ಅಖಿಲ ಭಾರತ ಸಾರ್ವತ್ರಿಕ ಮುಷ್ಕರಕ್ಕೆ ಶಿವಮೊಗ್ಗ ನಗರದಲ್ಲಿ ಉತ್ತಮ ಬೆಂಬಲ

Update: 2020-11-26 10:10 GMT

ಶಿವಮೊಗ್ಗ, ನ.26: ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ ಕರೆ ನೀಡಿದ್ದ ಅಖಿಲ ಭಾರತ ಸಾರ್ವತ್ರಿಕ ಮುಷ್ಕರಕ್ಕೆ ನಗರದಲ್ಲೂ ಉತ್ತಮ ಬೆಂಬಲ ವ್ಯಕ್ತವಾಗಿದ್ದು, ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.

ರೈತ ವಿರೋಧಿ ಕಾಯ್ದೆಗಳನ್ನು ಸರಕಾ ಹಿಂಪಡೆಯಬೇಕು, ಎಲ್ಲ ಸಂಸದೀಯ ಮತ್ತು ಸಾಂವಿಧಾನಿಕ ಕಾರ್ಯವಿಧಾನಗಳನ್ನು ಉಲ್ಲಂಘಿಸಿ ಶೇ.70ರಷ್ಟು ಗ್ರಾಮೀಣ ಜನತೆ ಅವಲಂಬಿಸಿದ ಕೃಷಿಯನ್ನು ಕಾರ್ಪೊರೇಟ್ ಕಂಪೆನಿಗಳ ಪರವಾಗಿ ಮಾಡಲು ಎಲ್ಲ ಸುಧಾರಣಾ ಕೃಷಿ, ಗುತ್ತಿಗೆ ಬೀಜ, ಅರಣ್ಯ ಹಕ್ಕು ಕಾಯ್ದೆಗೆ ತಿದ್ದುಪಡಿ ಮತ್ತು ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವಕ್ಕೆ ಕೇಂದ್ರ ಸರಕಾರ ಸಹಿ ಹಾಕಿದೆ ಎಂದು ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿದರು.
ಕೊರೋನಗಿಂತ ಮೊದಲೇ ಇದ್ದ ಆರ್ಥಿಕ ಹಿಂಜರಿತ, ಕೊರೋನದಿಂದ ಉಂಟಾದ ಸಂಕಷ್ಟ ಉದ್ಯೋಗಗಳ ಮೇಲೆ ಪರಿಣಾಮ ಬೀರಿ 15 ಕೋಟಿ ಜನ ಬದುಕು ಕಳೆದುಕೊಂಡು ಬೀದಿಪಾಲಾಗಿದ್ದಾರೆ ಎಂದು ದೂರಿದರು.

ಭಾರತದಲ್ಲಿ ಬಂಡವಾಳ ಕೇಂದ್ರೀಕರಣದ ದೊಡ್ಡ ಆರ್ಥಿಕ ಅಸಮಾನತೆಗಳು ಹೆಚ್ಚಿವೆ. ಕೊರೋವ ಸಮಯದಲ್ಲಿ ಅಸಂಘಟಿತ ಕ್ಷೇತ್ರದ ಕಾರ್ಮಿಕರು ಸೇವಾವಲಯದಲ್ಲಿ ದುಡಿಯುವ ಸ್ಕೀಂ ನೌಕರರು, ಉತ್ಪಾದನೆ ವಲಯದ ಕಾರ್ಮಿಕರು, ಸ್ವ ಉದ್ಯೋಗಸ್ಥರು, ಸಾರಿಗೆ ವಲಯದಲ್ಲಿ ದುಡಿಯುವವರು, ಖಾಯಂ ಅಲ್ಲದ ವಿಭಾಗಗಳಲ್ಲಿ ದುಡಿಯುವವರು, ಕೃಷಿ ಕೂಲಿಕಾರರು, ಬಡ ರೈತರು ಬದುಕು ಕಳೆದುಕೊಂಡಿದ್ದಾರೆ ಎಂದು ದೂರಿದರು.

ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ ಭಾರತ 107 ದೇಶಗಳ ಪೈಕಿ 94ನೇ ಸ್ಥಾನದಲ್ಲಿದೆ. ಲಕ್ಷಗಟ್ಟಲೆ ಜನ ಹಸಿವಿನಿಂದ ಸಾಯುತ್ತಿರುವುದಷ್ಟೇ ಅಲ್ಲದೇ ಶ್ರಮಶಕ್ತಿಗೆ ಅಪಾಯವಾಗುತ್ತಿದೆ. ಕೇಂದ್ರೀಯ ಗೋದಾಮುಗಳಲ್ಲಿ ಕೊಳೆಯುತ್ತಿರುವ 77 ಮಿಲಿಯನ್ ಟನ್ ಆಹಾರ ಧಾನ್ಯವನ್ನು ಅಗತ್ಯ ಇರುವವರಿಗೆ ಯಾವುದೇ ಷರತ್ತು ಇಲ್ಲದೇ ಹಂಚಿಕೆ ಮಾಡಬೇಕು. ಜನರನ್ನು ಹಸಿವಿನಿಂದ ಮುಕ್ತಗೊಳಿಸಬೇಕು ಎಂದು ಒತ್ತಾಯಿಸಿದರು.

ಸಾರ್ವಜನಿಕ ವಲಯದ ಸೇವಾ ಸಂಸ್ಥೆಗಳ ಖಾಸಗೀಕರಣ ನಿಲ್ಲಿಸಬೇಕು. ಅಗತ್ಯವಿರುವವ ರಿಗೆ ತಿಂಗಳಿಗೆ 10 ಕೆಜಿ ಉಚಿತ ಪಡಿತರ ನೀಡಬೇಕು, ಆದಾಯ ತೆರಿಗೆ ರಹಿತ ಕುಟುಂಬಗಳಿಗೆ 7,500 ರೂ. ಪಾವತಿಸಬೇಕು, ರೈತ ವಿರೋಧಿ ಕಾನೂನುಗಳನ್ನು ವಾಪಸ್ ಪಡೆಯಬೇಕು, ಕಾರ್ಮಿಕರನ್ನು ಗುಲಾಮರನ್ನಾಗಿಸುವ ಕಾನೂನುಗಳನ್ನು ಕೈಬಿಡಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಲಾಯಿತು.

ಕಾರ್ಮಿಕ ಸಂಹಿತೆಗಳ ವಾಪಸ್ಸಾತಿ, ರೈತ ವಿರೋಧಿ ಎಪಿಎಂಸಿ ಕಾಯ್ದೆ, ಭೂಸುಧಾರಣೆ ಕಾಯ್ದೆ, ಕೃಷಿ ಸಂಬಂಧಿತ ಕಾನೂನು ತಿದ್ದುಪಡಿ ಕೈಬಿಡಬೇಕು, ಸಾರ್ವಜನಿಕ ಉದ್ದಿಮೆಗಳ ಖಾಸಗೀಕರಣ ಕೈಬಿಡಬೇಕು ಎಂದು ಒತ್ತಾಯಿಸಿದರು.

ಐಎನ್‌ಟಿಯುಸಿ, ಸಿಐಟಿಯು , ಬ್ಯಾಂಕ್ ನೌಕರರ ಸಂಘ, ಬಿಸಿಯೂಟ ನೌಕರರ ಸಂಘ, ರಾಜ್ಯ ರೈತ ಸಂಘ, ಔಷಧ ಮಾರಾಟ ಪ್ರತಿನಿಧಿಗಳ ಸಂಘ, ಗ್ರಾಪಂ ನೌಕರರ ಸಂಘ, ಕೆಎಸ್ಸಾರ್ಟಿಸಿ ನೌಕರರ ಸಂಘ, ವಿಐಎಸ್‌ಎಲ್ ಗುತ್ತಿಗೆ ನೌಕರರ ಸಂಘ, ದಸಂಸ ಸೇರಿದಂತೆ ಅನೇಕ ಸಂಘಟನೆಗಳು ಪ್ರತಿಭಟನೆಯಲ್ಲಿ ಭಾಗವಹಿಸಿದ್ದವು.

ವಿವಿಧ ಸಂಘಟನೆಗಳ ಪ್ರಮುಖರಾದ ೆಚ್.ಆರ್.ಬಸವರಾಜಪ್ಪ, ಎಂ.ನಾರಾಯಣ್, ಕೆ.ಎಲ್.ಅಶೋಕ್, ಜಾರ್ಜ್‌ ಸಲ್ಡಾನ, ತೀ.ನಾ.ಶ್ರೀನಿವಾಸ್, ಅನಿಲ್ ಕುಮಾರ್, ಹನುಮಮ್ಮ, ಅಕ್ಕಮ್ಮ, ಪ್ರಶಾಂತ್, ಅಶೋಕ್, ರಾಜು, ಜನಾರ್ದನ್, ತುಳಸಿ, ಶಿವಶಂಕರ್, ಸುರೇಶ್, ಚಂದ್ರಪ್ಪ, ಹಾಲೇಶಪ್ಪ ಸೇರಿದಂತೆ ಹಲವರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News