×
Ad

ಗ್ರಾಮಕ್ಕೆ ನುಗ್ಗಿ ಗುಂಡು ಹಾರಾಟ: ಕನ್ನಡ ಚಳವಳಿ ವೇದಿಕೆ ರಾಜ್ಯಾಧ್ಯಕ್ಷ ಸೇರಿ 7 ಮಂದಿ ಬಂಧನ

Update: 2020-11-09 21:33 IST

ಮೈಸೂರು,ನ.9: ಕ್ಷುಲ್ಲಕ ಕಾರಣಕ್ಕೆ ಸಿನಿಮೀಯ ರೀತಿಯಲ್ಲಿ ಗ್ರಾಮಕ್ಕೆ ನುಗ್ಗಿ ಗಲಾಟೆ ಮಾಡಿ ಗುಂಡು ಹಾರಿಸಿ ಗ್ರಾಮಸ್ಥರನ್ನು ಭಯಗೊಳಿಸಿದ ಏಳು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿರುವ ಘಟನೆ ಪಿರಿಯಾಪಟ್ಟಣದಲ್ಲಿ ನಡೆದಿದೆ.

ಮೈಸುರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಹೋಬಳಿಯ ಬಿಲ್ಲಹಳ್ಳಿ ಗ್ರಾಮದಲ್ಲಿ ಗುರುಲಿಂಗಪ್ಪ ಕುಟುಂಬ ಮತ್ತು ಚನ್ನಬಸವಪ್ಪ ಕುಟುಂಬದ ನಡುವೆ ಮನೆಯ ಗಲ್ಲಿ ವಿಚಾರದಲ್ಲಿ ಗಲಾಟೆ ನಡೆದು ಗ್ರಾಮದಲ್ಲಿ ನ್ಯಾಯ ಪಂಚಾಯಿತಿ ನಡೆದಿತ್ತು. ಆದರೆ ಸಮಸ್ಯೆ ಬಗೆಹರಿಯದೆ ನ್ಯಾಯಾಲಯದಲ್ಲಿ ಪ್ರಕರಣ ನಡೆಯುತ್ತಿದೆ.

ಈ ನಡುವೆ ಚನ್ನಬಸವಪ್ಪ ಮತ್ತು ಅವರ ಮೊಮ್ಮಗಳ ಗಂಡ ಸುನಿಲ್ ಕುಮಾರ್ ತನ್ನ ಸ್ನೇಹಿತರನ್ನು ಗ್ರಾಮಕ್ಕೆ ಕರೆತಂದು ಗುರುಲಿಂಗಪ್ಪ ಕುಟುಂಬದೊಂದಿಗೆ ಗಲಾಟೆ ಮಾಡಲು ಮುಂದಾಗಿದ್ದಾನೆ ಎನ್ನಲಾಗಿದೆ. ಈ ಸಂದರ್ಭದಲ್ಲಿ ಈತನೊಂದಿಗೆ ಬಂದಿದ್ದ ಕರ್ನಾಟಕ ಚಳವಳಿ ವೇದಿಕೆ ಅಧ್ಯಕ್ಷ ಬೆಂಗಳೂರು ಮೂಲದ ಎಂ.ಮಧುಗೌಡ ಮತ್ತು ಈತನ ಸಹಚರರು ಗುರುಲಿಂಗಪ್ಪ ಕುಟುಂಬದೊಂದಿಗೆ ಗಲಾಟೆಗೆ ಮುಂದಾಗಿದ್ದು ಇದನ್ನು ಪ್ರಶ್ನಿಸಿದ ಗ್ರಾಮಸ್ಥರನ್ನು ಬೆದರಿಸಲು ಗುಂಡು ಹಾರಿಸಿದ್ದಾರೆ. ಇದರಿಂದ ಭಯಗೊಂಡ ಗ್ರಾಮಸ್ಥರು ಅವರು ಬಂದಿದ್ದ ವಾಹನಗಳನ್ನು ತಡೆದು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ಸುದ್ದಿ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿ ಏಳು ಮಂದಿಯನ್ನು ಬಂಧಿಸಿದ್ದು, ಉಳಿದವರು ನಾಪತ್ತೆಯಾಗಿದ್ದಾರೆ ಎಂದು ತಿಳಿದುಬಂದಿದೆ.

ಘಟನೆಗೆ ಸಂಬಂಧಿಸಿದಂತೆ ಬಿಲ್ಲಹಳ್ಳಿ ಗ್ರಾಮದ ಬಿ.ಎಂ.ಚನ್ನಬಸಪ್ಪ, ಈತನ ಮೊಮ್ಮಗಳ ಗಂಡ ಬಿ.ಎನ್.ಸುನಿಲ್ ಕುಮಾರ್, ಸ್ಪೀಡ್ ನ್ಯೂಸ್ ಕನ್ನಡ ಚಾನಲ್ ಮಾಲಕ ಮತ್ತು ಕನ್ನಡ ಚಳವಳಿ ವೇದಿಕೆ ರಾಜ್ಯಾಧ್ಯಕ್ಷ ಬೆಂಗಳೂರು ಗ್ರಾಮದ ಎಂ.ಮಧುಗೌಡ, ಬೆಂಗಳೂರಿನವರಾದ ಯಾಸೀನ್, ಎಂ.ಪುನೀತ್ ಕುಮಾರ್, ಸಚಿನ್, ಬಿ.ಡಿ.ಪುನೀತ ಎಂಬ ಏಳು ಮಂದಿಯನ್ನು ಬಂಧಿಸಿದ್ದಾರೆ. ಇವರೊಂದಿಗೆ ಬಂದಿದ್ದ ಗನ್ ಮ್ಯಾನ್ ಮತ್ತು ಇತರರು ಪರಾರಿಯಾಗಿದ್ದಾರೆ.

ಬಂಧಿತರಿಂದ 11 ಸಜೀವ ಗುಂಡುಗಳು ಮತ್ತು 2 ಖಾಲಿ ಗುಂಡುಗಳು, 2 ಫಾರ್ಚೂನರ್ ಕಾರು, 1 ಮಹೇಂದ್ರ ಸ್ಕಾರ್ಪಿಯೋ ವಾಹನವನ್ನು ವಶಪಡಿಕೊಳ್ಳಲಾಗಿದೆ.

ಏಕಾಏಕಿ ಗ್ರಾಮಕ್ಕೆ ನುಗ್ಗಿ ಗಲಾಟೆ ಮಾಡಿರುವುದಲ್ಲದೆ, ಗುಂಡು ಹಾರಿಸಿ ಗ್ರಾಮಸ್ಥರನ್ನು ಭಯಭೀತಗೊಳಿಸಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ನೂರಾರು ಮಂದಿ ಬಿಲ್ಲಹಳ್ಳಿ ಗ್ರಾಮಸ್ಥರು ಪೊಲೀಸ್ ಠಾಣೆ ಎದುರು ಸೇರಿ, ಪೊಲೀಸ್ ಅಧಿಕಾರಿಗಳಿಗೆ ಮನವಿ ಮಾಡಿದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಲ್ಲಹಳ್ಳಿ ಗ್ರಾಮದ ಗುರುಲಿಂಗಪ್ಪ ನೀಡಿರುವ ದೂರಿನ ಆಧಾರದ ಮೇಲೆ ಪ್ರಕರಣದ ದಾಖಲಿಸಿಕೊಳ್ಳಲಾಗಿದೆ. ಸ್ಥಳಕ್ಕೆ ಡಿವೈಎಸ್ಪಿ ಸುಂದರ್ರಾಜ್, ಸರ್ಕಲ್ ಇನ್‍ಸ್ಪೆಕ್ಟರ್ ಬಿ.ಆರ್.ಪ್ರದೀಪ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News