​ದೊಣ್ಣೆಯಿಂದ ಹೊಡೆದು ಮಹಿಳೆಯ ಕೊಲೆ: ಆರೋಪಿ ಪತಿಯ ಬಂಧನ

Update: 2020-11-19 06:27 GMT

ಕೊರಟಗೆರೆ, ನ.19: ಮಹಿಳೆಯೊಬ್ಬರನ್ನು ದೊಣ್ಣೆಯಿಂದ ತಲೆಗೆ ಹೊಡೆದು ಕೊಲೆಗೈದ ಘಟನೆ ಕೊರಟಗೆರೆ ಪಟ್ಟಣದಲ್ಲಿ ಗುರುವಾರ ಮುಂಜಾವ ನಡೆದಿದೆ. ಮಹಿಳೆಯ ಪತಿಯೇ ಕೊಲೆ ಆರೋಪಿಯಾಗಿದ್ದು, ಆತನನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಕೊರಟಗೆರೆ ಪಟ್ಟಣದ ರೇಣುಕಾ ಆಸ್ಪತ್ರೆ ಹಿಂಭಾಗದಲ್ಲಿ ವಾಸವಿದ್ದ ಜಬಿನಾ(40) ಕೊಲೆಯಾದವರು. ಮೃತರ ಪತಿ ಚಾಂದ್ ಪಾಶಾ ಕೊಲೆ ಆರೋಪಿಯಾಗಿದ್ದಾನೆ. ಇದೇವೇಳೆ ದುಷ್ಕರ್ಮಿಯಿಂದ ದಾಳಿಗೊಳಗಾದ ಜಬಿನಾ ಅವರ ಪುತ್ರ ಮಹಮ್ಮದ್ ಅಲಿ(12) ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.

ಕಳೆದ ರಾತ್ರಿ ಮಲಗಿದ್ದ ಜಬಿನಾ ಮತ್ತು ಮುಹಮ್ಮದ್ ಅಲಿ ಮೇಲೆ ಆರೋಪಿ ಚಾಂದ್ ಪಾಶಾ ದೊಣ್ಣೆಯಿಂದ ಮಾರಣಾಂತಿಕವಾಗಿ ದಾಳಿ ನಡೆಸಿದ್ದಾನೆ ಎಂದು ಹೇಳಲಾಗಿದೆ. ಇದರಿಂದ ಗಂಭೀರ ಗಾಯಗೊಂಡ ಜಬಿನಾ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ತೀವ್ರ ಗಾಯಗೊಂಡಿರುವ ಮುಹಮ್ಮದ್ ಅಲಿಯನ್ನು ಬೆಂಗಳೂರಿನ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಈ ಹತ್ಯೆ ನಡೆದಿರುವ ಬಗ್ಗೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಆರೋಪಿಯನ್ನು ಬಂಧಿಸಿರುವ ಕೊರಟಗೆರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News