ಗ್ರಾಮೀಣಾಭಿವೃದ್ಧಿ, ಪಂಚಾಯತ್ ಇಲಾಖೆಯ 12 ನಾಗರಿಕ ಸೇವೆಗಳು ಸಕಾಲ ಸೇವೆಯಡಿ ಲಭ್ಯ

Update: 2020-11-18 12:15 GMT

ಬೆಂಗಳೂರು, ನ.18: ಕರ್ನಾಟಕ ಸಕಾಲ ಸೇವೆಗಳ ಅಧಿನಿಯಮ, 2011 ಮತ್ತು ತಿದ್ದುಪಡಿ ಅಧಿನಿಯಮ 2014ಗಳ ಅನುಸೂಚಿಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ 12 ನಾಗರಿಕ ಸೇವೆಗಳನ್ನು ಸಕಾಲ ಸೇವೆಗಳಡಿಯಲ್ಲಿ ಸೇರ್ಪಡೆಗೊಳಿಸಲಾಗಿದೆ.

ಈ ಕುರಿತು ರಾಜ್ಯ ಸಕಾಲ ಸೇವೆ ಇಲಾಖೆ ಪತ್ರಿಕಾ ಪ್ರಕಟನೆ ಹೊರಡಿಸಿದ್ದು, ಸಕಾಲ ಯೋಜನೆಯಡಿ ಅಧಿಸೂಚಿಸಲಾಗಿರುವ ಸೇವೆಗಳನ್ನು ಮತ್ತಷ್ಟು ನಾಗರಿಕ ಸ್ನೇಹಿಯನ್ನಾಗಿಸಲು ಮತ್ತು ಸಕಾಲದಡಿ ಅಧಿಸೂಚಿಸಲಾಗಿರುವ ಸೇವೆಗಳಿಗೆ ನಾಗರಿಕರು ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸುವ ಅವಕಾಶವನ್ನು ಕಲ್ಪಿಸುವ ನಿಟ್ಟಿನಲ್ಲಿ ಇಲಾಖೆಗಳು ಕಾರ್ಯಪ್ರವೃತ್ತವಾಗಬೇಕಾಗಿರುತ್ತದೆ.

ಈ ಸಂಬಂಧ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಸೇವೆಗಳ ಅರ್ಜಿಗಳ್ನು ಆನ್‍ಲೈನ್ ಮೂಲಕ ಸ್ವೀಕರಿಸಿ, ಸಂಸ್ಕರಿಸಿ ಮತ್ತು ವಿತರಿಸುವಂತೆ ಆನ್‍ಲೈನ್ ತಂತ್ರಾಂಶವನ್ನು ಅಭಿವೃದ್ಧಿಪಡಿಸಲಾಗಿದೆ. ಗ್ರಾಮ ಪಂಚಾಯತ್ ಗಳಿಗೆ ಪಾವತಿಸಬೇಕಾಗಿರುವ ಆಸ್ತಿ ತೆರಿಗೆ ಶುಲ್ಕವನ್ನು ಆನ್‍ಲೈನ್ ಮೂಲಕ ಪಾವತಿಸಲು ನಾಗರಿಕರಿಗೆ ಬಾಪೂಜಿ ಸೇವಾ ಕೇಂದ್ರ ತಂತ್ರಾಂಶದ ಮೂಲಕ ಅವಕಾಶ ಕಲ್ಪಿಸಲಾಗಿದೆ.

ಗ್ರಾಮಪಂಚಾಯತ್ ಗಳಲ್ಲಿ ನಾಗರಿಕರಿಂದ ಸ್ವೀಕೃತವಾಗುವ ಅರ್ಜಿಗಳನ್ನು ಸಕಾಲ ತಂತ್ರಾಂಶದಲ್ಲಿ ನೋಂದಣಿ ಮಾಡದೇ ಸಕಾಲ ಅಧಿನಿಯಮದ ಉಲ್ಲಂಘನೆಯನ್ನು ತಡೆಗಟ್ಟಲು ಸಕಾಲ ಅರ್ಜಿ ಸಂಖ್ಯೆ (GSC ಸಂಖ್ಯೆ) ಇಲ್ಲದೇ ಮತ್ತು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಡಿಜಿಟಲ್ ಸಹಿ ಇಲ್ಲದೇ ವಿತರಿಸಲಾಗುವ ಯಾವುದೇ ಪ್ರಮಾಣ ಪತ್ರಗಳಿಗೆ ಕಾನೂನುಬದ್ಧವಾಗಿ ಇನ್ನು ಮುಂದೆ ಮಾನ್ಯವಾಗಿರುವುದಿಲ್ಲ.

ಈ ಹಿನ್ನೆಲೆಯಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಈ ಕೆಳಕಂಡ ಸಕಾಲ ಸೇವೆಗಳ ಅರ್ಜಿ ಸ್ವೀಕೃತಿ, ವಿಲೇವಾರಿ ಹಾಗೂ ಪ್ರಮಾಣ ಪತ್ರ ವಿತರಣೆಗಾಗಿ ಮತ್ತು ಆನ್‍ಲೈನ್ ಮೂಲಕ ತೆರಿಗೆ ಪಾವತಿಗಾಗಿ ಬಾಪೂಜಿ ಸೇವಾ ಕೇಂದ್ರ ತಂತ್ರಾಂಶದ ಬಳಕೆಯನ್ನು ಕಡ್ಡಾಯಗೊಳಿಸಿ, ಬಾಪೂಜಿ ಸೇವಾ ಕೇಂದ್ರ ತಂತ್ರಾಂಶವನ್ನು ಅನುಷ್ಠಾನಗೊಳಿಸಿದೆ.

ಯಾವ್ಯಾವ ಸೇವೆ ಲಭ್ಯ

ಆಸ್ತಿ ತೆರಿಗೆ, ವಾಣಿಜ್ಯ ಪರವಾನಿಗೆ, ಕಟ್ಟಡ ಪರವಾನಿಗೆ, ರಸ್ತೆ ಅಗೆಯುವುದಕ್ಕಾಗಿ ಅನುಮತಿ, ಕುಡಿಯುವ ನೀರಿನ ನಿರ್ವಹಣೆ, ಬೀದಿ ದೀಪಗಳ ನಿರ್ವಹಣೆ, ಗ್ರಾಮ ನೈರ್ಮಲ್ಯ ನಿರ್ವಹಣೆ, ಅಕುಶಲ ಕಾರ್ಮಿಕರಿಗೆ ಉದ್ಯೋಗ, ಅಕುಶಲ ಕಾರ್ಮಿಕರಿಗೆ ಉದ್ಯೋಗ ಚೀಟಿ, ESCOMS- ಆಕ್ಷೇಪಣೆ ರಹಿತ ಪತ್ರ ವಿತರಣೆ, ದಾಖಲೆಗಳ ವಿತರಣೆ(ಜನಸಂಖ್ಯೆ, ಬೆಳೆ, ಜಾನುವಾರು ಗಣತಿ, ಬಿಪಿಎಲ್ ಪಟ್ಟಿ).

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News