ಕಿಸಾನ್ ಸಮ್ಮಾನ್ ಯೋಜನೆ: ಸುಳ್ಳು ಮಾಹಿತಿ ನೀಡಿ ಸಹಾಯಧನ ಪಡೆದ 85 ಸಾವಿರಕ್ಕೂ ಅಧಿಕ ರೈತರು !
ಬೆಂಗಳೂರು, ನ.5: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ಸುಳ್ಳು ಮಾಹಿತಿ ನೀಡಿ ಸಹಾಯಧನ ಪಡೆದ ರಾಜ್ಯದ ರೈತರಿಗೆ ಹಣ ಹಿಂದಿರುಗಿಸುವಂತೆ ನೋಟಿಸ್ ಜಾರಿಮಾಡಲು ಕೃಷಿ ಇಲಾಖೆ ನಿರ್ದೇಶಕ ಬಿ.ವೈ.ಶ್ರೀನಿವಾಸ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ರಾಜ್ಯದ ಅನೇಕ ರೈತರು ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಿಂದ ಸಹಾಯಧನ ಪಡೆಯಲು ಸುಳ್ಳು ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಇಂತಹ ರೈತರ ಬಗ್ಗೆ ಮಾಹಿತಿ ಕಲೆ ಹಾಕಿರುವ ರಾಜ್ಯ ಕೃಷಿ ಇಲಾಖೆ, ಸುಳ್ಳು ಮಾಹಿತಿ ನೀಡಿ ಯೋಜನೆಯಿಂದ ಸಹಾಯಧನ ಪಡೆದ ರೈತರಿಗೆ ಹಣ ಹಿಂದಿರುಗಿಸುವಂತೆ ನೋಟಿಸ್ ಜಾರಿ ಮಾಡಿದೆ.
ರಾಜ್ಯದಲ್ಲಿ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಿಂದ ಸಹಾಯಧನ ಪಡೆಯಲು ಈಗಾಗಲೇ ಆದಾಯ ತೆರಿಗೆ ಪಾವತಿಸುತ್ತಿರುವ 85,208 ರೈತರು ಸುಳ್ಳು ಮಾಹಿತಿ ನೀಡಿ ಸಹಾಯಧನ ಪಡೆದು ವಂಚಿಸಿರುವುದನ್ನು ಕೃಷಿ ಇಲಾಖೆ ಪತ್ತೆ ಹಚ್ಚಿದೆ.
ಕೇಂದ್ರ ಕೃಷಿ ಸಚಿವಾಲಯ ಪಿಎಂ ಕಿಸಾನ್ ಸಮ್ಮಾನ್ ನಿಧಿಯ ಸಹಾಯಧನ ಪಡೆದ ಫಲಾನುಭವಿಗಳ ಆಧಾರ ಕಾರ್ಡ್ ಸಂಖ್ಯೆ ಹಾಗೂ ಬ್ಯಾಂಕ್ ಖಾತೆ ವಿವರ ಪರಿಶೀಲನೆ ನಡೆಸಿದೆ. ಹೀಗೆ ಪರಿಶೀಲನೆ ನಡೆಸಿದ ವೇಳೆಯಲ್ಲಿ ರಾಜ್ಯದ 85,208 ರೈತರು ಆದಾಯ ತೆರಿಗೆ ಪಾವತಿಸುತ್ತಿದ್ದರೂ, ಪಿಎಂ ಕಿಸಾನ್ ಸಮ್ಮಾನ್ ನಿಧಿಯಿಂದ ಸಹಾಯಧನ ಪಡೆದಿರುವುದು ಪತ್ತೆಯಾಗಿದೆ.
ಹೀಗಾಗಿ ಜಿಲ್ಲಾ ರೈತ ಸಂಪರ್ಕ ಕೇಂದ್ರಗಳ ಕೃಷಿ ಅಧಿಕಾರಿಗಳು, ಸಹಾಯಧನ ಪಡೆದು ವಂಚಿಸಿದ ರೈತರಿಂದ ಸಹಾಯಧನ ವಸೂಲಿಗೆ ಮುಂದಾಗಿದ್ದಾರೆ. ಡಿಮಾಂಡ್ ಡ್ರಾಫ್ಟ್(ಡಿಡಿ) ಮೂಲಕ ಸಹಾಯಕ ನಿರ್ದೇಶಕರ ಕಚೇರಿಗೆ ಸಹಾಯಧನ ಹಿಂದಿರುಗಿಸುವಂತೆ ರೈತರಿಗೆ ನೋಟಿಸ್ ಜಾರಿ ಮಾಡಲಾಗಿದೆ.