ಟೊಯೋಟಾ ಕಿರ್ಲೋಸ್ಕರ್ ಕಾರ್ಖಾನೆ ಬಿಕ್ಕಟ್ಟು: ಕಾರ್ಮಿಕರು-ಆಡಳಿತ ಮಂಡಳಿ ಜೊತೆಗಿನ ಸರಕಾರದ ಸಂಧಾನ ಸಭೆ ವಿಫಲ

Update: 2020-11-17 13:12 GMT

ಬೆಂಗಳೂರು, ನ. 17: ಬಿಡದಿ ಕೈಗಾರಿಕಾ ಪ್ರದೇಶದಲ್ಲಿನ ಟೊಯೋಟಾ ಕಿರ್ಲೋಸ್ಕರ್ ಕಾರ್ಖಾನೆಯ ಕಾರ್ಮಿಕರು ಮತ್ತು ಆಡಳಿತ ಮಂಡಳಿ ನಡುವಿನ ಬಿಕ್ಕಟ್ಟು ಪರಿಹಾರಕ್ಕೆ ಉಪಮುಖ್ಯಮಂತ್ರಿ ಡಾ.ಅಶ್ವತ್ಥ ನಾರಾಯಣ, ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್, ಕಾರ್ಮಿಕ ಇಲಾಖೆ ಅಧಿಕಾರಿಗಳು ನಡೆಸಿ ಸಂಧಾನ ಸಭೆ ವಿಫಲವಾಗಿದ್ದು. ಕಾರ್ಮಿಕರು ತಮ್ಮ ಪ್ರತಿಭಟನೆ ಮುಂದುವರಿಸಲು ತೀರ್ಮಾನಿಸಿದ್ದಾರೆ.

ಮಂಗಳವಾರ ವಿಕಾಸಸೌಧದಲ್ಲಿ ರಾಮನಗರ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಾ.ಅಶ್ವತ್ಥ ನಾರಾಯಣ ಮತ್ತು ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಕರೆದಿದ್ದ ಸಭೆಗೆ ಕಾರ್ಖಾನೆಯ ಆಡಳಿತ ಮಂಡಳಿ ಹಾಗೂ ಕಾರ್ಮಿಕ ಸಂಘಟನೆಗಳ ಪ್ರತಿನಿಧಿಗಳು ಭಾಗವಹಿಸಿದ್ದರು. ಕಾರ್ಖಾನೆ ಬಿಕ್ಕಟ್ಟು ನಿವಾರಣೆಗೆ ರಾಜ್ಯ ಸರಕಾರ ಯತ್ನಿಸಿದ್ದು, ಲಾಕ್‍ಔಟ್(ಬೀಗಮುದ್ರೆ) ತೆರವು ಮತ್ತು ಕಾರ್ಮಿಕರ ಪ್ರತಿಭಟನೆ ಹಿಂಪಡೆಯಲು ಮನವಿ ಮಾಡಲಾಯಿತು.

ಲಾಕ್‍ಔಟ್ ತೆರವುಗೊಳಿಸಲು ಸಮ್ಮತಿಸಿದ ಕಾರ್ಖಾನೆ ಆಡಳಿತ ಮಂಡಳಿಯು, 39 ಮಂದಿ ಕಾರ್ಮಿಕರ ಅಮಾನತ್ತು ಹಿಂಪಡೆಯಲು ಸಮ್ಮತಿಸದ ಹಿನ್ನೆಲೆಯಲ್ಲಿ ಬಿಕ್ಕಟ್ಟು ಹಾಗೆಯೇ ಮುಂದುವರಿಸಿದಿದೆ. ಕಾರ್ಮಿಕ ಇಲಾಖೆಯ ಅಧಿಕಾರಿಗಳ ಉಪಸ್ಥಿತಿಯಲ್ಲಿ ನಡೆಸಿದ ಮತ್ತೊಂದು ಸುತ್ತಿನ ಸಭೆಯಲ್ಲಿಯೂ ಕಾರ್ಮಿಕರು ಮತ್ತು ಆಡಳಿತ ಮಂಡಳಿಯ ನಡುವೆ ಒಮ್ಮತ ಮೂಡದ ಹಿನ್ನೆಲೆಯಲ್ಲಿ ಕಾರ್ಮಿಕರು ತಮ್ಮ ಪ್ರತಿಭಟನೆ ಮುಂದುವರಿಸಲು ನಿರ್ಧರಿಸಿದ್ದಾರೆ

ಈ ನಡುವೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಡಿಸಿಎಂ ಡಾ.ಸಿ.ಎನ್.ಅಶ್ವತ್ಥ ನಾರಾಯಣ, ರಾಜ್ಯದ ಏಕೈಕ ಬೃಹತ್ ಆಟೋ ಮೊಬೈಲ್ ಕೈಗಾರಿಕೆಯಾಗಿರುವ ಟೊಯೋಟಾ ಕಿರ್ಲೋಸ್ಕರ್ ಕಾರ್ಖಾನೆಯಲ್ಲಿ ಕೆಲದಿನಗಳ ಹಿಂದೆ ಆಡಳಿತ ಮಂಡಳಿ ಮತ್ತು ಕಾರ್ಮಿಕರ ನಡುವೆ ಉಂಟಾದ ತಿಕ್ಕಾಟದಿಂದ 39 ಕಾರ್ಮಿಕರನ್ನು ಅಮಾನತು ಮಾಡಲಾಗಿತ್ತು. ಇದರಿಂದ ಕಾರ್ಮಿಕರು ಅನಿರ್ದಿಷ್ಟಾವಧಿ ಪ್ರತಿಭಟನೆಗೆ ಮುಂದಾದರೆ, ಕಂಪನಿಯೂ ದಿಢೀರ್ ಲಾಕ್‍ಔಟ್ ಘೋಷಣೆ ಮಾಡಿತ್ತು. ಕಾರ್ಮಿಕ ವ್ಯಾಜ್ಯ ಕಾಯ್ದೆ ಸೆಕ್ಷನ್ 10(3)ರ ಪ್ರಕಾರ ಕಂಪೆನಿಯಲ್ಲಿ ಮುಷ್ಕರ ನಿಷೇಧಿಸಿ ಲಾಕ್‍ಔಟ್ ತೆರವುಗೊಳಿಸುವ ಮಹತ್ವದ ಆದೇಶವನ್ನು ಸೋಮವಾರ ಸಂಜೆಯೊಳಗೆ ಹೊರಡಿಸಲಾಗುವುದು ಎಂದು ಪ್ರಕಟಿಸಿದರು. 

ನಾಳೆ ಬೆಳಗ್ಗೆಯಿಂದಲೇ ಕಂಪೆನಿಯ ಉತ್ಪಾದನಾ ಚಟುವಟಿಕೆ ಪುನಾರಂಭ ಆಗಬೇಕು. ಕೂಡಲೇ ಕೆಲಸಕ್ಕೆ ಹಾಜರಾಗಿ ಎಂದು ಕಾರ್ಮಿಕರಿಗೆ ಹಾಗೂ ಇದಕ್ಕೆ ಬೇಕಾದ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಆಡಳಿತ ಮಂಡಳಿಗೆ ಸೂಚಿಸಿದರು.

ಎರಡೂ ಸರಿಯಲ್ಲ: ಮೊದಲಿನಿಂದಲೂ ರಾಜ್ಯದಲ್ಲಿ ಉತ್ತಮ ಶ್ರಮಸಂಸ್ಕೃತಿ ಇದೆ. ಇದರಿಂದ ಕೈಗಾರಿಕೆಗಳ ಬೆಳವಣಿಗೆ ಉತ್ತಮವಾಗಿ ಆಗಿದೆ ಎಂದು ಹೇಳಬಹುದು. ಇಡೀ ಏಷ್ಯಾದಲ್ಲಿಯೇ ಉತ್ತಮ ಹೂಡಿಕೆ ಹಾಗೂ ಕೈಗಾರಿಕೆಗಳಿಗೆ ಪೂರಕ ವಾತಾವರಣ ರಾಜ್ಯದಲ್ಲಿದೆ. ಕೋವಿಡ್-19 ನಂತರ ಕುಸಿತ ಕಂಡಿರುವ ಆರ್ಥಿಕತೆಯನ್ನು ಮತ್ತೆ ಮೇಲೆತ್ತುವ ಕೆಲಸ ಎಲ್ಲರೂ ಮಾಡಬೇಕಿದೆ. ಆದರೆ, ಮುಷ್ಕರ ಮತ್ತು ಲಾಕ್‍ಔಟ್‍ನಿಂದ ನಾವು ಎಂಥ ಸಂದೇಶ ನೀಡಲು ಸಾಧ್ಯ? ಎಂದು ಸಭೆಯಲ್ಲಿ ಪಾಲ್ಗೊಂಡಿದ್ದ ಕಾರ್ಮಿಕ ಹಾಗೂ ಆಡಳಿತ ಮಂಡಳಿ ಪ್ರತಿನಿಧಿಗಳನ್ನು ಖಾರವಾಗಿ ಪ್ರಶ್ನಿಸಿದರು.

ಚೀನಾಕ್ಕೆ ಪರ್ಯಾಯವಾಗಿ ಇಡೀ ಜಗತ್ತು ಭಾರತದತ್ತ ನೋಡುತ್ತಿದೆ. ಆದರಲ್ಲೂ ಕರ್ನಾಟಕದಲ್ಲಿ ಇನ್ನಷ್ಟು ಕೈಗಾರಿಕೆಗಳನ್ನು ಸ್ಥಾಪನೆ ಮಾಡಲು ಜಪಾನ್, ದಕ್ಷಿಣ ಕೊರಿಯಾ, ತೈವಾನ್‍ನಂಥ ದಕ್ಷಿಣ ಆಸಿಯಾ ದೇಶಗಳು ತುದಿಗಾಲ ಮೇಲೆ ನಿಂತಿವೆ. ಇಂಥ ಹೊತ್ತಿನಲ್ಲಿ ಮುಷ್ಕರ, ಲಾಕ್‍ಡೌನ್‍ನಂಥ ಮಾತುಗಳು ಬರಲೇಬಾರದು ಎಂದ ಅವರು, ಜಪಾನಿಯರಲ್ಲಿ ಇರುವ ವರ್ಕ್‍ಕಲ್ಚರ್ ನಮ್ಮಲ್ಲೂ ಬರಬೇಕು. ಇದು ಸ್ಪರ್ಧಾತ್ಮಕ ಜಗತ್ತು. ಮಾರಕಟ್ಟೆಯಲ್ಲಿ ನೂರೆಂಟು ಕಾರುಗಳಿವೆ. ಗ್ರಾಹಕನಿಗೆ ಆಯ್ಕೆ ಹೆಚ್ಚಾಗಿದೆ ಎಂಬುದನ್ನು ಮರೆಯಬಾರದು ಎಂದು ಕಾರ್ಮಿಕ ಪ್ರತಿನಿಧಿಗಳಿಗೆ ಅವರು ತಿಳಿಹೇಳಿದರು.

ಸಭೆಯಲ್ಲಿ ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್, ಕೈಗಾರಿಕೆ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ, ಮಾಗಡಿ ಕ್ಷೇತ್ರದ ಶಾಸಕ ಮಂಜುನಾಥ, ಉಪಮುಖ್ಯಮಂತ್ರಿಗಳ ಕಾರ್ಯದರ್ಶಿ ಪಿ.ಪ್ರದೀಪ್, ರಾಮನಗರ ಜಿಲ್ಲಾಧಿಕಾರಿ ಅರ್ಚನಾ, ಪೊಲೀಸ್ ವರಿಷ್ಟಧಿಕಾರಿ ಗಿರೀಶ್, ಹೆಚ್ಚುವರಿ ಕಾರ್ಮಿಕ ಆಯುಕ್ತ ಮಂಜುನಾಥ ಸೇರಿದಂತೆ ಇನ್ನಿತರರು ಹಾಜರಿದ್ದರು.

'ಬಿದಡಿಯಲ್ಲಿರುವ ಟೊಯೋಟಾ ಕಿರ್ಲೋಸ್ಕರ್ ಕಂಪೆನಿಯಲ್ಲಿ ಉಂಟಾಗಿರುವ ಸಮಸ್ಯೆ ನನ್ನ ಗಮನಕ್ಕೆ ಬಂದಿದ್ದು, ಸಂಸ್ಥೆಯ ಕಾರ್ಮಿಕರು ಮತ್ತು ಆಡಳಿತ ಮಂಡಳಿಯ ಜೊತೆ ಚರ್ಚಿಸಿ, ಆದಷ್ಟು ಶೀಘ್ರದಲ್ಲಿ ಸಮಸ್ಯೆಯನ್ನು ಪರಿಹರಿಸುವಂತೆ ಸಂಬಂಧಪಟ್ಟ ಸಚಿವರಿಗೆ ಸೂಚನೆ ನೀಡಲಾಗಿದೆ'

-ಬಿ.ಎಸ್.ಯಡಿಯೂರಪ್ಪ, ಮುಖ್ಯಮಂತ್ರಿ

'ರಾಜ್ಯ ಸರಕಾರದ ಮನವಿ ಹಿನ್ನೆಲೆಯಲ್ಲಿ ಸಂಧಾನ ಸಭೆಗೆ ಕಾರ್ಮಿಕ ಸಂಘಟನೆಗಳ ಪ್ರತಿನಿಧಿಗಳು ಹಾಜರಾಗಿದ್ದು, ಆಡಳಿತ ಮಂಡಳಿ ಸಂಧಾನಕ್ಕೆ ಸಮ್ಮತಿಸುತ್ತಿಲ್ಲ. ಹೀಗಾಗಿ ಅನಿವಾರ್ಯವಾಗಿ ನಾವು ಪ್ರತಿಭಟನೆ ಮುಂದುವರಿಸುವ ತೀರ್ಮಾನಕ್ಕೆ ಬಂದಿದ್ದೇವೆ. ಲಾಕ್‍ಔಟ್ ತೆರವಿಗೆ ಒಪ್ಪಿಕೊಂಡಿರುವ ಆಡಳಿತ ಮಂಡಳಿ, ಕಾರ್ಮಿಕರ ಅಮಾನತ್ತು ಹಿಂಪಡೆಯಲು ಸಮ್ಮತಿಸುತ್ತಿಲ್ಲ. ಆಡಳಿತ ಮಂಡಳಿ ಒತ್ತಡ ಮತ್ತು ಕಿರುಕುಳ ಪ್ರಶ್ನಿಸಿದ ಕಾರ್ಮಿಕರನ್ನು ಅಮಾನತ್ತು ಮಾಡಲಾಗಿದೆ. ಒತ್ತಡ ಮತ್ತು ಕಿರುಕುಳ ನಿಲ್ಲಿಸಿ, ಅಮಾನತ್ತು ಹಿಂಪಡೆದರೆ ಕೆಲಸ ನಿರ್ವಹಿಸಲು ಕಾರ್ಮಿಕರು ಸಿದ್ಧ'

-ಗಂಗಾಧರ್, ಟೊಯೋಟಾ ಕಿರ್ಲೋಸ್ಕರ್ ಮೋಟಾರ್ಸ್ ನೌಕರರ ಯೂನಿಯನ್ ಜಂಟಿ ಕಾರ್ಯದರ್ಶಿ

10ನೆ ದಿನಕ್ಕೆ ಕಾಲಿಟ್ಟ ಕಾರ್ಮಿಕರ ಪ್ರತಿಭಟನೆ

ಟೊಯೋಟಾ ಕಿರ್ಲೋಸ್ಕರ್ ಕಾರ್ಖಾನೆ ದಿಢೀರ್ ಲಾಕ್‍ಔಟ್ ತೆರವು, ಕಾರ್ಮಿಕರ ಅಮಾನತ್ತು ಆದೇಶ ಹಿಂಪಡೆಯಬೇಕು ಮತ್ತು ಕಾರ್ಮಿಕರಿಗೆ ಅಮಾನವೀಯ ಒತ್ತಡ ಮತ್ತು ಕಿರುಕುಳ ತಡೆಗಟ್ಟಬೇಕೆಂದು ಆಗ್ರಹಿಸಿ ಕಾರ್ಮಿಕರು ಬಿಡದಿಯ ಕಾರ್ಖಾನೆ ಮುಂಭಾಗದಲ್ಲಿ ನಡೆಸುತ್ತಿರುವ ಪ್ರತಿಭಟನೆ 10ನೆ ದಿನಕ್ಕೆ ಕಾಲಿಟ್ಟಿದೆ. ಕಾರ್ಮಿಕರ ಹೋರಾಟಕ್ಕೆ ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾ ಹಾಗೂ ಸಮತಾ ಸೈನಿಕ ದಳ(ಎಸ್‍ಎಸ್‍ಡಿ) ರಾಜ್ಯಾಧ್ಯಕ್ಷ ಎಂ.ವೆಂಕಟಸ್ವಾಮಿ ಸೇರಿದಂತೆ ಇನ್ನಿತರರು ಬೆಂಬಲ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News