ಪರಿಶಿಷ್ಟ ವರ್ಗದವರಿಗೆ ಕ್ಷೌರ ಮಾಡಿದ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ: ಆರೋಪ
Update: 2020-11-19 16:21 GMT
ಮೈಸೂರು, ನ.19: ಪರಿಶಿಷ್ಟ ವರ್ಗದವರಿಗೆ ಕ್ಷೌರ ಮಾಡಿದ ಹಿನ್ನೆಲೆ ಕುಟುಂಬವೊಂದಕ್ಕೆ ಊರಿನ ಮುಖಂಡರು ಸಾಮಾಜಿಕ ಬಹಿಷ್ಕಾರ ಹಾಕಿದ್ದಾರೆ ಎನ್ನಲಾದ ಘಟನೆ ನಂಜನಗೂಡು ತಾಲೂಕು ಹಲ್ಲರೆ ಗ್ರಾಮದಲ್ಲಿ ನಡೆದಿದೆ.
ಕ್ಷೌರ ಮಾಡಿದ ಕಾರಣಕ್ಕೆ ನನಗೆ ದಂಡ ವಿಧಿಸಿ, ಸಾಮಾಜಿಕ ಬಹಿಷ್ಕಾರ ಹಾಕಿದ್ದಾರೆ. ಊರಿನ ಮುಖಂಡರು ಪರಿಶಿಷ್ಟ ವರ್ಗದವರಿಗೆ ಕ್ಷೌರ ಮಾಡಬಾರದು ಎಂದು ನಿರ್ಬಂಧ ವಿಧಿಸಿದ್ದರು. ಆದರೆ, ನಾನು ಸರಕಾರದ ಆದೇಶದಂತೆ ಗ್ರಾಮದ ಪ್ರತಿಯೊಬ್ಬರಿಗೂ ಕ್ಷೌರ ಮಾಡುತ್ತೇನೆ. ಈ ಕಾರಣದಿಂದ ಗ್ರಾಮದ ಮುಖಂಡ ಚೆನ್ನನಾಯಕ ಹಾಗೂ ಈತನ ಸಹಚರರು 50,000 ರೂ. ದಂಡದ ಜೊತೆಗೆ ಸಾಮಾಜಿಕ ಬಹಿಷ್ಕಾರ ಹಾಕಿದ್ದಾರೆ ಎಂದು ಸಂತ್ರಸ್ತ ಮಲ್ಲಿಕಾರ್ಜುನ ಶೆಟ್ಟಿ ಆರೋಪಿಸಿದ್ದಾರೆ.
ಈ ಸಂಬಂಧ ಮಲ್ಲಿಕಾರ್ಜುನ ಶೆಟ್ಟಿ ಅವರು ತಹಶೀಲ್ದಾರ್ ಕಚೇರಿಗೆ ದೂರು ನೀಡಿದ್ದಾರೆ. ಈ ಕುರಿತು ನಂಜನಗೂಡು ತಹಶೀಲ್ದಾರ್ ಮಹೇಶ್ಕುಮಾರ್ ಅವರು ಪೊಲೀಸರಿಗೆ ಪತ್ರ ಬರೆದು ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದಾರೆ.