ಲಂಚ ಪಡೆಯುವಾಗ ಎಸಿಬಿ ಬಲೆಗೆ ಬಿದ್ದ ಶಿಶು ಅಭಿವೃದ್ಧಿ ಯೋಜನಾಧಿಕಾರಿ
ಬೀದರ್, ನ.6: ಹುಮನಾಬಾದ್ ತಾಲೂಕಿನ ಶಿಕ್ಷಕಿಯೊಬ್ಬರನ್ನು ಘೋಡವಾಡಿ ಅಂಗನವಾಡಿ ಕೇಂದ್ರಕ್ಕೆ ವರ್ಗಾವಣೆ ಮಾಡುವ ವಿಷಯಕ್ಕೆ ಸಂಬಂಧಿಸಿದಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಯೋಜನಾಧಿಕಾರಿ(ಸಿಡಿಪಿಒ) ಶೋಭಾ ಕಟ್ಟಿ 30 ಸಾವಿರ ಲಂಚ ಪಡೆಯುತ್ತಿರುವಾಗ ಭ್ರಷ್ಟಾಚಾರ ನಿಗ್ರಹ ದಳದ ಬಲೆಗೆ ಬಿದ್ದಿದ್ದಾರೆ.
ಶಿಕ್ಷಕಿ ಅಂಬಿಕಾ ಸಿದ್ದಾರ್ಥ ಡಾಂಗೆ ಅವರು ಸೀತಾಗೇರಾ ಗ್ರಾಮದ ಅಂಗನವಾಡಿ ಕೇಂದ್ರದಿಂದ ಘೋಡವಾಡಿ ಅಂಗನವಾಡಿ ಕೇಂದ್ರಕ್ಕೆ ವರ್ಗಾವಣೆ ಮಾಡುವಂತೆ ಸಿಡಿಪಿಒ ಶೋಭಾ ಕಟ್ಟಿ ಅವರಿಗೆ ಹಲವಾರು ಬಾರಿ ಮನವಿ ಪತ್ರ ಸಲ್ಲಿಸಿದ್ದರು.
ವರ್ಗಾವಣೆಗಾಗಿ ಸಿಡಿಪಿಒ ಅವರು 50 ಸಾವಿರ ಲಂಚದ ಬೇಡಿಕೆ ಇಟ್ಟಿದ್ದರು. ಮೊದಲ ಕಂತಿನಲ್ಲಿ 30 ಸಾವಿರ ರೂಪಾಯಿ ನೀಡಬೇಕು. ಬಳಿಕ 20 ಸಾವಿರ ಕೊಡಬೇಕು ಎಂದು ಹೇಳಿದ್ದರಿಂದ ಅಂಬಿಕಾ ಅವರ ಪತಿ ಸಿದ್ದಾರ್ಥ ಡಾಂಗೆ ಎಸಿಬಿಗೆ ದೂರು ನೀಡಿದ್ದರು.
ಎಸಿಬಿ ಅಧಿಕಾರಿಗಳು ಶುಕ್ರವಾರ ದಾಳಿ ನಡೆಸಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಭ್ರಷ್ಟಾಚಾರ ನಿಗ್ರಹ ದಳದ ರಮೇಶ ಬೀಜಲವಾಡೆ, ಶ್ರೀಕಾಂತ ಸ್ವಾಮಿ, ಅನಿಲ್ ಕುಮಾರ್ ಪರಶೆಟ್ಟಿ, ಕಿಶೋರ ಗಾಜರೆ, ಸರಸ್ವತಿ ರಾಘವೇಂದ್ರ ವಿಠಲ್ ಇದ್ದರು.