ಹೊರಗಿನಿಂದ ಬಂದ 17 ಮಂದಿ ಪಕ್ಷ ಕಟ್ಟಿದವರಲ್ಲ: ಸದಾನಂದ ಗೌಡ

Update: 2020-11-14 15:49 GMT

ಮೈಸೂರು,ನ. 14: ಹೊರಗಿನಿಂದ ಬಂದ 17 ಮಂದಿ ಪಕ್ಷ ಅಧಿಕಾರಕ್ಕೆ ಬರಲು ಕಾರಣ ಅಷ್ಟೇ, ಪಕ್ಷ ಕಟ್ಟಿದವರಲ್ಲ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಹೇಳಿದರು.

ಖಾಸಗಿ ಕಾರ್ಯಕ್ರಮ ನಿಮಿತ್ತ ಮೈಸೂರಿಗೆ ಆಗಮಿಸಿದ್ದ ಅವರು, ಮಾದ್ಯಮದವರೊಂದಿಗೆ ಮಾತನಾಡಿದರು. ಅವರು ಬರುವ ಮುನ್ನ ನಮ್ಮಲ್ಲಿ 105 ಮಂದಿ ಶಾಸಕರು‌ ಇದ್ದರು ಎಂಬುದನ್ನು ಕೂಡ ನೆನಪಿಸಿಕೊಳ್ಳಬೇಕು ಎಂದು ಹೇಳಿದರು.

ಸಂಪುಟ ವಿಸ್ತರಣೆ ವೇಳೆ ಎಲ್ಲ ಪಕ್ಷಾಂತರಿಗಳಿಗೆ ಸಚಿವ ಸ್ಥಾನ ಸಿಗಲಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿ ಬೇರೆ ಪಕ್ಷದಿಂದ ಬಂದವರಿಗೆ ಕೊಡುವಂತಹದ್ದನ್ನು ಈಗಾಗಲೇ ಕೊಟ್ಟಿದ್ದೇವೆ ಎಂದು ತಿಳಿಸಿದರು.

ಬಿಜೆಪಿಯಿಂದ 105 ಮಂದಿ ಗೆದ್ದಿದ್ದರು ಎಂಬುದನ್ನು ಯಾರೂ ಲೆಕ್ಕ ಮಾಡುವುದಿಲ್ಲ. ಬಳಿಕ ಸೇರಿದ 17 ಮಂದಿಯೇ ಎಲ್ಲರಿಗೂ ದೊಡ್ಡದಾಗಿ ಕಾಣಿಸುತ್ತಾರೆ. ನಮ್ಮ ಎಲ್ಲ ಶಾಸಕರು ಕೂಡ ಮಂತ್ರಿಯಾಗುವ ಅರ್ಹತೆ ಹೊಂದಿದ್ದಾರೆ. ಆದರೆ, ಯಾರಾಗಬೇಕು ಎಂಬುದನ್ನು ಹೈಕಮಾಂಡ್ ನಿರ್ಧರಿಸುತ್ತದೆ ಎಂದು ಹೇಳಿದರು.

ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಆರ್ಥಿಕ ಚಟುವಟಿಕೆಗೆ ವೇಗ ಕೊಟ್ಟವರು ಬಿಎಸ್‌ವೈ. ಇದು ಬಿಎಸ್‌ವೈ ಸಾಮರ್ಥ್ಯ ಸಾಬೀತು ಪಡಿಸಿದೆ.  ನಮ್ಮ ‌ಪಕ್ಷದಲ್ಲಿ ಆಂತರಿಕ ಭಿನ್ನಾಭಿಪ್ರಾಯವಿಲ್ಲ. ಯಾರೋ ಡಿಕೆಶಿ, ಸಿದ್ದು, ಕುಮಾರಸ್ವಾಮಿ ಹೇಳಿದರೆ ಬದಲಾವಣೆ ಆಗಲ್ಲ. ಮೊದಲು ಅವರ ಮನೆಯಲ್ಲಿ ಸಮಸ್ಯೆ ನೋಡಿಕೊಳ್ಳಲಿ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News