ಎಲ್.ಕೆ.ಅಡ್ವಾಣಿಗೆ 'ಭಾರತ ರತ್ನ' ನೀಡುವಂತೆ ಪ್ರಧಾನಿ ಮೋದಿಗೆ ಪತ್ರ

Update: 2020-11-09 12:38 GMT

ಬೆಂಗಳೂರು, ನ.9: ಸಾರ್ವಜನಿಕ ಜೀವನದಲ್ಲಿ ಸೇವೆ ಸಲ್ಲಿಸಿರುವ ಹಾಗೂ ಬಿಜೆಪಿ ಪಕ್ಷದ ಹಿರಿಯ ನಾಯಕರಾಗಿರುವ ಎಲ್.ಕೆ.ಅಡ್ವಾಣಿಯು ಭಾರತ ರತ್ನಕ್ಕೆ ಅರ್ಹತೆ ಹೊಂದಿದ್ದು, ಅವರ ಹೆಸರನ್ನು ಭಾರತ ರತ್ನಕ್ಕೆ ಪರಿಗಣಿಸಬೇಕು ಎಂದು ವಿಧಾನಪರಿಷತ್‍ನ ಮಾಜಿ ಸಭಾಪತಿ ಡಿ.ಎಚ್.ಶಂಕರಮೂರ್ತಿ ಪ್ರಧಾನಿ ಮೋದಿಗೆ ಪತ್ರ ಬರೆದಿದ್ದಾರೆ.

ಕಳೆದ ಏಳೂವರೆ ದಶಕಗಳಿಂದ ಸಾರ್ವಜನಿಕ ಜೀವನದಲ್ಲಿ ಅಡ್ವಾಣಿ ಸೇವೆ ಸಲ್ಲಿಸಿದ್ದಾರೆ, ಆರೆಸ್ಸೆಸ್, ಭಾರತೀಯ ಜನ ಸಂಘ ಮತ್ತು ಬಿಜೆಪಿ ಮೂಲಕ ಜನಸೇವೆ ಸಲ್ಲಿಸಿದ್ದಾರೆ. ಅವರ ಸಲ್ಲಿಸಿರುವ ಸೇವೆ ಹಾಗೂ ನೀಡಿದ ಕೊಡುಗೆ ಅದ್ಭುತವಾಗಿದೆ. ಅವರ ವೈಯಕ್ತಿಕ ಮತ್ತು ಸಾರ್ವಜನಿಕ ಜೀವನದಲ್ಲಿ ಸ್ವಚ್ಛ, ಪ್ರಾಮಾಣಿಕ ಹಾಗೂ ಅತ್ಯಂತ ವಿಶ್ವಾಸಾರ್ಹತೆ ಹೊಂದಿರುವ ನಾಯಕರಾಗಿದ್ದಾರೆ.

ರಾಷ್ಟ್ರೀಯ ಮತ್ತು ಅಂತರ್‍ರಾಷ್ಟ್ರೀಯ ವ್ಯವಹಾರಗಳ ಎಲ್ಲಾ ಅಂಶಗಳ ಬಗ್ಗೆ ಹೇರಳವಾದ ಜ್ಞಾನ ಮತ್ತು ಅನುಭವ ಹೊಂದಿರುವ ವ್ಯಕ್ತಿಯಾಗಿರುವ ಅಡ್ವಾಣಿ ಬಗ್ಗೆ ಪ್ರತಿಯೊಬ್ಬರೂ ಹೆಮ್ಮೆ ಪಡುತ್ತಾರೆ ಎಂದು ವಿವರವಾಗಿ ಪತ್ರದಲ್ಲಿ ಅಡ್ವಾಣಿ ಬಗ್ಗೆ ಶಂಕರಮೂರ್ತಿ ಉಲ್ಲೇಖಿಸಿದ್ದಾರೆ.

ನಾನು ಕೂಡ ಅಡ್ವಾಣಿಯವರೊಂದಿಗೆ ನಿಕಟ ಸಂಪರ್ಕ ಹೊಂದಿದ್ದೇನೆ. ಅವರೊಂದಿಗೆ ಪ್ರವಾಸ ಮಾಡಿದ್ದೇನೆ. ಐದು ದಶಕದಿಂದ ಅವರನ್ನು ಹತ್ತಿರದಿಂದ ತಿಳಿದುಕೊಂಡಿದ್ದೇನೆ. ಅವರ ಸಾರ್ವಜನಿಕ ಭಾಷಣವನ್ನು ಅನುವಾದಿಸಿದ್ದೇನೆ. ಭಾರತ ರತ್ನ ಪ್ರಶಸ್ತಿಗೆ ಅಡ್ವಾಣಿ ಶ್ರೇಷ್ಠತೆ ಸೇರಿದಂತೆ ಎಲ್ಲ ರೀತಿಯಲ್ಲೂ ಅರ್ಹರಿದ್ದಾರೆ. ರಾಜ್ಯದ ಸಾವಿರಾರು ಕಾರ್ಯಕರ್ತರ ಬಯಕೆಯೂ ಅದೇ ಆಗಿದೆ. ಆದುದರಿಂದ ಕರ್ನಾಟಕದ ಸಾವಿರಾರು ಕಾರ್ಯಕರ್ತರ ಪರವಾಗಿ ಅಡ್ವಾಣಿಗೆ ಭಾರತ ರತ್ನವನ್ನು ನೀಡುವಂತೆ ವಿನಂತಿಸುವುದಾಗಿ ಮಾಜಿ ಸಭಾಪತಿ ಡಿ.ಹೆಚ್. ಶಂಕರಮೂರ್ತಿ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News