ಕಾರುಗಳಿಗೆ ಢಿಕ್ಕಿಯಾಗಿ ಅಂಗಡಿಗೆ ನುಗ್ಗಿದ ಕಂಟೈನರ್ ಲಾರಿ: ವಕೀಲ ಸೇರಿ ಐವರು ಮೃತ್ಯು

Update: 2020-11-26 14:14 GMT

ಚಿಕ್ಕಬಳ್ಳಾಪುರ, ನ.26: ಸರಕು ಸಾಗಾಣಿಕೆ ಮಾಡುವ ಬೃಹತ್ ಕಂಟೈನರ್ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಎರಡು ಕಾರುಗಳಿಗೆ ಢಿಕ್ಕಿಯಾಗಿ ಹೆದ್ದಾರಿ ಬದಿಯ ಅಂಗಡಿಯೊಂದಕ್ಕೆ ನುಗ್ಗಿದ ಪರಿಣಾಮ ವಕೀಲ ಸೇರಿ ಐವರು ಮೃತಪಟ್ಟು, ಇಬ್ಬರಿಗೆ ಗಂಭೀರ ಗಾಯಗಳಾಗಿರುವ ಘಟನೆ ಗುರುವಾರ ನಗರದ ಹೊರ ವಲಯದ ರಾಷ್ಟ್ರೀಯ ಹೆದ್ದಾರಿ-7 ರ ಚದಲುಪುರ ಕ್ರಾಸ್ ಬಳಿ ಸಂಭವಿಸಿದೆ.

ಮೃತಪಟ್ಟವರನ್ನು ಗವಿಗಾನಹಳ್ಳಿ ನಿವಾಸಿಗಳಾದ ವಕೀಲ ಯಮನಚಾರಿ (44) ಹಾಗೂ ವೆಂಕಟೇಶ್ (45) ಮತ್ತೊಂದು ಕಾರಿನಲ್ಲಿದ್ದ ಬೆಂಗಳೂರಿನ ಬಾಣಸವಾಡಿ ನಿವಾಸಿ ಆರ್‍ಟಿಒ ಏಜೆಂಟ್ ಕಲ್ಯಾಣಜಿಯಂ (47) ಹಾಗೂ ದೊಡ್ಡಬಳ್ಳಾಪುರ ತಾಲೂಕಿನ ಲಿಂಗಪುರ ನಿವಾಸಿ ನಟೇಶ್‍ಗೌಡ (25) ಹಾಗೂ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಪಟ್ಟಣದ ನರಸಿಂಹನಪಾಳ್ಯದ ನಿವಾಸಿ ರಂಗಪ್ಪ (55) ಎಂದು ಗುರುತಿಸಲಾಗಿದೆ. 

ಬೆಂಗಳೂರಿನಿಂದ ಚಿಕ್ಕಬಳ್ಳಾಪುರ ಕಡೆಗೆ ಬರುತ್ತಿದ್ದ ಕಂಟೈನರ್ ಲಾರಿ ಚದಲುಪುರ ಕ್ರಾಸ್ ತಿರುವುನಲ್ಲಿ ಅತಿವೇಗದಿಂದ ಬಂದ ಪರಿಣಾಮ ನಿಯಂತ್ರಣ ತಪ್ಪಿ ರಸ್ತೆಯ ಬದಿಯ ಅಂಗಡಿಯೊಂದಕ್ಕೆ ನುಗ್ಗಿದೆ. ಇದಕ್ಕೂ ಮುನ್ನ ಎರಡು ಕಾರುಗಳಿಗೆ ಲಾರಿ ಢಿಕ್ಕಿ ಹೊಡೆದಿದ್ದು, ಪರಿಣಾಮ ಕಲ್ಯಾಣಾಜಿಯಂ ಹಾಗೂ ವಕೀಲ ಯಮನಚಾರಿ ಸ್ಥಳದಲ್ಲಿಯೆ ಮೃತಪಟ್ಟಿದ್ದು, ವೆಂಕಟೇಶ್ ಹಾಗೂ ನಟೇಶ್‍ಗೌಡ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಕೊನೆಯುಸಿರೆಳೆದಿದ್ದಾರೆಂದು ಸಂಚಾರಿ ಠಾಣೆ ಪೊಲೀಸರು ತಿಳಿಸಿದ್ದಾರೆ.

ಸ್ಥಳಕ್ಕೆ ಎಸ್ಪಿ ಡೌಡು: ಅಪಘಾತದ ವಿಷಯ ತಿಳಿದ ಕೂಡಲೇ ಘಟನಾ ಸ್ಥಳಕ್ಕೆ ಎಸ್ಪಿ ಜಿ.ಕೆ.ಮಿಥುನ್ ಕುಮಾರ್ ಹಾಗೂ ಸಂಚಾರಿ ಠಾಣೆ ಪೊಲೀಸರು ಭೇಟಿ ನೀಡಿ ಗಾಯಾಳುಗಳನ್ನು ಕಾರುಗಳಿಂದ ಹೊರ ತೆಗೆದು ಆಸ್ಪತ್ರೆಗೆ ಸಾಗಿಸಿದರು. ಸ್ಥಳಕ್ಕೆ ಕ್ರೈನ್ ತಂದು ಮುಂದೆ ಚಲಿಸಲಾಗದೆ ನಿಂತಿದ್ದ ಕಂಟೈನರ್ ಲಾರಿಯನ್ನು ಹೆದ್ದಾರಿಯಿಂದ ಪಕ್ಕಕ್ಕೆ ಸರಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.

ಘಟನೆ ಸಂಬಂಧ ಚಿಕ್ಕಬಳ್ಳಾಪುರ ನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News