ದಾರಿ ತಪ್ಪಿರುವ ಕಾಂಗ್ರೆಸ್ಸಿಗರಿಗೆ ದೇಶಭಕ್ತಿಯ ಪಾಠ ಹೇಳಿಕೊಡಲು ಯಾರಿದ್ದಾರೆ ?

Update: 2020-11-22 14:31 GMT

ಬೆಂಗಳೂರು, ನ. 22: "ಮಹಾತ್ಮ ಗಾಂಧಿಯವರು ಬದುಕಿಲ್ಲ, ಕಾಂಗ್ರೆಸ್ ಅವರ ತತ್ವಕ್ಕೆ ನೆಹರು ಅವರ ಕಾಲದಲ್ಲಿಯೇ ಎಳ್ಳುನೀರು ಬಿಟ್ಟಾಗಿದೆ. ದೇಶಭಕ್ತಿ ಸರಳವಾಗಿ ಅರ್ಥವಾಗಲು 'ಸಂಘದ ಶಾಖೆ'ಗಿಂತ ಬೇರೆ ದಾರಿಯಿಲ್ಲ. ಅದಕ್ಕಾಗಿಯೇ ಸಾರ್ವಜನಿಕ ರೂಪದ ಸಂಪರ್ಕ ಮಾಡಿದ್ದೇನೆ. ಇನ್ನೆಷ್ಟು ದಿನ ನಯವಂಚಕ, ಸ್ವಾರ್ಥದ ರಾಜಕಾರಣ? ನಿಮಗೆ ಬಿಟ್ಟಿದ್ದು..." ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ಮಾಜಿ ಸಚಿವ ಸಿ.ಟಿ.ರವಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯನವರಿಗೆ ತಿರುಗೇಟು ನೀಡಿದ್ದಾರೆ.

ರವಿವಾರ ಸರಣಿ ಟ್ವೀಟ್ ಮಾಡಿರುವ ಅವರು, 'ನೀವಿರುವ ಪಕ್ಷದಲ್ಲಿ ದೇಶಕ್ಕಿಂತ ಮತಬ್ಯಾಂಕ್ ಮುಖ್ಯವಾಗಿದೆ, ಪ್ರಜಾಪ್ರಭುತ್ವಕ್ಕಿಂತ ರಾಜ ಪ್ರಭುತ್ವದ ಮಾದರಿಯ ಕುಟುಂಬ ರಾಜಕಾರಣವಿದೆ. ದಾರಿ ತಪ್ಪಿರುವ ಕಾಂಗ್ರೆಸ್ಸಿಗರಿಗೆ ದೇಶಭಕ್ತಿಯ ಪಾಠ ಹೇಳಿಕೊಡಲು ಯಾರಿದ್ದಾರೆ?' ಎಂದು ಪ್ರಶ್ನಿಸಿದ್ದಾರೆ.

'ನಾನು ನಿಮ್ಮ ಹಾಗೆ, ನೀವು ಕಾಂಗ್ರೆಸ್ ಸಂಸ್ಥಾಪಕ ಎಓ ಹ್ಯೂಮ್‍ರ ಮೊಮ್ಮಗನೋ, ಮರಿಮಗನೋ ಎಂದು ಕೇಳುವುದಿಲ್ಲ. ಇಂದಿರಾ ಗಾಂಧಿಯವರ ದತ್ತುಪುತ್ರ ಎಂದು ಹೇಳುವುದಿಲ್ಲ. ಅಧಿಕಾರಕ್ಕಾಗಿ ಪಕ್ಷ ಬದಲಾಯಿಸಿದರು ಎಂದು ಆರೋಪಿಸುವುದಿಲ್ಲ. ಬದಲಾಗಿ ವಂಶವಾದಕ್ಕಿಂತ, ಜಾತಿವಾದಕ್ಕಿಂತ, ರಾಷ್ಟ್ರವಾದ ದೇಶಕ್ಕೆ ಒಳ್ಳೆಯದು ಎಂದಷ್ಟೇ ಹೇಳಬಯಸುತ್ತೇನೆ' ಎಂದು ಸಿ.ಟಿ.ರವಿ ಟೀಕಿಸಿದ್ದಾರೆ.

'ಸಂಘ ಸ್ವಯಂಸೇವಕರಿಗೆ ಹೇಳಿಕೊಟ್ಟಿದ್ದು ದೇಶ ಮೊದಲು ಎನ್ನುವ ತತ್ವವನ್ನು. 'ಸ್ವಂತಕ್ಕೆ ಸ್ವಲ್ಪ ಸಮಾಜಕ್ಕೆ ಸರ್ವಸ್ವ' ಎಂಬ ಭಾವವನ್ನು. ಇದು ಅರ್ಥ ವಾಗಬೇಕಾದರೆ, ಅಸ್ಪೃಶ್ಯತೆಯ, ಜಾತೀಯತೆಯ ಸೋಂಕಿಲ್ಲದೆ ನಾವೆಲ್ಲರೂ ಒಂದು, ಭಾರತಮಾತೆಯ ಮಕ್ಕಳು ಎಂದು ಬದುಕಬೇಕಾದರೆ ನೀವು 'ಶಾಖೆ'ಗೆ ಬರಬೇಕು' ಎಂದು ಸಿ.ಟಿ.ರವಿ, ಸಿದ್ದರಾಮಯ್ಯನವರನ್ನು ಮತ್ತೊಮ್ಮೆ ಸಂಘದ ಶಾಖೆಗೆ ಆಹ್ವಾನಿಸಿದರು.

'ಸಿದ್ದರಾಮಯ್ಯನವರೇ, ನಾನು ಆರೆಸೆಸ್ಸ್ ಸಂಸ್ಥಾಪಕ ಅಲ್ಲ, ನಾನೊಬ್ಬ ಸಂಘದ ಸ್ವಯಂಸೇವಕ. ಪರಮ ಪೂಜ್ಯ ಡಾ.ಕೇಶವ ಬಲಿರಾಮ ಹೆಡಗೇವಾರ್ ಅವರು ಗುರುವಾಗಿ ಸ್ವೀಕರಿಸಿದ್ದು ಸಹಸ್ರಾರು ವರ್ಷಗಳಿಂದ ಪ್ರೇರಣೆ ನೀಡಿದ ಭಗವದ್ ಧ್ವಜವನ್ನು ಮತ್ತು 'ವ್ಯಕ್ತಿಗಿಂತ ತತ್ವ ಶ್ರೇಷ್ಠ' ಎಂಬ ಸಿದ್ದಾಂತವನ್ನು' ಎಂದು ರವಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News