ಶಾಲಾ-ಕಾಲೇಜು ಆರಂಭಿಸುವ ಉಮೇದಿಯಿಂದ ಸರಕಾರ ಹಿಂದೆ ಸರಿಯಲಿ: ಕುಮಾರಸ್ವಾಮಿ

Update: 2020-11-06 16:13 GMT

ಬೆಂಗಳೂರು, ನ. 6: `ಶಾಲಾ-ಕಾಲೇಜು ಆರಂಭಿಸುವ ವಿಚಾರದಲ್ಲಿ ಮಾತ್ರ ಸರಕಾರ ಮೈಯೆಲ್ಲ ಕಣ್ಣಾಗಿರಬೇಕು. ಈಗ ಶಾಲಾ-ಕಾಲೇಜು ಆರಂಭಿಸುವ ಉಮೇದಿಯಿಂದ ಸರಕಾರ ಹಿಂದೆ ಸರಿಯಬೇಕೆಂದು ಮತ್ತೊಮ್ಮೆ ಆಗ್ರಹಿಸುತ್ತೇನೆ' ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ತಿಳಿಸಿದ್ದಾರೆ.

ಶುಕ್ರವಾರ ಸರಣಿ ಟ್ವೀಟ್ ಮಾಡಿರುವ ಅವರು, `ರಾಜ್ಯದಲ್ಲಿ ಶಾಲಾ-ಕಾಲೇಜುಗಳ ಆರಂಭಕ್ಕೆ ಆತುರದ ನಿರ್ಧಾರ ಕೈಗೊಂಡರೆ ವಿದ್ಯಾರ್ಥಿಗಳು ಹಾಗೂ ಶಿಕ್ಷಕ ಸಮುದಾಯದ ಮಾರಣಹೋಮಕ್ಕೆ ನಾಂದಿ ಹಾಡಿದಂತಾಗುತ್ತದೆ.. ಹುಷಾರ್...!! ಇಂತಹ ಯಾವುದೇ ನಿರ್ಧಾರ ತಕ್ಷಣ ಕೈಗೊಳ್ಳಬಾರದು' ಎಂದು ಸಲಹೆ ಮಾಡಿದ್ದಾರೆ.

`ಶಾಲಾ-ಕಾಲೇಜುಗಳ ಆರಂಭಕ್ಕೆ ಶಿಕ್ಷಕ ಸಮುದಾಯ, ಶಾಲಾಭಿವೃದ್ಧಿ ಉಸ್ತುವಾರಿ ಸಮಿತಿ(ಎಸ್‍ಡಿಎಂಸಿ) ಹಾಗೂ ಪೋಷಕರ ಅಭಿಪ್ರಾಯವನ್ನು ರಾಜ್ಯ ಸರಕಾರ ಸಂಗ್ರಹಿಸುತ್ತಿರುವುದೇನೋ ಸರಿ. ಆದರೆ, ಅತಿರೇಕದ ನಿರ್ಧಾರ ಅನಾಹುತಕ್ಕೆ ದಾರಿಯಾಗುತ್ತದೆ ಎಚ್ಚರ. ನೆರೆಯ ಆಂಧ್ರ ಪ್ರದೇಶದಲ್ಲಿ ಶಾಲೆ ಆರಂಭವಾದ ಮೂರೇ ದಿನದಲ್ಲಿ 260ಕ್ಕೂ ಹೆಚ್ಚು ಮಕ್ಕಳು ಹಾಗೂ 160ಕ್ಕೂ ಹೆಚ್ಚು ಶಿಕ್ಷಕರಿಗೆ ಕೊರೋನ ಸೋಂಕು ತಗುಲಿರುವ ವರದಿ ತೀವ್ರ ಆತಂಕಕಾರಿ ಬೆಳವಣಿಗೆ. ಇದು ರಾಜ್ಯದಲ್ಲಿ ಪೋಷಕರ ಜಂಘಾಬಲವನ್ನೇ ಉಡುಗಿಸಿದೆ' ಎಂದು ತಿಳಿಸಿದ್ದಾರೆ.

`ಸರಕಾರ ಜನಾಭಿಪ್ರಾಯ ಸಂಗ್ರಹಿಸಲಿ. ಆದರೆ, ವಿದ್ಯಾರ್ಥಿಗಳು ಮತ್ತು ಶಿಕ್ಷಕ ಸಮುದಾಯದ ಪ್ರಾಣದೊಂದಿಗೆ ಚೆಲ್ಲಾಟವಾಡುವುದು ಯಾವುದೇ ಕಾರಣಕ್ಕೂ ನಾಗರಿಕ ಸಮಾಜ ಒಪ್ಪದು. ಈ ಹಿಂದೆಯೇ ಸರಕಾರಕ್ಕೆ ಶಾಲಾ-ಕಾಲೇಜುಗಳನ್ನು ಆರಂಭಿಸುವುದು ಬೇಡ ಎಂದು ಸಲಹೆ ನೀಡಿದ್ದೆ. ಮದ್ದಿಲ್ಲದ ಕೊರೋನ ಸೋಂಕು ವ್ಯಾಪಕವಾಗುತ್ತಿರುವ ಇಂತಹ ಕಾಲಘಟ್ಟದಲ್ಲಿ ಶಾಲಾ-ಕಾಲೇಜುಗಳನ್ನು ಆರಂಭಿಸುವ ನಿರ್ಧಾರದಿಂದ ಹಿಂದೆ ಸರಿಯಲೇಬೇಕು. ಇಲ್ಲದಿದ್ದರೆ ಸರಕಾರವೇ ಮುಂದಿನ ಎಲ್ಲ ಅನಾಹುತಗಳ ಹೊಣೆ ಹೊರಬೇಕಾಗುತ್ತದೆ' ಎಂದು ಕುಮಾರಸ್ವಾಮಿ ಎಚ್ಚರಿಕೆ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News