ಎಫ್ಐಟಿಯುವಿಂದ ಅಖಿಲ ಭಾರತ ಕಾರ್ಮಿಕರ ಮುಷ್ಕರ
Update: 2020-11-26 18:07 GMT
ಬೆಂಗಳೂರು, ನ.26: ಕಾರ್ಮಿಕ ಮತ್ತು ರೈತ ವಿರೋಧಿ ಕಾಯಿದೆ ವಿರುದ್ಧ ಇಂದು ದೇಶಾದ್ಯಂತ ನಡೆದ ಮುಷ್ಕರದ ಭಾಗವಾಗಿ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಫೆಡರೇಶನ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್(ಎಫ್ಐಟಿಯು) ಮುಷ್ಕರ ನಡೆಸಿತು.
ಕಾರ್ಮಿಕರನ್ನು ಗುಲಾಮರನ್ನಾಗಿ ಮಾಡುವ ಮತ್ತು ಕಾರ್ಮಿಕರ ಕಲ್ಯಾಣ ನಿಧಿಯನ್ನು ಕಬಳಿಸುವಂತಹ ಜನವಿರೋಧಿ ಕಾಯಿದೆಯನ್ನು ಕೂಡಲೇ ಕೇಂದ್ರ ಸರಕಾರ ಹಿಂಪಡೆಯಬೇಕು. ಕಾರ್ಮಿಕರನ್ನು ಮನುಷ್ಯರಂತೆ ಕಾಣಬೇಕು. ಅವರು ಕೇವಲ ದುಡಿಯುವ ಯಂತ್ರವಲ್ಲ. ಬದಲಾಗಿ ಎಲ್ಲರಂತೆ ಸಂಸಾರವಿರುವ ಮನುಷ್ಯರಾಗಿದ್ದಾರೆ ಎಂದು ಪ್ರತಿಭಟನಾಕಾರರು ಹೇಳಿದರು.
ಆದುದರಿಂದ, ಇಂತಹ ಕರಾಳ ಕಾಯಿದೆಯನ್ನು ಜಾರಿಗೊಳಿಸಿ ಬಂಡವಾಳಶಾಹಿಗಳನ್ನು ಸಂರಕ್ಷಣೆ ಮಾಡುವ ಕೇಂದ್ರ ಸರಕಾರದ ಧೋರಣೆ ಸರಿಯಲ್ಲ. ಕೂಡಲೇ ಇಂತಹ ಕರಾಳ ಕಾಯಿದೆಯನ್ನು ಹಿಂಪಡೆಯಬೇಕು ಎಂಬ ಒತ್ತಾಯದೊಂದಿಗೆ ಮುಷ್ಕರ ನಡೆಸಲಾಯಿತು ಎಂದು ಪ್ರಕಟಣೆ ತಿಳಿಸಿದೆ.