ವಿನಯ್ ಕುಲಕರ್ಣಿ ಬಿಜೆಪಿ ಹೈಕಮಾಂಡ್ ಭೇಟಿಗೆ ಹೋಗಿದ್ದು ನಿಜ: ಬಸವರಾಜ ಹೊರಟ್ಟಿ

Update: 2020-11-05 16:00 GMT

ಹುಬ್ಬಳ್ಳಿ, ನ.5: ಈ ಹಿಂದೆ ಬಿಜೆಪಿಯವರು ಸಿಬಿಐಯನ್ನು ಕಾಂಗ್ರೆಸ್ ಕೈಗೊಂಬೆ ಅಂತಿದ್ದರು. ಈಗ ಕಾಂಗ್ರೆಸ್‍ನವರು ಸಿಬಿಐ ಬಿಜೆಪಿ ಕೈಗೊಂಬೆ ಅಂತಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಬಸವರಾಜ್ ಹೊರಟ್ಟಿ ಹೇಳಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯೋಗೇಶ್‍ಗೌಡ ಹತ್ಯೆಗೆ ಸಂಬಂಧಿಸಿದಂತೆ ಮಾಜಿ ಸಚಿವ ವಿನಯ್ ಕುಲಕರ್ಣಿ ಅವರನ್ನು ಸಿಬಿಐ ತಂಡ ವಿಚಾರಣೆ ಮಾಡುತ್ತಿದೆ. ಕಾನೂನು ಎಲ್ಲರಿಗೂ ಒಂದೇ. ಇದರಲ್ಲಿ ರಾಜಕೀಯ ಮಾಡಬಾರದು ಎಂದರು.

ಸಿಬಿಐ ಆಗಲಿ, ಯಾರೇ ಆಗಲಿ ಕಾನೂನು ಕೈಗೆ ತೆಗೆದುಕೊಳ್ಳಬಾರದು. ಕಾನೂನು ಎಲ್ಲರಿಗೂ ಒಂದೇ. ಇಂತಹ ಸಂಸ್ಥೆಗಳನ್ನ ಅಧಿಕಾರಕ್ಕೆ ಬಂದ ಪಕ್ಷಗಳು ದುರುಪಯೋಗ ಮಾಡಿಕೊಳ್ಳಬಾರದು ಎಂದರು.

ವಿನಯ್ ಕುಲಕರ್ಣಿ ಬಿಜೆಪಿ ಸೇರ್ಪಡೆ ಬಗ್ಗೆ ಮಾತನಾಡಿ, ಅವರು ಬಿಜೆಪಿ ಸೇರುವುದಿಲ್ಲ. ಇದೇ ಕಾರಣಕ್ಕೆ ಇವತ್ತು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ಸಾರ್ವಜನಿಕರು ಚರ್ಚೆ ಮಾಡುವಂತಾಗಿದೆ. ಬಿಜೆಪಿ ಹೈಕಮಾಂಡ್ ಭೇಟಿಗೆ ವಿನಯ್ ಕುಲಕರ್ಣಿ ಹೋಗಿದ್ದು ನಿಜ. ಆದರೆ ಯಾರು ಯಾರನ್ನು ಕರೆದಿದ್ದರು ಎನ್ನುವುದು ಗೊತ್ತಿಲ್ಲ. ಇದು ರಾಜಕೀಯ ಒತ್ತಡದಿಂದ ಆಗಿರಬಹುದು ಎಂದು ಅಭಿಪ್ರಾಯಪಟ್ಟರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News