ತಮಿಳುನಾಡು ರಾಜಕೀಯ ದಿಕ್ಕುದೆಸೆ ಇಲ್ಲದೆ, ಹಿಮ್ಮುಖವಾಗಿ ಚಲಿಸುತ್ತಿದೆ: ಡಾ.ಅಶ್ವತ್ಥನಾರಾಯಣ

Update: 2020-11-22 17:18 GMT

ಕೊಯಮತ್ತೂರು, ನ.22: ಅಭಿವೃದ್ಧಿಯಲ್ಲಿ ಉನ್ನತ ಸ್ಥಾನದಲ್ಲಿ ಇರಬೇಕಾಗಿದ್ದ ತಮಿಳುನಾಡು ರಾಜ್ಯವು ಭ್ರಷ್ಟ ರಾಜಕೀಯ ಕೂಟಗಳು ಹಾಗೂ ಕೌಟುಂಬಿಕ ಸ್ವಾರ್ಥ ರಾಜಕಾರಣದ ಬಲೆಯಲ್ಲಿ ಸಿಕ್ಕಿ ನರಳುತ್ತಿದೆ ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವತ್ಥನಾರಾಯಣ ದೂರಿದರು.

ರವಿವಾರ ತಮಿಳುನಾಡಿನ ಕೊಯಮತ್ತೂರಿನಲ್ಲಿ ರಾಜ್ಯ ಬಿಜೆಪಿ ಘಟಕ ಹಮ್ಮಿಕೊಂಡಿದ್ದ ʼವೆಟ್ರಿವೇಲ್ʼ ಯಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಭಾರತೀಯ ಒಕ್ಕೂಟ ವ್ಯವಸ್ಥೆಯಲ್ಲಿ ತಮಿಳುನಾಡಿಗೆ ಬಹಳ ಮಹತ್ವದ ಸ್ಥಾನವಿದೆ. ಇತರೆ ರಾಜ್ಯಗಳೆಲ್ಲ ಒಂದು ನಿರ್ದಿಷ್ಟ ದಿಕ್ಕಿನಲ್ಲಿ ಪ್ರಗತಿಯತ್ತ ಸಾಗುತ್ತಿದ್ದರೆ, ಈ ರಾಜ್ಯ ಮಾತ್ರ ರಾಜಕೀಯ ದಿಕ್ಕುದೆಸೆ ಇಲ್ಲದೆ, ಹಿಮ್ಮುಖವಾಗಿ ಚಲಿಸುತ್ತಿದೆ ಎಂದರು.

ಕೆಲವರು ನಮ್ಮ ದೈವ ಮುರುಗನ್‌ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಇದು ನಿಜಕ್ಕೂ ಖಂಡನೀಯ. ನಮ್ಮ ದೇವರು, ಸಂಸ್ಕೃತಿ, ಧರ್ಮದ ಬಗ್ಗೆ ಯಾರೇ ಆಗಲಿ ಅವಹೇಳನಕಾರಿಯಾಗಿ ಮಾತನಾಡಿದರೆ ಸಹಿಸುವ ಪ್ರಶ್ನೆ ಇಲ್ಲ. ಅಂಥವರಿಗೆ ತಕ್ಕ ಪಾಠ ಕಲಿಸಲಾಗುವುದು ಎಂದು ಡಿಸಿಎಂ ಗುಡುಗಿದರು.

ತಮಿಳುನಾಡಿನಲ್ಲಿ ರಾಜಕೀಯ ಬದಲಾವಣೆಗೆ ಇದು ಸಕಾಲ. ಈಗಲ್ಲದಿದ್ದರೆ ಇನ್ನೆಂದಿಗೂ ಅಲ್ಲ. ಮುಂದಿನ ಚುನಾವಣೆಯಲ್ಲಿ ಭ್ರಷ್ಟ ರಾಜಕೀಯ ಕೂಟಗಳಿಗೆ, ಕುಟುಂಬಗಳ ಆಧಾರಿತ ಸ್ವಾರ್ಥ ರಾಜಕಾರಣಕ್ಕೆ ಮಣೆ ಹಾಕಬಾರದು. ಅಭಿವೃದ್ಧಿ ಮತ್ತು ಉತ್ತಮ ಆಡಳಿತ ಅಂತ ಬಂದರೆ ಬಜೆಪಿಗಿಂತ ಅತ್ಯುತ್ತಮ ಆಯ್ಕೆ ಇನ್ನೊಂದಿಲ್ಲ ಎಂದು ಡಾ.ಅಶ್ವತ್ಥನಾರಾಯಣ ಪ್ರತಿಪಾದಿಸಿದರು.

ಈ ಸಂದರ್ಭದಲ್ಲಿ ವೆಟ್ರಿವೇಲ್ ಯಾತ್ರೆಯ ರೂವಾರಿ ತಮಿಳುನಾಡು ಬಿಜೆಪಿ ಅಧ್ಯಕ್ಷ ಡಾ.ಮುರುಗನ್, ಉಪಾಧ್ಯಕ್ಷ ಹಾಗೂ ಮಾಜಿ ಐಪಿಎಸ್‌ ಅಧಿಕಾರಿ ಅಣ್ಣಾಮಲೈ, ಮತ್ತೊಬ್ಬ ಉಪಾಧ್ಯಕ್ಷ ನರೇಂದ್ರನ್ ಸೇರಿದಂತೆ ಅನೇಕ‌ ಮುಖಂಡರು‌ ಹಾಜರಿದ್ದರು.‌ ರಾಜ್ಯದಲ್ಲಿ ಹೊಸ ಅಲೆ ಎಬ್ಬಿಸಿರುವ ಈ ವೆಟ್ರಿವೇಲ್ ಯಾತ್ರೆಯಲ್ಲಿ ಸಾವಿರಾರು‌ ಜನರು ಭಾಗವಹಿಸಿದ್ದರು. 

ಈ ಯಾತ್ರೆಯಲ್ಲಿ ಪಾಲ್ಗೊಳ್ಳುವುದಕ್ಕೆ ಮುನ್ನ ಕೊಯಮತ್ತೂರು ನಗರಕ್ಕೆ 15 ಕಿ.ಮೀ. ದೂರದಲ್ಲಿ ಇರುವ ಮರುದಾಮಲೈನಲ್ಲಿರುವ ಮುರುಗರ ದೇವಸ್ಥಾನಕ್ಕೆ ಭೇಟಿ ‌ನೀಡಿ ದೇವರ ದರ್ಶನ ಪಡೆದರು. ಇವತ್ತಿನ ಯಾತ್ರೆ ತಿರುತ್ತಣಿಯಿಂದ ತಿರುಚ್ಚೆಂದೂರ್ ದೇವಸ್ಥಾನದವರೆಗೆ ಸಾಗಿದೆ. ಈ ಯಾತ್ರೆಗೆ ಡಿಸಿಎಂ ಶುಭಹಾರೈಸಿದರು.

ಏನಿದು ಯಾತ್ರೆ?
ಡಿಎಂಕೆ ನಾಯಕರೊಬ್ಬರು ತಮಿಳುನಾಡಿನ ಆರಾಧ್ಯ ದೈವ ಮುರುಗರ ಬಗ್ಗೆ ಅವಹೇಳನಕಾರಿಯಾಗಿ ಹೇಳಿಕೆ ನೀಡಿದ್ದರು. ಇದು ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು. ಇದನ್ನು ಖಂಡಿಸಿ ರಾಜ್ಯ ಬಿಜೆಪಿ ಅಧ್ಯಕ್ಷ ಮುರುಗನ್‌ ಅವರು ರಾಜ್ಯದಲ್ಲಿರುವ ಆರು ಮುರುಗರ ಕ್ಷೇತ್ರಗಳ ಯಾತ್ರೆ ಕೈಗೊಂಡಿದ್ದಾರೆ. ಮುರುಗರ ಆಯುಧವಾದ ವೇಲ್‌ (ದಂಡ)ವನ್ನು ಕೈಯ್ಯಲ್ಲಿಡಿದು ಅವರು ಯಾತ್ರೆ ಕೈಗೊಂಡಿದ್ದು, ಅದು ಡಿಸೆಂಬರ್‌ 5ರಂದು ಕೊನೆಗೊಳ್ಳಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News