ಮಕ್ಕಳಾಗಲ್ಲ ಎಂಬ ಜ್ಯೋತಿಷಿಯ ಮಾತು ಕೇಳಿ ಕಿರುಕುಳ ಆರೋಪ: ನವ ವಿವಾಹಿತೆ ಆತ್ಮಹತ್ಯೆ

Update: 2020-11-14 18:35 GMT

ಬೆಂಗಳೂರು, ನ.14: ಮಕ್ಕಳಾಗಲ್ಲ ಎಂದು ಜ್ಯೋತಿಷಿ ಹೇಳಿದ ಮಾತುಗಳನ್ನೇ ನಂಬಿ, ಪತಿಯ ಮನೆಯ ಸದಸ್ಯರು ಕಿರುಕುಳ ನೀಡಿದ ಕಾರಣ, ನವವಿವಾಹಿತೆಯೊಬ್ಬಾಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆನ್ನಲಾದ ಘಟನೆ ಇಲ್ಲಿನ ಹೆಣ್ಣೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ನಗರದ ನಿವಾಸಿ ಅಶ್ವಿನಿ(25) ಆತ್ಮಹತ್ಯೆ ಮಾಡಿಕೊಂಡ ನವವಿವಾಹಿತೆ ಎಂದು ಪೊಲೀಸರು ತಿಳಿಸಿದ್ದಾರೆ.

ಫೆ.28ರಂದು ಯುವರಾಜ್ ಎಂಬಾತನ ಜೊತೆ ಅಶ್ವಿನಿಯ ವಿವಾಹವಾಗಿತ್ತು. ಇತ್ತೀಚಿಗೆ ಜ್ಯೋತಿಷಿಯೋರ್ವನನ್ನು ಯುವರಾಜ್ ಮನೆಯವರು ಭೇಟಿ ಮಾಡಿ ಅಶ್ವಿನಿಯ ಜಾತಕ ಕೇಳಿದ್ದರು. ಈ ವೇಳೆ ಅಶ್ವಿನಿಗೆ ಮಕ್ಕಳಾಗಲ್ಲ ಎಂದು ಜ್ಯೋತಿಷಿ ಭವಿಷ್ಯ ನುಡಿದಿದ್ದ ಎನ್ನಲಾಗಿದೆ. ತದನಂತರ, ಅಶ್ವಿನಿಗೆ ಪತಿಯ ಮನೆಯವರು ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಲಾಗಿದೆ.

ಇದೇ ವಿಚಾರಕ್ಕಾಗಿ ದಂಪತಿ ನಡುವೆ ಜಗಳ ನಡೆಯುತ್ತಿತ್ತು. ಶುಕ್ರವಾರ ಸಹ ಇಬ್ಬರ ನಡುವೆ ಗಲಾಟೆಯಾಗಿದೆ. ಇದರಿಂದ ಬೇಸತ್ತು ಶನಿವಾರ ಬೆಳಗ್ಗೆ ಅಶ್ವಿನಿ ಕೊಠಡಿಯೊಂದರಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಸಂಬಂಧಿಗಳು ಆರೋಪಿಸಿದ್ದಾರೆ.

ಮಾಹಿತಿ ಆಧರಿಸಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಪೊಲೀಸರು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಅಂಬೇಡ್ಕರ್ ಆಸ್ಪತ್ರೆಗೆ ರವಾನಿಸಿದ್ದಾರೆ. ಈ ಸಂಬಂಧ ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News