ಅಕ್ರಮ ಸಂಬಂಧ ಹಿನ್ನೆಲೆ ಪತ್ನಿಯ ಕೊಲೆ: ಆರೋಪಿ ಪತಿಯ ಜೀವಾವಧಿ ಶಿಕ್ಷೆ ಕಡಿತ ಮಾಡಿದ ಹೈಕೋರ್ಟ್

Update: 2020-11-09 16:46 GMT

ಬೆಂಗಳೂರ, ನ.9: ತನ್ನ ಸೋದರನೊಂದಿಗೆ ಅಕ್ರಮ ಸಂಬಂಧ ಇರಿಸಿಕೊಂಡಿದ್ದಾಳೆ ಎಂಬ ಹಿನ್ನೆಲೆಯಲ್ಲಿ ಪತ್ನಿಯನ್ನು ಕೊಂದಿದ್ದ ವ್ಯಕ್ತಿಗೆ ವಿಚಾರಣಾ ನ್ಯಾಯಾಲಯ ವಿಧಿಸಿದ್ದ ಆಜೀವ ಕಾರಾಗೃಹ ಶಿಕ್ಷೆಯನ್ನು ಹೈಕೋರ್ಟ್ ಕಡಿತ ಮಾಡಿ ತೀರ್ಪು ನೀಡಿದೆ. ಇದೇ ವೇಳೆ ಆಜೀವ ಕಾರಾಗೃಹ ಶಿಕ್ಷೆಯನ್ನು ವಿಧಿಸುವ ಅಧಿಕಾರ ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್‍ಗಷ್ಟೇ ಇದೆ ಎಂದು ಅಭಿಪ್ರಾಯಪಟ್ಟಿದೆ.

ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯ ವಿಧಿಸಿದ್ದ ಸಾಯುವವರೆಗೆ ಜೈಲು ಶಿಕ್ಷೆಯನ್ನು ರದ್ದುಪಡಿಸುವಂತೆ ಕೋರಿ ಶಿವಮೊಗ್ಗದ ಚಂದ್ರಶೇಖರ್ ಎಂಬಾತ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ, ಬಿ. ವೀರಪ್ಪ ನೇತೃತ್ವದ ವಿಭಾಗೀಯ ಪೀಠ ಈ ತೀರ್ಪು ನೀಡಿದೆ. ವಿಚಾರಣಾ ನ್ಯಾಯಾಲಯ ವಿಧಿಸಿದ್ದ ಸಾಯುವವರೆಗೂ ಜೈಲು ಶಿಕ್ಷೆ ಪ್ರಮಾಣವನ್ನು ಕಡಿತ ಮಾಡಿರುವ ಪೀಠ, ಏಳು ವರ್ಷ ಜೈಲು ಹಾಗೂ 15 ಸಾವಿರ ದಂಡ ವಿಧಿಸಿದೆ. ಈಗಾಗಲೇ 5 ವರ್ಷಗಳಿಂದ ಜೈಲು ಶಿಕ್ಷೆ ಅನುಭವಿಸಿರುವ ಚಂದ್ರಶೇಖರ್ ಇನ್ನೆರಡು ವರ್ಷಗಳ ಬಳಿಕ ಬಿಡುಗಡೆಯಾಗಲಿದ್ದಾನೆ.

ಪ್ರಕರಣದ ಹಿನ್ನೆಲೆ: ಶಿವಮೊಗ್ಗ ಜಿಲ್ಲೆಯ ಸಾಗರ ನಿವಾಸಿಯಾದ ಚಂದ್ರಶೇಖರ್ ತನ್ನ ಪತ್ನಿ ದ್ಯಾವಮ್ಮಳನ್ನು 2015ರ ಸೆಪ್ಟೆಂಬರ್ ನಲ್ಲಿ ಹತ್ಯೆ ಮಾಡಿದ ಆರೋಪದಡಿ ಬಂಧಿತನಾಗಿದ್ದ. ತನ್ನ ಸೋದರ ದ್ಯಾವಪ್ಪ ಜೊತೆ ಪತ್ನಿ ಅಕ್ರಮ ಸಂಬಂಧ ಇರಿಸಿಕೊಂಡಿದ್ದಾಳೆ ಎಂದು ಜಗಳ ಮಾಡಿದ ಸಂದರ್ಭದಲ್ಲಿ ಆಕೆಯನ್ನು ಜೋರಾಗಿ ತಳ್ಳಿದ ಪರಿಣಾಮ ಕಲ್ಲಿಗೆ ಬಡಿದು ಸಾವನ್ನಪ್ಪಿದ್ದಳು. ಬಳಿಕ ಮೃತ ದೇಹವನ್ನು ಅರಣ್ಯ ಪ್ರದೇಶದಲ್ಲಿ ಸಮಾಧಿ ಮಾಡಲಾಗಿತ್ತು. ಘಟನೆ ಬಳಿಕ ಸೀತಮ್ಮಳ ತಂದೆ ಮಗಳು ನಾಪತ್ತೆಯಾದ ಕುರಿತು ಪ್ರಕರಣ ದಾಖಲಿಸಿದ್ದರು.

ತನಿಖೆ ನಡೆಸಿದ್ದ ಪೊಲೀಸರು ಆರೋಪಿ ಪತಿಯನ್ನು ಬಂಧಿಸಿದ್ದರು. ನಂತರ, ಶಿವಮೊಗ್ಗದ 5 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ದೋಷಾರೋಪಣೆ ಸಲ್ಲಿಸಿದ್ದರು. ನ್ಯಾಯಾಲಯ 25 ಸಾವಿರ ದಂಡ ಹಾಗೂ ಆಜೀವ ಕಾರಾಗೃಹ ಶಿಕ್ಷೆ ವಿಧಿಸಿ, ಅಪರಾಧಿ ಜೀವನಪರ್ಯಂತ ಜೈಲು ಶಿಕ್ಷೆ ಅನುಭವಿಸಬೇಕು ಎಂದು ತೀರ್ಪು ನೀಡಿತ್ತು. ಮೇಲ್ಮನವಿ ವಿಚಾರಣೆ ನಡೆಸಿದ ಹೈಕೋರ್ಟ್ ಆರೋಪಿ ಮಹಿಳೆಯನ್ನು ಕೊಲ್ಲುವ ಉದ್ದೇಶದಿಂದ ಹಲ್ಲೆ ಮಾಡಿಲ್ಲ ಎಂದು ಅಭಿಪ್ರಾಯಪಟ್ಟು ಶಿಕ್ಷೆ ಕಡಿತ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News