ಕೋವಿಡ್, ಮಾದಕ ವಸ್ತುವಿನ ವಿರುದ್ಧ 'ಡಯಲ್ 112': ಕೊಡಗು ಜಿಲ್ಲಾ ಪೊಲೀಸ್ ವತಿಯಿಂದ ವಾಹನ ಜಾಗೃತಿ ಜಾಥಾ

Update: 2020-11-23 18:06 GMT

ಮಡಿಕೇರಿ ನ.23 : ಕೋವಿಡ್ ಜಾಗೃತಿ, ಮಾದಕ ವಸ್ತುವಿನ ವಿರುದ್ಧ ಯುದ್ಧ ಹಾಗೂ ಡಯಲ್ 112 ಕುರಿತು ಕೊಡಗು ಜಿಲ್ಲಾ ಪೊಲೀಸ್ ಇಲಾಖೆ ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ವಾಹನ ಜಾಗೃತಿ ಜಾಥಾ ನಡೆಸಿತು. 

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿ ಎದುರು ಪೊಲೀಸ್ ವಾಹನ ಜಾಗೃತಿ ಜಾಥಾಕ್ಕೆ ದಕ್ಷಿಣ ವಲಯ ಪೊಲೀಸ್ ಮಹಾ ನಿರೀಕ್ಷಕ ವಿಪುಲ್ ಕುಮಾರ್ ಅವರು ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು. ಬಳಿಕ ನಗರದ ಮುಖ್ಯ ರಸ್ತೆಗಳಲ್ಲಿ ಸಂಚರಿಸಿದ ಪೊಲೀಸ್ ವಾಹನ ಜಾಗೃತಿ ಜಾಥಾ ಸಾರ್ವಜನಿಕರಲ್ಲಿ ಅರಿವು ಮೂಡಿಸಿತು. 

ಸುದ್ದಿಗಾರರೊಂದಿಗೆ ಮಾತನಾಡಿದ ಐಜಿಪಿ ವಿಪುಲ್ ಕುಮಾರ್ ಅವರು ಕೊಡಗು ಜಿಲ್ಲೆಯಲ್ಲಿ ಕೋವಿಡ್ ಕೇಸ್‍ಗಳ ಸಂಖ್ಯೆ ಕಡಿಮೆ ಇದೆಯಾದರೂ ಪ್ರತಿ ದಿನವೂ ಕೇಸ್‍ಗಳು ಪತ್ತೆಯಾಗುತ್ತಿವೆ. ಜಿಲ್ಲೆಯ ಜನರು, ಪೊಲೀಸ್ ಇಲಾಖೆ, ವಿವಿಧ ಸರಕಾರಿ ಇಲಾಖೆಗಳು ಕೋವಿಡ್ ವಿರುದ್ಧದ ಹೋರಾಟದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಜಿಲ್ಲೆಯ ಜನರು ಶಿಸ್ತು ಬದ್ದವಾಗಿ ಕೋವಿಡ್ ವಿರುದ್ಧ ಹೋರಾಡುತ್ತಿರುವುದು ಶ್ಲಾಘನೀಯ. ಕೊಡಗು ಜಿಲ್ಲೆಯ ಜನರ ಹೋರಾಟಕ್ಕೆ ಧನ್ಯವಾದ ಅರ್ಪಿಸುವುದಾಗಿ ಹೇಳಿದರು. 

ಕಳೆದ 2-3 ತಿಂಗಳಿಂದ ಪೊಲೀಸ್ ಇಲಾಖೆ ಡ್ರಗ್ಸ್ ವಿರುದ್ಧ ಯುದ್ದವನ್ನು ಆರಂಭಿಸಿದೆ. ಡ್ರಗ್ಸ್‍ನ ಬಳಕೆ, ಮಾರಾಟ, ಸಾಗಾಟಕ್ಕೆ ಸಂಪೂರ್ಣ ಕಡಿವಾಣ ಹಾಕುವ ಉದ್ದೇಶದಿಂದ ಈ ಯುದ್ಧ ಪ್ರಾರಂಭಿಸಲಾಗಿದ್ದು, ಈ ಮಾರಕ ಜಾಲವನ್ನು ರಾಜ್ಯದಿಂದಲೇ ಕಿತ್ತು ಹಾಕಬೇಕಿದೆ. ಹೀಗಾಗಿ ಸಾರ್ವಜನಿಕರು ಇಂತಹ ಮಾದಕ ಅವ್ಯವಹಾರಗಳ ಬಗ್ಗೆ ಮಾಹಿತಿ ಇದ್ದಲ್ಲಿ, ಪೊಲೀಸ್ ಇಲಾಖೆಗೆ ನೀಡಬೇಕು ಎಂದು ಮನವಿ ಮಾಡಿದರು.

ಮುಂದಿನ 2 ತಿಂಗಳಲ್ಲಿ ಎಲ್ಲಾ ರೀತಿಯ ತುರ್ತು ಸೇವೆಗಳಿಗೆ ಡಯಲ್ 112 ಆರಂಭವಾಗಲಿದ್ದು, ಈ ಬಗ್ಗೆಯೂ ವಾಹನ ಜಾಥಾದ ಮೂಲಕ ಸಾರ್ವಜನಿಕರಿಗೆ ಅರಿವು ಮೂಡಿಸಲಾಗುತ್ತಿದೆ. ಪೊಲೀಸ್, ಅಗ್ನಿ ಶಾಮಕ ಇಲಾಖೆ, ಆರೋಗ್ಯ ಇಲಾಖೆ ಸೇರಿದಂತೆ ಎಲ್ಲಾ ರೀತಿಯ ತುರ್ತು ಸೇವೆಗಳನ್ನು ಪಡೆಯಲು 112 ಡಯಲ್ ಆರಂಭವಾಗಿದ್ದು, ಮುಂದಿನ 2 ತಿಂಗಳ ಒಳಗಾಗಿ ಕೊಡಗು ಜಿಲ್ಲೆಯಲ್ಲಿಯೂ ಪೂರ್ಣ ಪ್ರಮಾಣದಲ್ಲಿ ಜಾರಿಗೆ ಬರಲಿದೆ ಎಂದು ಹೇಳಿದರು.

ಕೂಂಬಿಂಗ್ ನಿರಂತರ
ಕೊಡಗು ಜಿಲ್ಲೆಯ ಗಡಿ ಭಾಗಗಳಲ್ಲಿ ಎಎನ್‍ಎಫ್, ಅರಣ್ಯ ಇಲಾಖೆ ಮೂಲಕ ನಿರಂತರವಾಗಿ ಕೂಂಬಿಂಗ್ ಕಾರ್ಯಾಚರಣೆ ನಡೆಯುತ್ತಿದೆ. ಕೊಡಗು ಜಿಲ್ಲೆಯಲ್ಲಿ ಸಮಾಜ ಘಾತುಕ ಶಕ್ತಿಗಳ ಚಟುವಟಿಕೆ ಇಲ್ಲದಿದ್ದರೂ ಕೂಡ ಅದರ ಬಗ್ಗೆ ಎಲ್ಲಾ ರೀತಿ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ದಕ್ಷಿಣ ವಲಯ ಪೊಲೀಸ್ ಮಹಾ ನಿರೀಕ್ಷಕ ವಿಪುಲ್ ಕುಮಾರ್ ಹೇಳಿದರು. ರವಿವಾರ ವಿರಾಜಪೇಟೆಗೆ ತೆರಳಿ ಅಲ್ಲಿ ಸಾರ್ವಜನಿಕರ ಸಭೆ ನಡೆಸಿ ಸಲಹೆಗಳನ್ನು ಪಡೆದಿರುವುದಾಗಿ ತಿಳಿಸಿದ ವಿಪುಲ್ ಕುಮಾರ್ ಕೊಡಗು, ಕೇರಳ, ಮೈಸೂರು ಜಿಲ್ಲೆಗಳ ಅರಣ್ಯ ಪ್ರದೇಶದಲ್ಲಿ ಸ್ವತಃ ಕೂಂಬಿಂಗ್ ನಡೆಸಿರುವುದಾಗಿ ಮಾಹಿತಿ ನೀಡಿದರು. ಕೊಡಗು ಜಿಲ್ಲೆಯ ಪೊಲೀಸ್ ಬಲದಲ್ಲಿಯೇ ಕೂಂಬಿಂಗ್ ಕಾರ್ಯಾಚರಣೆ ನಡೆಯಲಿದೆ ಎಂದು ವಿಪುಲ್ ಕುಮಾರ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News