ಕೊರೋನ ಚಿಕಿತ್ಸೆಗೆ ಸಾರಾಯಿ ಬಳಸಿ ಎಂದು ಸರಕಾರಕ್ಕೆ ಸಲಹೆ ನೀಡಿದ ವಕೀಲ !

Update: 2020-11-22 13:21 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ನ.22: ಕೊರೋನ ಸೋಂಕಿನಿಂದ ಜನರನ್ನು ರಕ್ಷಿಸಲು ಸರಕಾರ ಕೋಟ್ಯಂತರ ರೂ.ಖರ್ಚು ಮಾಡಿ ಔಷಧಿ ತಯಾರಿಕೆಗೆ ಮುಂದಾಗಿದೆ. ಆದರೆ, ಇಲ್ಲೊಬ್ಬರು ವಕೀಲರು ಸಾರಾಯಿ ಬಳಸಿದರೆ ಸೋಂಕಿಗೆ ಚಿಕಿತ್ಸೆ ನೀಡಬಹುದು ಎಂದು ಸರಕಾರಕ್ಕೆ ಸಲಹೆ ನೀಡಿದ್ದಾರೆ.

ತುಮಕೂರಿನ ಶಿರಾ ಮೂಲದ ವಕೀಲ ಎಲ್.ರಾಜಣ್ಣ ಈ ಸಲಹೆ ನೀಡಿರುವವರು. ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳು ಈ ಕುರಿತು ಆಲೋಚಿಸಬೇಕು. ಡಿಸ್ಟಿಲರಿಗಳು ಸರಕಾರಗಳ ನಿಯಂತ್ರಣದಲ್ಲಿ ಇರುವುದರಿಂದ ಸಾರಾಯಿ ಉತ್ಪಾದನೆ ಮಾಡಿಸುವುದು ಸುಲಭ. ಗುಣಮಟ್ಟದ ಸಾರಾಯಿ ಉತ್ಪಾದಿಸಿ ರೋಗಿಗಳ ದೈಹಿಕ ಸಾಮರ್ಥ್ಯ ಆಧರಿಸಿ ಸಿರಪ್ ರೀತಿಯಲ್ಲಿ ಅಲ್ಪ ಪ್ರಮಾಣದಲ್ಲಿ ನೀಡಿದರೆ ಅತ್ಯಂತ ವೇಗವಾಗಿ ಸೋಂಕು ನಿವಾರಿಸಬಹುದು ಎಂದಿದ್ದಾರೆ.

ಆಲ್ಕೋಹಾಲ್ ವೈರಸ್ ಹಾಗೂ ಬ್ಯಾಕ್ಟಿರಿಯಾಗಳನ್ನು ವೇಗವಾಗಿ ಕೊಲ್ಲುತ್ತದೆ ಎಂದು ಈಗಾಗಲೇ ಸಾಬೀತಾಗಿದೆ. ಅದಕ್ಕಾಗಿಯೇ ಸ್ಯಾನಿಟೈಸರ್ ಗಳಲ್ಲಿಯೂ ಆಲ್ಕೋಹಾಲ್ ಸೇರಿಸಲಾಗುತ್ತದೆ. ಸಾರಾಯಿ ಹಾಗೂ ಸೇಂದಿಗಳಲ್ಲಿಯೂ ಆಲ್ಕೋಹಾಲ್ ಇರುತ್ತದೆ. ಸೇಂದಿಗಿಂತ ಸಾರಾಯಿ ಕೊರೋನ ಚಿಕಿತ್ಸೆಗೆ ಹೆಚ್ಚು ಸೂಕ್ತ ಹಾಗೂ ಪರಿಣಾಮಕಾರಿ. ಹೀಗಾಗಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಗುಣಮಟ್ಟದ ಸಾರಾಯಿ ತಯಾರಿಸಿ ಕೊರೋನ ಚಿಕಿತ್ಸೆಗೆ ಬಳಸಬಹುದು ಎಂದು ಸಲಹೆ ನೀಡಿದ್ದಾರೆ.

ನಮ್ಮ ಪೂರ್ವಜರು ಸೇಂದಿ ಹಾಗೂ ಸಾರಾಯಿ ಬಳಸುತ್ತಿದ್ದರು. ಇದರಿಂದ ಹಲವು ರೋಗಗಳು ಮಾಯವಾಗುತ್ತಿದ್ದವು. ತೆಂಗಿನ ಮರ ಹಾಗೂ ಈಚಲು ಮರಗಳ ಹೊಂಬಾಳೆಗಳಿಂದ ಮತ್ತು ಕೆಂಪು ಅಕ್ಕಿಯಿಂದ ಗುಣಮಟ್ಟದ ಸಾರಾಯಿ ತಯಾರಿಸುತ್ತಿದ್ದರು. ಆದರೆ ಸರಕಾರಗಳು ಸಾರಾಯಿ ತಯಾರಿಕೆಯನ್ನು ನಿಷೇಧಿಸಿವೆ. ಹೀಗಾಗಿ ಸರಕಾರಗಳೇ ಡಿಸ್ಟಿಲರಿಗಳ ಮೂಲಕ ಗುಣಮಟ್ಟದ ಸಾರಾಯಿ ಉತ್ಪಾದಿಸಿ, ಸೋಂಕು ನಿವಾರಿಸಲು ಕ್ರಮ ಕೈಗೊಳ್ಳಬೇಕು ಎಂದು ವಕೀಲ ರಾಜಣ್ಣ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News