ಡಾ.ಸುಧಾಮೂರ್ತಿಗೆ ಲಾಲ್ ಬಹದ್ದೂರ್ ಶಾಸ್ತ್ರಿ ರಾಷ್ಟ್ರೀಯ ಶ್ರೇಷ್ಠತಾ ಪ್ರಶಸ್ತಿಯ ಗರಿ

Update: 2020-11-26 17:15 GMT

ಬೆಂಗಳೂರು, ನ.26: 2020ನೆ ಸಾಲಿನ ಲಾಲ್ ಬಹದ್ದೂರ್ ಶಾಸ್ತ್ರಿ ರಾಷ್ಟ್ರೀಯ ಶ್ರೇಷ್ಠತಾ ಪ್ರಶಸ್ತಿಯನ್ನು ಉಪ ರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ಅವರು, ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಡಾ.ಸುಧಾಮೂರ್ತಿಯವರಿಗೆ ಗುರುವಾರ ವರ್ಚುಯಲ್ ವೇದಿಕೆ ಮೂಲಕ ಪ್ರದಾನ ಮಾಡಿದರು.

ಮಾನವೀಯ ಕಾರ್ಯಗಳ ಕ್ಷೇತ್ರದಲ್ಲಿ ಮಾಡಿದ ಗಣನೀಯ ಸೇವೆಯನ್ನು ಗುರುತಿಸಿ, ಸುಧಾಮೂರ್ತಿಯವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿತ್ತು. ಲಾಲ್ ಬಹದ್ದೂರ್ ಶಾಸ್ತ್ರಿ ವ್ಯವಸ್ಥಾಪನಾ ಸಂಸ್ಥೆ ಈ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಹೊಸದಿಲ್ಲಿಯಲ್ಲಿ ಆಯೋಜಿಸಿತ್ತು.

ಸುಧಾಮೂರ್ತಿಯವರಿಗೆ ಪ್ರಶಸ್ತಿ ಫಲಕ ಮತ್ತು ಸನ್ಮಾನ ಪತ್ರವನ್ನು ಆನ್‍ಲೈನ್ ಮೂಲಕ ನೀಡಿ ಗೌರವಿಸಲಾಯಿತು. ಸುಧಾಮೂರ್ತಿಯವರು ಲಾಲ್ ಬಹದ್ದೂರ್ ಶಾಸ್ತ್ರಿ ರಾಷ್ಟ್ರೀಯ ಶ್ರೇಷ್ಠತಾ ಪ್ರಶಸ್ತಿಯನ್ನು ಭಾರತದ ಸಶಸ್ತ್ರ ಪಡೆಗಳಿಗೆ ಸಮರ್ಪಣೆ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು, ಈ ಅಪೂರ್ವ ಕ್ಷಣ ದೇಶಕ್ಕೆ ಸದಾ ಸ್ಫೂರ್ತಿ ಎನಿಸಿದ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಹಾಗೂ ಅವರ ಸರಳತೆ, ಸಮಗ್ರತೆ, ಪ್ರೀತಿ ಮತ್ತು ಸಹಿಷ್ಣುತೆಯನ್ನು ನೆನಪಿಸಿದೆ. ಇಡೀ ದೇಶ ಇಂದು ಒಗ್ಗೂಡಿ ಶಾಂತಿಯನ್ನು ಉತ್ತೇಜಿಸಬೇಕಾದ ಅಗತ್ಯವಿದೆ ಎಂದರು.

ಅಂತೆಯೇ ಬಡತನ ನಿರ್ಮೂಲನೆ, ಜನಸಮೂಹದ ಸಾಮಾಜಿಕ-ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಮತ್ತು ಭಯೋತ್ಪಾದನೆಯ ಪಿಡುಗು ತೊಡೆದುಹಾಕಲು ಪಣ ತೊಡಬೇಕಿದೆ ಎಂದ ಅವರು, ಭಯೋತ್ಪಾದನೆಗೆ ಧರ್ಮವಿಲ್ಲ. ಇದನ್ನು ನಿಭಾಯಿಸಲು ಭಾರತಕ್ಕೆ ಇದು ಸಕಾಲ ಎಂದು ಹೇಳಿದರು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಸುಧಾಮೂರ್ತಿ, ‘ಈ ಪ್ರಶಸ್ತಿ ಸ್ವೀಕರಿಸಲು ನನಗೆ ಅತೀವ ಸಂತಸವಾಗುತ್ತಿದೆ. ಈ ಪ್ರಶಸ್ತಿಯನ್ನು ಸ್ವೀಕರಿಸಿದವರ ಪಟ್ಟಿಯನ್ನು ನಾನು ನೋಡಿದಾಗ, ನಾನು ತೀರಾ ಚಿಕ್ಕವಳು ಎನಿಸಿತು. ನನ್ನ ಕಾರ್ಯ ಮತ್ತು ಸಂಸ್ಥೆಯನ್ನು ಗುರುತಿಸಿದ್ದಕ್ಕಾಗಿ ಧನ್ಯವಾದಗಳು’ ಎಂದರು.

ಶ್ರೇಷ್ಠರಾದ ಶಾಸ್ತ್ರೀಜಿಯವರು ಹೇಗಿದ್ದರು ಎನ್ನುವುದನ್ನು ನಾನು ಕಂಡುಕೊಂಡಿದ್ದೇನೆ. ನಾನು ಇಂದು ಸ್ವೀಕರಿಸಿದ ಪ್ರಶಸ್ತಿಯನ್ನು ನಮ್ಮ ಕಾಳಜಿ ವಹಿಸಿರುವವರಿಗೆ ಸಮರ್ಪಿಸುತ್ತಿದ್ದೇನೆ. ಪ್ರಶಸ್ತಿ ರೂಪದಲ್ಲಿ ನೀಡಿದ ನಗದು ಹಣವನ್ನು ಭಾರತೀಯ ಸಶಸ್ತ್ರ ಪಡೆಗಳಿಗೆ ಸಮರ್ಪಿಸುತ್ತಿದ್ದೇನೆ ಎಂದು ಅವರು ನುಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News