ಲವ್‍ ಜಿಹಾದ್ ಬಗ್ಗೆ ಬಿಜೆಪಿಗರ ಹೇಳಿಕೆ ದ್ವೇಷಪೂರಿತ ರಾಜಕೀಯ ಷಡ್ಯಂತ್ರ: ಪಿಎಫ್‍ಐ

Update: 2020-11-06 14:06 GMT

ಬೆಂಗಳೂರು, ನ.6: ದೇಶದಲ್ಲಿ ಲವ್ ಜಿಹಾದ್ ಎಂಬುದು ಅಸ್ತಿತ್ವವೇ ಇಲ್ಲವೆಂದು ಪೊಲೀಸರು, ತನಿಖಾ ಏಜೆನ್ಸಿಗಳು, ಕೇಂದ್ರ ಸರಕಾರವು ಈಗಾಗಲೇ ಸ್ಪಷ್ಟಪಡಿಸಿವೆ. ಆದರೂ ರಾಜ್ಯ ಬಿಜೆಪಿ ನಾಯಕರು ಲವ್ ಜಿಹಾದ್ ಕುರಿತು ನೀಡುತ್ತಿರುವ ಹೇಳಿಕೆಗಳು ಹಾಸ್ಯಾಸ್ಪದ ಹಾಗೂ ದ್ವೇಷಪೂರಿತ ರಾಜಕೀಯ ಷಡ್ಯಂತ್ರವಾಗಿದೆ ಎಂದು ಪಿಎಫ್‍ಐ ರಾಜ್ಯಾಧ್ಯಕ್ಷ ಯಾಸೀರ್ ಹಸನ್ ಆರೋಪಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಲವ್ ಜಿಹಾದ್ ಬಗ್ಗೆ ತನಿಖೆ ನಡೆಸಿರುವ ಕೇರಳ ಹಾಗೂ ಕರ್ನಾಟಕದ ಪೊಲೀಸರು ಇಂತಹ ಆರೋಪ ನಿರಾಧಾರ ಎಂಬ ತೀರ್ಮಾನಕ್ಕೆ ಬಂದಿದ್ದಾರೆ. ಲವ್ ಜಿಹಾದ್ ಎಂಬುದು ಸಮಾಜದಲ್ಲಿ ಧಾರ್ಮಿಕ ಧ್ರುವೀಕರಣ ನಡೆಸಲು ಬಲಪಂಥೀಯ ಹಿಂದುತ್ವ ಶಕ್ತಿಗಳು ಪ್ರಾರಂಭಿಸಿದ ಭೀಕರ ಹಾಗೂ ದುರಾಲೋಚನೆಯ ಪರಿಣಾಮಗಳಿಂದ ನಡೆಸಿದ ಕೆಡುಕಿನ ಅಭಿಯಾನವಾಗಿದೆ ಎಂದು ಎನ್‍ಐಎ ತನಿಖೆ ಧೃಡಪಡಿಸಿದೆ ಎಂದು ತಿಳಿಸಿದ್ದಾರೆ.

ಈ ವರ್ಷದ ಫೆಬ್ರವರಿಯಲ್ಲಿ ಕೇಂದ್ರದ ಬಿಜೆಪಿ ಸರಕಾರ ಲವ್ ಜಿಹಾದ್ ಪ್ರಕರಣಗಳು ವರದಿಯಾಗಿಲ್ಲ ಎಂಬ ಲಿಖಿತ ಉತ್ತರವನ್ನು ಸಂಸತ್ತಿಗೆ ನೀಡಿತ್ತು. ಆದಾಗ್ಯೂ, ರಾಜ್ಯದ ಬಿಜೆಪಿ ನಾಯಕರು ಕಲ್ಪಿತ ಲವ್ ಜಿಹಾದ್‍ಗೆ ಮತ್ತೆ ಜೀವ ತುಂಬಿ ತಮ್ಮ ವಿಭಜನಕಾರಿ ಅಜೆಂಡಾವನ್ನು ಕಾರ್ಯರೂಪಕ್ಕೆ ತರಲು ಪ್ರಯತ್ನಿಸುತ್ತಿರುವುದು ನಾಚಿಕೆಗೇಡಿನ ವಿಚಾರವೆಂದು ಅವರು ಟೀಕಿಸಿದ್ದಾರೆ.

ಮತಾಂತರ ನಿಷೇಧ ಕಾಯ್ದೆ ತರುವ ಕುರಿತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಇತರೆ ಸಚಿವರು ಹೇಳಿಕೆಗಳನ್ನು ನೀಡುತ್ತಿದ್ದಾರೆ. ವಾಸ್ತವದಲ್ಲಿ ಮತಾಂತರ ನಿಷೇಧ ಕಾಯ್ದೆಯು ಸಂವಿಧಾನವು ನಾಗರಿಕರಿಗೆ ಖಾತರಿಪಡಿಸಿದ ಧಾರ್ಮಿಕ ಸ್ವಾತಂತ್ರ್ಯದ ಮೇಲಿನ ಆಕ್ರಮಣವಾಗಿದೆ. ಇಲ್ಲದ ಲವ್ ಜಿಹಾದ್ ಕುರಿತು ಪ್ರಚೋದನಾಕಾರಿ ಹೇಳಿಕೆ ನೀಡುವ ಮೂಲಕ ಬಿಜೆಪಿ ನಾಯಕರು ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.

ಮಂದಿರ ನಿರ್ಮಾಣ, ಗೋಹತ್ಯೆ, ಘರ್ ವಾಪ್ಸಿಯಂತೆ ಲವ್ ಜಿಹಾದ್ ಕೂಡ ಬಿಜೆಪಿಯ ಭಾವನಾತ್ಮಕ ರಾಜಕೀಯದ ಅಸ್ತ್ರವಾಗಿದೆ. ಸಂಘಪರಿವಾರವು 2009ರಲ್ಲಿ ಚಾಲ್ತಿಗೆ ತಂದ ಕಪೋಲಕಲ್ಪಿತ ಲವ್ ಜಿಹಾದ್, ಧರ್ಮಗಳ ಮಧ್ಯೆ ಪರಸ್ಪರ ಅಪನಂಬಿಕೆ ಸೃಷ್ಟಿಸುವಲ್ಲಿ ಯಶಸ್ವಿಯಾಗಿದೆ. ಬಿಜೆಪಿ-ಸಂಘಪರಿವಾರದ ದ್ವೇಷಪೂರಿತ ಮತ್ತು ಕೋಮು ಧ್ರುವೀಕರಣದ ರಾಜಕೀಯದ ವಿರುದ್ಧ ಜನತೆ ಜಾಗೃತರಾಗಬೇಕೆಂದು ಅವರು ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News