ಈ ವರ್ಷ ಶಾಲೆ ತೆರೆಯದಿರಲು ರಾಜ್ಯ ಸರಕಾರದ ನಿರ್ಧಾರ ಆಘಾತಕಾರಿ : ಎಐಎಸ್ಎಫ್

Update: 2020-11-23 12:22 GMT

ಮಂಗಳೂರು : ರಾಜ್ಯದಲ್ಲಿ ಈ ಶೈಕ್ಷಣಿಕ ವರ್ಷವಿಡೀ ಶಾಲೆಗಳನ್ನು ತೆರೆಯದಿರಲು ರಾಜ್ಯ ಸರಕಾರವು ನಿರ್ಧರಿಸಿರುವುದು ಆಘಾತಕಾರಿ ಯಾಗಿದ್ದು, ಈ ಕೂಡಲೇ ಅದನ್ನು ಹಿಂಪಡೆಯಬೇಕೆಂದೂ, ಶಾಲೆಗಳನ್ನು ಕೂಡಲೇ ತೆರೆಯಲು ವ್ಯವಸ್ಥೆಗಳನ್ನು ಮಾಡಬೇಕೆಂದೂ ಅಖಿಲ ಭಾರತ ವಿದ್ಯಾರ್ಥಿ ಫೆಡರೇಷನ್ (ಎಐಎಸ್ ಎಫ್) ಒತ್ತಾಯಿಸಿದೆ.

ಕೊರೋನ ನೆಪದಲ್ಲಿ ಕಳೆದ 9 ತಿಂಗಳಿಂದ ಶಾಲೆಗಳನ್ನು ಮುಚ್ಚಿರುವುದು ಮಕ್ಕಳ ಶೈಕ್ಷಣಿಕ, ದೈಹಿಕ, ಮಾನಸಿಕ ಹಾಗೂ ಸಾಮಾಜಿಕ ಆರೋಗ್ಯದ ಮೇಲೆ ಅತಿ ಗಂಭೀರವಾದ ಪರಿಣಾಮಗಳನ್ನುಂಟು ಮಾಡಲಿವೆ. ಈಗಾಗಲೇ ರಾಜ್ಯದ ಮಕ್ಕಳು ಅಪೌಷ್ಠಿಕತೆಗೆ ಈಡಾಗಿದ್ದಾರೆನ್ನುವ ವರದಿಗಳು ಪ್ರತಿನಿತ್ಯವೂ ಬರುತ್ತಿದ್ದು, ಆನ್ ಲೈನ್ ಶಿಕ್ಷಣದಿಂದ ಹೆಚ್ಚಿನ ಮಕ್ಕಳು, ಅದರಲ್ಲೂ ಬಡವರ್ಗಗಳ ಮಕ್ಕಳು, ವಂಚಿತರಾಗಿರುವ ಬಗ್ಗೆ, ಬಗೆಬಗೆಯ ಕಷ್ಟಗಳಿಗೀಡಾಗಿರುವ ಬಗ್ಗೆಯೂ ವರದಿಗಳಾಗುತ್ತಲೇ ಇವೆ.

ಕೊರೋನ ಸೋಂಕಿನ ಹರಡುವಿಕೆಯು ಈಗಾಗಲೇ ಇಳಿಮುಖವಾಗುತ್ತಿದ್ದು, ಇದುವರೆಗೆ ರಾಜ್ಯದಲ್ಲಿ ಸೋಂಕಿತರಾಗಿರುವ ಜನರಲ್ಲಿ ಮಕ್ಕಳ ಸಂಖ್ಯೆಯು ಅತ್ಯಲ್ಪವಾಗಿರುವುದು ಮತ್ತು ಕೊರೋನ ಸೋಂಕಿನಿಂದ ಆಸ್ಪತ್ರೆಗಳಲ್ಲಿ ದಾಖಲಾಗುವವರಲ್ಲಿ ಮಕ್ಕಳ ಸಂಖ್ಯೆಯು ಬೆರಳೆಣಿಕೆಯಷ್ಟೂ ಇಲ್ಲದಿರುವುದು ಸ್ಪಷ್ಟವಾಗಿದೆ. ಈ ಕುರಿತಾದ ಎಲ್ಲಾ ಮಾಹಿತಿಯೂ ಸರಕಾರದ ಬಳಿಯಿದ್ದು, ಅದನ್ನು ಯಥಾವತ್ತಾಗಿ ಕೂಡಲೇ ಜನರ ಮುಂದಿಡಬೇಕೆಂದು ಒತ್ತಾಯಿಸುತ್ತೇವೆ ಮತ್ತು ಆ ಮೂಲಕ ಜನರಲ್ಲಿ ಧೈರ್ಯ ತುಂಬಬೇಕೆಂದು ಒತ್ತಾಯಿಸುತ್ತೇವೆ.

ಕೊರೋನದಿಂದ ಸಮಸ್ಯೆಗೀಡಾಗಬಲ್ಲ ಮತ್ತು ಅದನ್ನು ಎಲ್ಲರಿಗೂ ಹರಡಬಲ್ಲ ಹಿರಿವಯಸ್ಕರು ಮತ್ತು ಅನ್ಯರೋಗಗಳಿರುವ ವಯಸ್ಕರನ್ನು ಎಲ್ಲೆಡೆ ಓಡಾಡಲು ಬಿಟ್ಟಿರುವಾಗ ಕೊರೋನದಿಂದ ಸಮಸ್ಯೆಗಳಾಗದೆ ಇರುವ ಮತ್ತು ಕೊರೋನವನ್ನು ಹರಡುವಲ್ಲಿ ಅತಿ ನಗಣ್ಯವಾದ ಪಾತ್ರವನ್ನು ವಹಿಸುವ ಮಕ್ಕಳನ್ನು ಹೀಗೆ ಶಾಲೆಗಳಿಂದ ದೂರವಿಟ್ಟು ಮನೆಯೊಳಗೆ ಬಂಧಿಸಿಡುವುದು ತೀರಾ ಅವೈಜ್ಞಾನಿಕವೂ, ಅನ್ಯಾಯವೂ ಆಗಿದೆ. ಶಾಲೆಗಳನ್ನು ಮುಚ್ಚಿದ್ದರಿಂದ ಕೊರೋನ ಸೋಂಕನ್ನು ತಡೆಯಲು ಸಾಧ್ಯವಾಗಿಲ್ಲ ಎನ್ನುವುದೀಗ ರಾಜ್ಯದಲ್ಲೇ ಸಾಬೀತಾಗಿದೆ ಮತ್ತು ಶಾಲೆಗಳನ್ನು ತೆರೆಯುವುದರಿಂದ ಕೊರೋನ ಹರಡುವುದಕ್ಕೆ ಕಾರಣವಾಗುವುದಿಲ್ಲ ಎನ್ನುವುದು ಈಗಾಗಲೇ ಶಾಲೆಗಳನ್ನು ತೆರೆದಿರುವ ಹಲವು ದೇಶಗಳಿಂದ ಸಾಬೀತಾಗಿದೆ. ರಾಜ್ಯದಲ್ಲಿ ಈಗಾಗಲೇ ನಡೆಸಲಾಗಿರುವ 10ನೆ, 12ನೆ ಹಾಗೂ ಇತರ ಪದವಿ ತರಗತಿಗಳ ಪರೀಕ್ಷೆಗಳಿಂದ, ಮತ್ತು ಪ್ರವೇಶ ಪರೀಕ್ಷೆಗಳಿಂದ ಯಾರಿಗೂ ಸಮಸ್ಯೆಗಳಾಗಿಲ್ಲ ಎನ್ನುವುದೂ ಸ್ಪಷ್ಟವಾಗಿದೆ. ಆದ್ದರಿಂದ ಕೊರೋನ ನಿಯಂತ್ರಣ ಮತ್ತು ಅದರ ಸಮಸ್ಯೆಗಳನ್ನು ನಿಭಾಯಿಸುವ ಹೊಣೆಯನ್ನು ಮಕ್ಕಳ ಮೇಲೆ ವರ್ಗಾಯಿಸಿ ಅವರ ಭವಿಷ್ಯವನ್ನೂ, ಸಮಗ್ರ ಆರೋಗ್ಯವನ್ನೂ ಕೆಡಿಸುವುದು ಯಾವ ದೃಷ್ಟಿಯಿಂದಲೂ ನ್ಯಾಯೋಚಿತವಲ್ಲ.

''ಸರಕಾರದ ಇಂದಿನ ನಿರ್ಧಾರವನ್ನು ನಾವು ಖಂಡಿಸುತ್ತೇವೆ ಮತ್ತು ಅದನ್ನು ಈ ಕೂಡಲೇ ಹಿಂಪಡೆದು, ಕೊರೋನ ನಿಭಾವಣೆಗೆ ವೈಜ್ಞಾನಿಕ ಕ್ರಮಗಳನ್ನು ಅನುಸರಿಸಿ, ಮಕ್ಕಳನ್ನು ಕೊರೋನ ನಿಯಂತ್ರಣದ ಹೆಸರಲ್ಲಿ ಬಲಿಪಶುಗಳನ್ನಾಗಿ ಮಾಡದೇ, ಶಾಲೆಗಳನ್ನು ಈ ಕೂಡಲೇ ತೆರೆಯಬೇಕೆಂದು ಬಲವಾಗಿ ಒತ್ತಾಯಿಸುತ್ತೇವೆ.''

-ಜ್ಯೋತಿ .ಕೆ,

ಎಐಎಸ್ ಎಫ್ ಕರ್ನಾಟಕ ರಾಜ್ಯಾಧ್ಯಕ್ಷರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News