ಕೋವಿಡ್ ಮಾರ್ಗಸೂಚಿ ಉಲ್ಲಂಘಿಸಿದ ದರ್ಶನ್, ತೇಜಸ್ವಿ ಸೂರ್ಯಗೆ ತಲಾ 250 ರೂ. ದಂಡ

Update: 2020-11-09 14:26 GMT

ಬೆಂಗಳೂರು, ನ.9: ಕೋವಿಡ್ ಮಾರ್ಗಸೂಚಿಗಳನ್ನು ಉಲ್ಲಂಘಿಸಿದ ಕಾರಣಕ್ಕೆ ನಟ ದರ್ಶನ್ ಹಾಗೂ ಸಂಸದ ತೇಜಸ್ವಿ ಸೂರ್ಯ ಅವರಿಗೆ ತಲಾ 250 ರೂಪಾಯಿ ದಂಡ ವಿಧಿಸಿದ್ದೇವೆ ಹಾಗೂ ಅವರ ವಿರುದ್ಧ ಪ್ರಕರಣ ದಾಖಲಿಸಿದ್ದೇವೆ ಎಂದು ಸರಕಾರ ಹೈಕೋರ್ಟ್ ಗೆ ಮಾಹಿತಿ ನೀಡಿದೆ.

ಸ್ವತಃ ವಕೀಲರೂ ಆಗಿರುವ ಸಂಸದ ಮತ್ತು ಬಿಜೆಪಿ ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷ ತೇಜಸ್ವಿ ಸೂರ್ಯ ವಿರುದ್ಧ ಕ್ರಮ ಏಕೆ ಕೈಗೊಂಡಿಲ್ಲ ಎಂದು ಹೈಕೋರ್ಟ್ ಪದೇ ಪದೇ ಪ್ರಶ್ನಿಸಿದ ಬಳಿಕ ಸರಕಾರ ಅಂತಿಮವಾಗಿ ದಂಡ ವಿಧಿಸುವ ಕೆಲಸ ಮಾಡಿದೆ. ನಿಯಮ ಉಲ್ಲಂಘಿಸಿದ 38 ದಿನಗಳ ಬಳಿಕ ಹೈಕೋರ್ಟ್ ಒತ್ತಾಯಕ್ಕೆ ಮಣಿದು ನವೆಂಬರ್ 7ರಂದು 250 ರೂಪಾಯಿ ದಂಡ ವಿಧಿಸಿದೆ.

ಸಂಸದ ತೇಜಸ್ವಿ ಸೂರ್ಯ ಬಿಜೆಪಿ ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ನಗರಕ್ಕೆ ಸೆಪ್ಟಂಬರ್ 30ರಂದು ವಾಪಸ್ಸಾಗಿದ್ದರು. ಅಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ ಕೆಂಪೇಗೌಡ ಏಪೆಪೋರ್ಟ್‍ನಿಂದ ಆಗಮಿಸಿದ ತೇಜಸ್ವಿ ಅವರನ್ನು ಟೋಲ್ ಪ್ಲಾಜಾ ಬಳಿಯಿಂದ ತೆರೆದ ವಾಹನದಲ್ಲಿ ಕರೆ ತರಲು ಸುಮಾರು 200 ಮಂದಿ ಸೇರುವುದಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ಅವರಿಗೆ ನಿಯಮ ಉಲ್ಲಂಘಿಸದಂತೆ ಮನ್ನೆಚ್ಚರಿಕೆ ನೀಡಲಾಗಿತ್ತು. ಹಾಗಿದ್ದೂ ಕಾರ್ಯಕರ್ತರು ನಿಯಮ ಉಲ್ಲಂಘಿಸಿದ್ದಾರೆ. ಕಾರ್ಯಕರ್ತರು ನಿಯಮ ಉಲ್ಲಂಘಿಸಿದ ಸಂಬಂಧ ವೈಯ್ಯಾಲಿ ಕಾವಲ್ ಠಾಣೆ ಪೊಲೀಸರು ಹಾಗೂ ಚಿಕ್ಕಜಾಲ ಠಾಣೆ ಪೊಲೀಸರು ಪ್ರಕರಣ ದಾಖಲಿಸಿ ಕಾನೂನು ರೀತಿ ಕ್ರಮ ಜರುಗಿಸಲು ಅನುಮತಿ ಕೋರಿ ದೇವನಹಳ್ಳಿ ಜೆಎಂಎಫ್‍ಸಿ ಹಾಗೂ ನಗರದ 8ನೇ ಎಸಿಎಂಎಂ ಕೋರ್ಟ್‍ಗೆ ಮನವಿ ಮಾಡಿದ್ದಾರೆ ಎಂದು ಸರಕಾರ ತನ್ನ ವರದಿಯಲ್ಲಿ ತಿಳಿಸಿದೆ.

ಇನ್ನು ಆರ್‌ಆರ್ ನಗರ ಉಪಚುನಾವಣೆ ಸಂದರ್ಭದಲ್ಲಿ ಮುನಿರತ್ನ ಪರ ಪ್ರಚಾರ ನಡೆಸುವಾಗ ನಟ ದರ್ಶನ್ ಮಾಸ್ಕ್ ಧರಿಸದೆ ಕೋವಿಡ್ ನಿಯಮ ಉಲ್ಲಂಘಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರ ವಿರುದ್ಧ ಎನ್‍ಡಿಎಂಎ ಆ್ಯಕ್ಟ್ ಅಡಿ ಆರ್‍ಆರ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ (ಎನ್‍ಸಿಆರ್) ದಾಖಲಿಸಿದ್ದೇವೆ. ಅಲ್ಲದೇ, 250 ರೂಪಾಯಿ ದಂಡ ವಿಧಿಸಿದ್ದೇವೆ ಎಂದು ಸರಕಾರ ವರದಿ ನೀಡಿದೆ. ಅಲ್ಲದೇ, ಆರ್‌ಆರ್ ನಗರ ಚುನಾವಣೆ ವೇಳೆ ಕೋವಿಡ್ ನಿಯಮಗಳನ್ನು ಉಲ್ಲಂಘಿಸಿದವರ ವಿರುದ್ಧ ಒಟ್ಟು 18 ಎನ್‍ಸಿಆರ್ ದಾಖಲಿಸಿದ್ದು, 684 ಮಂದಿಗೆ ದಂಡ ವಿಧಿಸಿದ್ದೇವೆ ಎಂದು ಮಾಹಿತಿ ನೀಡಿದೆ.

ಮಾರ್ಷಲ್‍ಗಳಿಗಿಲ್ಲ ವೇತನ: ಕೋವಿಡ್ ಮಾರ್ಗಸೂಚಿಗಳನ್ನು ಜಾರಿ ಮಾಡಲು ಜನರೊಂದಿಗೆ ನಿತ್ಯವೂ ವಾಗ್ವಾದ ಮಾಡುತ್ತಾ ದಂಡ ವಿಧಿಸುತ್ತಿರುವ ಬಿಬಿಎಂಪಿ ಮಾರ್ಷಲ್ ಗಳಿಗೆ ವೇತನ ಪಾವತಿಸಿಲ್ಲ ಎಂಬ ವಿಚಾರ ವಿಚಾರಣೆ ಸಂದರ್ಭದಲ್ಲಿ ಪ್ರಸ್ತಾಪವಾಯಿತು. ಇದಕ್ಕೆ ಪಾಲಿಕೆ ಪರ ವಕೀಲರು ವೇತನ ಪಾವತಿಸಲಾಗಿದೆ. ಸಮಸ್ಯೆ ಇದ್ದಲ್ಲಿ ಆ ಕುರಿತು ಗಮನ ಹರಿಸಲಾಗುವುದು ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಮಾರ್ಷಲ್ ಗಳಿಗೆ ಸಂಬಳ ನೀಡದಿರುವ ಕುರಿತು ವಿವರಣೆ ನೀಡುವಂತೆ ಸೂಚನೆ ನೀಡಿ ವಿಚಾರಣೆಯನ್ನು ನವೆಂಬರ್ 12ಕ್ಕೆ ಮುಂದೂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News