ಬಹುಕೋಟಿ ಟೆಂಡರ್ ರದ್ದು ಮಾಡಲು ಒತ್ತಾಯಿಸಿ ವಿದ್ಯುತ್ ಗುತ್ತಿಗೆದಾರರ ಧರಣಿ
Update: 2020-11-06 22:44 IST
ಮೈಸೂರು,ನ.6: ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ (ಸೆಸ್ಕ್) ವ್ಯಾಪ್ತಿಯ ಬಹುಕೋಟಿ ಟೆಂಡರ್ ರದ್ದು ಮಾಡಿ, ಅದನ್ನು 1 ಲಕ್ಷದಿಂದ ರೂ 5 ಲಕ್ಷ ದವರೆಗೆ ತುಂಡು ಗುತ್ತಿಗೆಯಾಗಿ ಸ್ಥಳೀಯ ಗುತ್ತಿಗೆದಾರರಿಗೆ ನೀಡುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರ ಸಂಘದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ನಗರದ ಹುಣಸೂರು ರಸ್ತೆಯಲ್ಲಿರುವ ಹಿನಕಲ್ ಬಳಿಯ ಚಾಮುಂಡೇಶ್ವರಿ ವಿದ್ಯುತ್ ಸಬರಾಜು ನಿಗಮ ನಿಯಮಿತ ಕಾರ್ಯಾಲಯ ಕಚೇರಿ ಬಳಿ ಶುಕ್ರವಾರ ಜಮಾವಣೆಗೊಂಡ ಪ್ರತಿಭಟನಕಾರರು ಬೇಡಿಕೆ ಈಡೇರಿಸುವಂತೆ ವಿವಿಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ತುಂಡು ಗುತ್ತಿಗೆ ಬೇಕು, ಎಲ್ ಸಿ ಬಿಲ್ ಕೂಡಲೇ ನೀಡಬೇಕು, ಬಹುಕೋಟಿ ಟೆಂಡರ್ ರದ್ದಾಗಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದರು.
ಸಂಘದ ಅಧ್ಯಕ್ಷ ಧರ್ಮವೀರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಹಲವಾರು ವಿದ್ಯುತ್ ಗುತ್ತೆಗೆದಾರರು ಭಾಗವಹಿಸಿದ್ದರು.