ರಾಣಿಯಂತೆ ಮೆರೆಯವುದು ಬೇಡ: ಮೈಸೂರು ಜಿಲ್ಲಾಧಿಕಾರಿ ಸಿಂಧೂರಿ ವಿರುದ್ಧ ಶಾಸಕ ಮಂಜುನಾಥ್ ಕಿಡಿ

Update: 2020-11-24 15:42 GMT

ಮೈಸೂರು, ನ.24: ಮೈಸೂರು ಜಿಲ್ಲಾಧಿಕಾರಿ ರಾಣಿಯಂತೆ ಮೆರೆಯವುದು ಬೇಡ, ಜಿಲ್ಲಾಧಿಕಾರಿ ಸ್ಥಾನ ಮಾನ ಎಂತಹುದು ಎಂದು ಅರಿತುಕೊಂಡು ನಡೆದರೆ ಸಾಕು ಎಂದು ಹುಣಸೂರು ಕ್ಷೇತ್ರದ ಶಾಸಕ ಎಚ್.ಪಿ.ಮಂಜುನಾಥ್ ಅವರು ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಕೆಡಿಪಿ ಸಭೆಯಲ್ಲೇ ಕಿಡಿಕಾರಿದರು.

ನಗರದ ಜಿ.ಪಂ.ಸಭಾಂಗಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ನೇತೃತ್ವದಲ್ಲಿ ಮಂಗಳವಾರ ನಡೆದ ಕೆಡಿಪಿ ಸಭೆಯಲ್ಲಿ ಭಾಗವಹಿಸಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ಎದುರಲ್ಲೇ ತಮ್ಮ ಅಸಮಾಧಾನ ಹೊರಹಾಕಿದರು.

ಸಭೆಗೆ ತಡವಾಗಿ ಬಂದು ಮಾತನಾಡಿದ ಶಾಸಕ ಎಚ್.ಪಿ.ಮಂಜುನಾಥ್, ಮೈಸೂರು ದಸರಾ ಪ್ರಾರಂಭವಾಗುವುದು ನನ್ನ ಕ್ಷೇತ್ರ ಹುಣಸೂರಿನಿಂದಲೇ. ಕೊರೋನ ಹಿನ್ನಲೆಯಲ್ಲಿ ದಸರಾ ಗಜಪಡೆಗೆ ಜಿಲ್ಲಾಧಿಕಾರಿಗಳು ಪೂಜೆ ಸಲ್ಲಿಸಿದರು. ಅವರು ಗಂಧದಕಡ್ಡಿ ಹಚ್ಚಿ ಪೂಜೆ ಸಲ್ಲಿಸಿದರು. ನನ್ನನ್ನು ಕರೆದಿದ್ದರೆ ನಾನು ಸಹ ನಾಲ್ಕು ಗಂದಧಕಡ್ಡಿ ಹಚ್ಚಿ ಪೂಜೆ ಸಲ್ಲಿಸುತ್ತಿದ್ದೆ. ಆದರೆ ಸ್ಥಳೀಯ ಶಾಸಕನಾದ ನನ್ನನ್ನು ಕಡೆಗಣಿಸಲಾಯಿತು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಹುಣಸೂರು ತಾಲೂಕಿನಲ್ಲಿ ಹೇಳೊರು ಕೇಳೊರು ಯಾರೂ ಇಲ್ಲದಂತಾಗಿದ್ದಾರೆ. ಅಧಿಕಾರಿಗಳು ಜನಪ್ರತಿನಿಧಿಗಳ ಮಾತು ಕೇಳುತ್ತಿಲ್ಲ. ಕೆಲಸ ಮಾಡಲು ಸಮರ್ಪಕ ಅಧಿಕಾರಿಗಳು ಇಲ್ಲ. ಇನ್ನು, ಜಿಲ್ಲಾಧಿಕಾರಿಗಳೇ ನಮ್ಮ ಕ್ಷೇತ್ರಕ್ಕೆ ಬಂದು ಶಾಸಕನಾದ ನನ್ನ ಗಮನಕ್ಕೂ ತಾರದೆ ಸಭೆಗಳನ್ನು ನಡೆಸುತ್ತಿದ್ದಾರೆ. ಮೈಸೂರಿನಲ್ಲಿ ಈಗಾಗಲೇ ಇಬ್ಬರು ಮಹರಾಣಿಯರು ಇದ್ದಾರೆ. ಒಂದು ಪ್ರಮೋದಾದೇವಿ ಮತ್ತೊಂದು ತ್ರಿಷಿಕಾ, ಮತ್ತೊಬ್ಬ ರಾಣಿಯ ಅಗತ್ಯವಿಲ್ಲ ಎಂದು ಹರಿಹಾಯ್ದರು.

ಜಿಲ್ಲಾಧಿಕಾರಿ ಸ್ಥಾನ ಮಾನ ಎಂತಹುದು ಎಂದು ಅರಿತು ಕೆಲಸ ಮಾಡಲಿ. ಅದು ಬಿಟ್ಟು ರಾಣಿಯ ರೀತಿ ಮೆರೆಯಬೇಕು ಎಂದರೆ ಜಿಲ್ಲಾಧಿಕಾರಿ ಸ್ಥಾನಕ್ಕೆ ರಾಜೀನಾಮೆ ನೀಡಿ ಚುನಾವಣೆಗೆ ಸ್ಪರ್ಧೆ ಮಾಡಲಿ ಎಂದು ಶಾಸಕ ಎಚ್.ಪಿ.ಮಂಜುನಾಥ್ ಸವಾಲು ಹಾಕಿದರು.

ನನ್ನ ಕ್ಷೇತ್ರದಲ್ಲಿ ಯಾವ ಅಭಿವೃದ್ಧಿ ಕೆಲಸವೂ ಆಗುತ್ತಿಲ್ಲ. ನಗರ ಸಭೆ ವ್ಯಾಪ್ತಿಯಲ್ಲಿ ಜನರು ಕೊಳಚೆ ನೀರನ್ನು ಕುಡಿಯುತ್ತಿದ್ದಾರೆ. ಶಾಸಕನಾದ ನನ್ನ ಬಗ್ಗೆ ಕೆಟ್ಟದಾಗಿ ಮಾತನಾಡುತ್ತಿದ್ದಾರೆ. ಈ ಎಲ್ಲಾ ವಿಚಾರಗಳ ಕುರಿತು ಜಿಲ್ಲಾಧಿಕಾರಿಗಳಿಗೆ ಹಲವು ಬಾರಿ ಪತ್ರ ಬರೆದರೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ, ಇನ್ನು, ಸ್ಥಳೀಯ ನಗರಭೆಗೆ ಕಮಿಷನರ್ ಇಲ್ಲ. ಆರ್.ಐ. ಆರೋಗ್ಯಾಧಿಕಾರಿಗಳು ತಕ್ಷಣ ಅವರನ್ನು ನೇಮಿಸಿ ಎಂದು ಮನವಿ ಮಾಡಿರೂ ಸರ್ಕಾರ ಸ್ಪಂದಿಸುತ್ತಿಲ್ಲ ಎಂದು  ಬೇಸರ ವ್ಯಕ್ತಪಡಿಸಿದರು.

ಯಾವುದೇ ಅಧಿಕಾರಿಗಾದರೂ ತಾಯಿ ಹೃದಯ ಇರಬೇಕು. ಆದರೆ ನಮ್ಮ ಮೈಸೂರು ಜಿಲ್ಲಾಧಿಕಾರಿಗೆ ತಾಯಿ ಹೃದಯ ಎಂಬುದೇ ಇಲ್ಲ. ಇನ್ನು ಮಂದೆ ಎಚ್ಚೆತ್ತುಕೊಂಡು ಜಿಲ್ಲೆಯ ಕೆಲಸ ಮಾಡದಿದ್ದರೆ ನಾನು ಏನ್ ಎಂದು ತೋರಿಸುತ್ತೇನೆ ಎಂದು ಎಚ್ಚರಿಕೆ ನೀಡಿದರು.

ಪ್ರತಾಪ್ ಸಿಂಹ- ಎಚ್.ಪಿ.ಮಂಜುನಾಥ್ ನಡುವೆ ಮಾತಿನ ಚಕಮಕಿ

ಹುಣಸೂರು ಕ್ಷೇತ್ರದ ಶಾಸಕ ಎಚ್.ಪಿ.ಮಂಜುನಾಥ್, 'ಹುಣಸೂರಿನ ಜನ ಕೊಳಚೆ ನೀರು ಕುಡಿಯುತ್ತಿದ್ದಾರೆ. ನಮ್ಮಲ್ಲಿನ ರಸ್ತೆಗಳು ಕುಲಗೆಟ್ಟು ಹೋಗಿವೆ' ಎಂದು ಹೇಳುತ್ತಿದ್ದಂತೆ ಮಧ್ಯೆ ಮಾತನಾಡಿದ ಸಂಸದ ಪ್ರತಾಪ್ ಸಿಂಹ, ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗಲೂ ಮಾಡಲಾಗಲಿಲ್ಲ. ವೈಯಕ್ತಿಕ ವಿಚಾರ ಬಿಟ್ಟು ಮಾತನಾಡಿ ಎಂದು ಹೇಳಿದರು. ಇದಕ್ಕೆ ಕೆಂಡಾಮಂಡಲರಾದ ಶಾಸಕ ಎಚ್.ಪಿ.ಮಂಜುನಾಥ್, ಸಿದ್ದರಾಮಯ್ಯ ಅವರ ಬಗ್ಗೆ ಮಾತನಾಡುವ ಅಗತ್ಯ ಈಗ ಇಲ್ಲ. ಅವರು ಮುಖ್ಯಮಂತ್ರಿಯಾಗಿದ್ದ ವೇಳೆ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ ಎಂದು ಹೇಳಿದರು. ಈ ವೇಳೆ ಪ್ರತಾಪ್ ಸಿಂಹ ಮತ್ತು ಶಾಸಕ ಮಂಜುನಾಥ್ ನಡುವೆ ಮಾತಿನ ಚಕಮಕಿ ನಡೆಯಿತು.

ಮುಂದುವರಿದು ಮಾತನಾಡಿದ ಶಾಸಕ ಎಚ್.ಪಿ.ಮಂಜುನಾಥ್, ನಾನು ನನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ತೀರ್ಮಾನಿಸಿದ್ದೇನೆ. ಏಕೆಂದರೆ ಮತ್ತೊಮ್ಮೆ ಉಪಚುನಾವಣೆ ನಡೆದು ಬಿಜೆಪಿಯವರೇ ಶಾಸಕರಾದರೆ  ಆಗಲಾದರೂ ಹುಣಸೂರು ಅಭಿವೃದ್ಧಿಯಾಗುತ್ತದೆಯೋ ಎಂದು ನೋಡೋಣ ಎಂದು ಹೇಳಿದರು.

ಮೌನಕ್ಕೆ ಶರಣಾದ ಜಿಲ್ಲಾಧಿಕಾರಿ: ಶಾಸಕ ಎಚ್.ಪಿ.ಮಂಜುನಾಥ್ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ವಿರುದ್ಧ ಕೆಡಿಪಿ ಸಭೆಯಲ್ಲಿ ಕಿಡಿಕಾರಿದರೂ ವೇದಿಕೆಯಲ್ಲೇ ಇದ್ದ ಜಿಲ್ಲಾಧಿಕಾರಿ ಮೌನಕ್ಕೆ ಶರಣಾಗಿದ್ದರು. ಮಂಜುನಾಥ್ ನೇರವಾಗಿ ಆರೋಪ ಮಾಡುತ್ತಿದ್ದರಿಂದ ವಿಚಲಿತರಾದ ಜಿಲ್ಲಾಧಿಕಾರಿ ತುಟಿಕ್ ಪಿಟಿಕ್ ಎನ್ನದೆ ಕುಳಿತಿದ್ದರು.

ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಸಂಸದ ಪ್ರತಾಪ್ ಸಿಂಹ, ಶಾಸಕರಾದ ಜಿ.ಟಿ.ದೇವೇಗೌಡ, ಕೆ.ಮಹದೇವ್, ಹರ್ಷವರ್ಧನ್, ಅಶ್ವಿನ್ ಕುಮಾರ್, ಅನಿಲ್ ಚಿಕ್ಕಮಾದು, ಜಿ.ಪಂ.ಅಧ್ಯಕ್ಷೆ ಪರಿಮಳಾ ಶ್ಯಾಂ, ಜಿ.ಪಂ.ಉಪಾಧ್ಯಕ್ಷೆ ಗೌರಮ್ಮ ಸೋಮಶೇಖರ್, ಜಿ.ಪಂ.ಸಿಇಓ ಡಿ.ಭಾರತಿ, ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್, ಅಡಿಷನಲ್ ಎಸ್ಪಿ ಶಿವಕುಮಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News