ಬಳ್ಳಾರಿ ಜಿಲ್ಲೆಯನ್ನು ವಿಭಜಿಸುವ ಸರಕಾರದ ನಿರ್ಧಾರ ನೋವು ತಂದಿದೆ: ಶಾಸಕ ಸೋಮಶೇಖರ್ ರೆಡ್ಡಿ

Update: 2020-11-21 16:05 GMT

ಬಳ್ಳಾರಿ, ನ.21: ಬಳ್ಳಾರಿ ಜಿಲ್ಲೆಯನ್ನು ವಿಭಜಿಸಿ ವಿಜಯನಗರ ಜಿಲ್ಲೆ ಪ್ರತ್ಯೇಕವಾಗಿ ರಚಿಸುತ್ತಿರುವ ಸರಕಾರದ ನಿರ್ಧಾರ ನೋವು ತಂದಿದೆ. ಜಿಲ್ಲೆಯ ಇಬ್ಭಾಗದ ನೋವು ನನ್ನನ್ನು ಸದಾ ಕಾಡುತ್ತದೆ ಎಂದು ಬಳ್ಳಾರಿ ನಗರ ಶಾಸಕ ಜಿ.ಸೋಮಶೇಖರ್ ರೆಡ್ಡಿ ಹೇಳಿದರು.

ರಾಷ್ಟ್ರೀಯ ಅಂಧತ್ವ ನಿವಾರಣಾ ಕಾರ್ಯಕ್ರಮದ ಆಡಿಯಲ್ಲಿ ನಗರದ ಮಿಲ್ಲರ್ ಪೇಟೆಯ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಅಂಧತ್ವ ನಿಯಂತ್ರಣ ವಿಶೇಷ ಅಭಿಯಾನಕ್ಕೆ ಚಾಲನೆ ನೀಡಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಬಳ್ಳಾರಿ ಜಿಲ್ಲೆ ವಿಭಜಿಸಿ, ವಿಜಯನಗರ ರಚನೆ ಮಾಡಲು ನಡೆಯುತ್ತಿರುವ ಹೋರಾಟಕ್ಕೆ ಸಂಬಂಧಿಸಿದಂತೆ ತೀವ್ರ ಅಸಹಾಯಕತೆ ವ್ಯಕ್ತಪಡಿಸಿದ ಶಾಸಕ ಸೋಮಶೇಖರ್ ರೆಡ್ಡಿ, ಇತ್ತೀಚೆಗೆ ಮುಖ್ಯಮಂತ್ರಿಯನ್ನು ಭೇಟಿ ಮಾಡಿ ಬಳ್ಳಾರಿ ವಿಭಜನೆ ಮಾಡದಂತೆ ಮನವಿ ಮಾಡಲಾಗಿದೆ. ಜಿಲ್ಲೆಯು ಇಂದಲ್ಲ ನಾಳೆ ಯಾವುದೇ ಸರಕಾರ ಬಂದ್ರೂ ವಿಭಜನೆಯಾಗೋದು ನಿಲ್ಲಲ್ಲವೆಂದು ಮುಖ್ಯಮಂತ್ರಿ ಸೇರಿದಂತೆ ಅನೇಕ ಹಿರಿಯ ಸಚಿವರು ಹೇಳಿದ್ದಾರೆ. ಪ್ರತಿರೋಧ ಕೈಬಿಡಲು ತಿಳಿಸಿದ್ದಾರೆ ಎಂದರು.

ಬಳ್ಳಾರಿ ವಿಭಜನೆಯಾಗದೇ ಅಖಂಡವಾಗಿರಬೇಕು ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ. ಜಿಲ್ಲೆಯ ಎಲ್ಲ ಶಾಸಕರು ಬಯಸಿದರೆ ಮತ್ತೊಮ್ಮೆ ಮುಖ್ಯಮಂತ್ರಿ ಬಳಿ ನಿಯೋಗ ತೆಗೆದುಕೊಂಡು ಹೋಗುತ್ತೇನೆ. ವಿಜಯನಗರ ಜಿಲ್ಲೆ ರಚನೆ ವಿರೋಧಿಸಿ ವಿವಿಧ ಸಂಘಟನೆಗಳು ನ.26ರಂದು ಬಳ್ಳಾರಿ ಬಂದ್ ಕರೆ ನೀಡಿರುವುದಕ್ಕೆ ಸಂಬಂಧಿಸಿದಂತೆ ಉತ್ತರಿಸಿದ ಅವರು, ಸರಕಾರದ ಭಾಗವಾಗಿ ಬಂದ್‍ಗೆ ನೇರವಾಗಿ ಬೆಂಬಲಿಸಲ್ಲ. ಅವರ ಬಂದ್ ಯಶಸ್ವಿಯಾಗಲಿ ಎಂದು ಆಶಿಸಿದರು.

ಜಿಲ್ಲೆಯಲ್ಲಿ ವಿಧಾನಪರಿಷತ್ ಸದಸ್ಯ ಕೆ.ಸಿ.ಕೊಂಡಯ್ಯ ಬಿಟ್ಟರೆ ಬೇರೆ ಯಾರೂ ಕೂಡ ಜಿಲ್ಲೆ ಇಬ್ಭಾಗಕ್ಕೆ ಬೆಂಬಲಿಸಿಲ್ಲ. ಸಚಿವ ಬಿ.ಶ್ರೀರಾಮುಲು ಸಹಮತ ವ್ಯಕ್ತಪಡಿಸಿರುವುದು ಅವರ ವೈಯಕ್ತಿಕ ವಿಚಾರ ಎಂದ ಅವರು, ಜಾತಿಗೊಂದು ನಿಗಮ ಮಾಡುವುದು ಸರಿಯಲ್ಲ. ನಿಗಮದ ಬದಲಿಗೆ ಸರಕಾರವು ಎಲ್ಲ ಜಾತಿಗಳಲ್ಲಿನ ಬಡಜನರಿಗೆ ಸಹಾಯ ಮಾಡುವ ಕೆಲಸ ಮಾಡಲಿ ಎಂದರು. ಈ ಸಂದರ್ಭದಲ್ಲಿ ಮುಖಂಡ ಶ್ರೀನಿವಾಸ್ ಮೋತ್ಕರ್ ಮತ್ತಿತರರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News