ಮಹಿಳಾ ಉದ್ದಿಮೆಗಳು ಕೈಗಾರಿಕಾ ಸ್ಥಾಪನೆಗೆ ಮುಂದಾಗಬೇಕು: ಜಗದೀಶ್ ಶೆಟ್ಟರ್

Update: 2020-11-25 16:59 GMT

ಬೆಂಗಳೂರು, ನ.25: ಬಹಳ ದಿನಗಳಿಂದ ಹಂಚಿಕೆ ಆಗದೇ ಇದ್ದ ಮಹಿಳಾ ಕೈಗಾರಿಕಾ ನಿವೇಶನಗಳ ಹಂಚಿಕೆ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಅಲ್ಲದೆ, ಮಹಿಳಾ ಉದ್ದಿಮೆದಾರರು ಹೆಚ್ಚಿನ ರೀತಿಯಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಮುಂದಾಗಬೇಕೆಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ತಿಳಿಸಿದ್ದಾರೆ.

ಬುಧವಾರ ಮಹಿಳಾ ಉದ್ದಿಮೆದಾರರ ದಿನಾಚರಣೆ-2020 ಅಂಗವಾಗಿ ಎಫ್‍ಕೆಸಿಸಿಐ ವತಿಯಿಂದ ಸರ್ ಎಂ.ವಿಶ್ವೇಶ್ವರಯ್ಯ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮಹಿಳಾ ಉದ್ದಿಮೆಗಳಿಗೆ ರಾಜ್ಯ ಸರಕಾರದ ವತಿಯಿಂದ ಅಗತ್ಯ ಪ್ರೋತ್ಸಾಹ ನೀಡಲು ಬದ್ಧವಾಗಿದೆ. ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕೆಂದು ತಿಳಿಸಿದರು. 

ಮಹಿಳಾ ಉದ್ಯಮಿ ಪಾರ್ಕ್‍ಗಳನ್ನು ಘೋಷಿಸಿ ಹಲವಾರು ವರ್ಷಗಳೇ ಸಂದಿವೆ. ಆದರೆ, ಇದುವರೆಗೂ ಅವುಗಳಲ್ಲಿನ ಕೈಗಾರಿಕಾ ನಿವೇಶನಗಳ ಹಂಚಿಕೆ ಕಾರ್ಯವನ್ನು ಪ್ರಾರಂಭಿಸಿರಲಿಲ್ಲ. ಈಗ ಈ ಕಾರ್ಯಕ್ಕೆ ಚಾಲನೆ ನೀಡಲಾಗಿದ್ದು, ರಾಜ್ಯದ ಎಲ್ಲಾ ಭಾಗಗಳಲ್ಲೂ ಇರುವ ಮಹಿಳಾ ಕೈಗಾರಿಕಾ ಪಾರ್ಕಿನ ನಿವೇಶನಗಳನ್ನು ಹಂಚಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಅವರು ಹೇಳಿದರು.

ಮಹಿಳೆಯರು ಯಾವುದೇ ಸಹಾಯವಿಲ್ಲದೆ ವಿಶೇಷ ಸವಲತ್ತುಗಳು ಹಾಗೂ ಮೀಸಲಾತಿ ಇಲ್ಲದೆ ಸ್ವಂತ ಬಲದಿಂದಲೇ ಉದ್ಯಮ ಸ್ಥಾಪಿಸುವ ಹಾಗೂ ಎಲ್ಲಾ ರೀತಿಯ ಕ್ಷೇತ್ರಗಳಲ್ಲೂ ಅಭಿವೃದ್ದಿಯನ್ನು ಸಾಧಿಸುವ ಶಕ್ತಿಯನ್ನು ಹೊಂದಿದ್ದಾರೆ. ಇದಕ್ಕೆ ಪೂರಕವಾಗಿ ಸರಕಾರದ ವತಿಯಿಂದ ಅಗತ್ಯ ಪ್ರೋತ್ಸಾಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದೆಂದು ಅವರು ಹೇಳಿದ್ದಾರೆ.

ಕಾರ್ಯಕ್ರಮದಲ್ಲಿ ಎಫ್‍ಕೆಸಿಸಿಐ ಅಧ್ಯಕ್ಷ ಪೆರಿಕಲ್ ಎಂ ಸುಂದರ್, ಎಫ್‍ಕೆಸಿಸಿಐ ಮಹಿಳಾ ಉದ್ದಿಮೆದಾರರ ಸಮಿತಿಯ ಅಧ್ಯಕ್ಷೆ ರೂಪಾ ರಾಣಿ ಸೇರಿದಂತೆ ಹಲವರು ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಮಹಿಳಾ ಉದ್ಯಮಿಗಳು ತಯಾರಿಸಿದ ಉತ್ಪನ್ನಗಳನ್ನು ಸಚಿವರು ವೀಕ್ಷಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News