ಅನೈತಿಕ ಸಂಬಂಧ: ಪ್ರಿಯಕರನೊಂದಿಗೆ ಸೇರಿ ಪತಿಯ ಹತ್ಯೆಗೈದ ಪತ್ನಿ

Update: 2020-11-23 16:34 GMT

ಚಿಕ್ಕಮಗಳೂರು, ನ.23: ಪ್ರಿಯಕರನೊಂದಿಗಿದ್ದ ವೇಳೆ ಪತಿ ಕೈಗೆ ಸಿಕ್ಕಿಬಿದ್ದ ಪತ್ನಿ ತನ್ನ ಪ್ರಿಯಕರನೊಂದಿಗೆ ಸೇರಿ ಪತಿಯನ್ನೇ ಕೊಂದು ಹಾಕಿರುವ ಘಟನೆ ಕಡೂರು ತಾಲೂಕಿನ ಸಖರಾಯಪಟ್ಟಣ ಹೋಬಳಿ ವ್ಯಾಪ್ಪಿಯ ದೊಡ್ಡಹಟ್ಟಿ ಗ್ರಾಮದಲ್ಲಿ ವರದಿಯಾಗಿದೆ.

ಸಖರಾಯಪಟ್ಟಣ ಹೋಬಳಿಯ ದೊಡ್ಡಹಟ್ಟಿ ಗ್ರಾಮದಲ್ಲಿ ಪ್ರದೀಪ್ ಹಾಗೂ ರಾಗಿಣಿ ದಂಪತಿ ಯೋಗೇಂದ್ರ ಎಂಬವರ ಬಾಡಿಗೆ ಮನೆಯಲ್ಲಿ ವಾಸವಿದ್ದರು. ರಾಗಿಣಿ ಬೇರೊಬ್ಬ ವ್ಯಕ್ತಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದು, ರವಿವಾರ ರಾತ್ರಿ ತನ್ನ ಪತ್ನಿ ಆಕೆಯ ಪ್ರಿಯಕರ ಶ್ರೀನಿವಾಸ್ ಎಂಬಾತನೊಂದಿಗೆ ಇದ್ದ ದೃಶ್ಯವನ್ನು ಕಂಡ ಪ್ರದೀಪ್ ಕುಪಿತಗೊಂಡಿದ್ದಾನೆ. ಈ ವೇಳೆ ಪತ್ನಿ ಹಾಗೂ ಆಕೆಯ ಪ್ರಿಯಕರ ಇಬ್ಬರೂ ಸೇರಿಕೊಂಡು ಪ್ರದೀಪ್ ಕುತ್ತಿಗೆ ಬಿಗಿದು ಹತ್ಯೆ ಮಾಡಿದ್ದಾರೆಂದು ತಿಳಿದು ಬಂದಿದೆ.

ಸೋಮವಾರ ಬೆಳಗ್ಗೆ ನೆರೆ ಮನೆಯಲ್ಲೇ ವಾಸವಿದ್ದ ಯೋಗೇಂದ್ರ ಎಂಬವರು ಪ್ರದೀಪ್ ಮನೆ ಬಳಿ ನೋಡಿದಾಗ ಪ್ರದೀಪ್ ಮೃತಪಟ್ಟ ಸ್ಥತಿಯಲ್ಲಿ ಪತ್ತೆಯಾಗಿದ್ದು, ಪ್ರದೀಪ್‍ನ ಎರಡು ಕಣ್ಣುಗಳ ರೆಪ್ಪೆಯನ್ನೇ ಕಿತ್ತುಹಾಕಿದ್ದಲ್ಲದೇ ತೀವ್ರ ಹಲ್ಲೆ ಮಾಡಿರುವುದು ಕಂಡು ಬಂದಿದ್ದರಿಂದ ಕೂಡಲೇ ಅವರು ಸಖರಾಯಪಟ್ಟಣ ಪೊಲೀಸರಿಗೆ ದೂರು ನೀಡಿದ್ದಾರೆ.

ಸ್ಥಳಕ್ಕೆ ಕಡೂರು ಸಿಪಿಐ ಹಾಗೂ ಎಸ್ಪಿ ಅಕ್ಷಯ್ ಮಚೀಂದ್ರ ಭೇಟಿ ನೀಡಿ ಪರಿಶೀಲಿಸಿ ದೂರು ದಾಖಲಿಸಿಕೊಂಡು ಆರೋಪಿಗಳಾದ ರಾಗಿಣಿ ಹಾಗೂ ಶ್ರೀನಿವಾಸ್‍ನನ್ನು ಬಂಧಿಸಿದ್ದಾರೆಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News