಲಿ ಎಲ್ಲೆಲ್ಲಿ ಯಾವ ರೀತಿ ಕಾನೂನು ಇದೆ. ಪೊಲೀಸರು ಯಾವ ರೀತಿ ನಡೆದುಕೊಳ್ಳುತ್ತಿದ್ದಾರೆಂಬುದನ್ನು ಗಮನಿಸುತ್ತಿದ್ದೇವೆ. ಹೀಗಾಗಿ ಅರ್ನಾಬ್ ಗೋಸ್ವಾಮಿ ಬಂಧನದ ಕುರಿತು ನಾನು ಪ್ರತಿಕ್ರಿಯೆ ನೀಡುವುದಿಲ್ಲ ಎಂದು ನಿರಾಕರಿಸಿದರು.