ಹೊಸ ಉದ್ಯಮಿಗಳನ್ನು ಪ್ರೇರೇಪಿಸಲು ಜ.30ರಿಂದ ಟೈಕಾನ್ ಸಮಾವೇಶ

Update: 2020-11-26 18:08 GMT

ಹುಬ್ಬಳ್ಳಿ, ನ.26: ಹೊಸ ಉದ್ಯಮಿಗಳನ್ನು ಪ್ರೇರೇಪಿಸಲು, ಸಂಪನ್ಮೂಲ ಸಂಗ್ರಹಕ್ಕೆ ಮಾರ್ಗದರ್ಶನ ನೀಡುವುದು, ಉದ್ಯಮ ಕ್ಷೇತ್ರದಲ್ಲಿ ಸಾಧನೆ ಮಾಡಿದ ವ್ಯಕ್ತಿಗಳನ್ನು ಕರೆಯಿಸಿ ತಮ್ಮ ಯೊಶೋಗಾಥೆ ಬಗ್ಗೆ ಮಾತನಾಡಲು ಹೇಳುವ ಕೆಲಸವನ್ನು ಟೈ ಹುಬ್ಬಳ್ಳಿ ಸಂಸ್ಥೆಯು ಮಾಡುತ್ತ ಬಂದಿದೆ. ಈಗ ಇದೇ ಸಂಸ್ಥೆಯು 2021ರ ಜ.30 ಹಾಗೂ 31ರಂದು ಟೈಕಾನ್ ಸಮಾವೇಶವನ್ನು ವರ್ಚುವಲ್ ಆಗಿ ಆಯೋಜಿಸಿದೆ.

ಗುರುವಾರ ಹುಬ್ಬಳ್ಳಿ ನಗರದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸಮಾವೇಶ ಸಂಯೋಜಕ ವಿಜಯ್ ಮಾನೆ ಅವರು, ಕೋವಿಡ್ 19ಅನ್ನು ಸಕಾರಾತ್ಮಕವಾಗಿ ಸ್ವೀಕರಿಸಲಾಗಿದ್ದು, ಧಾರವಾಡ ಜಿಲ್ಲಾ ವ್ಯಾಪ್ತಿಗೆ ಸೀಮಿತವಾಗಿದ್ದ ಸಮಾವೇಶ ವೀಕ್ಷಣೆಯನ್ನು ಲೈವ್ ಸ್ಕ್ರೀನಿಂಗ್ ಮೂಲಕ ವಿಶ್ವದಾದ್ಯಂತ ವಿಸ್ತರಿಸುತ್ತಿದ್ದೇವೆ. ಅಂದಾಜು 10 ಸಾವಿರಕ್ಕೂ ಹೆಚ್ಚು ಜನರು ಭಾಗಿಯಾಗುವ ನಿರೀಕ್ಷೆ ಇದೆ ಎಂದರು. 

ಟೈ ಹುಬ್ಬಳ್ಳಿಯ ಹೆಮ್ಮೆ ಯೋಜನೆಯಡಿ ಶಿಕ್ಷಣ, ಆರೋಗ್ಯ, ರಕ್ಷಣೆ, ಕಲೆ ಮತ್ತು ಸಂಸ್ಕೃತಿ ಮುಂತಾದ ಕೈಗಾರಿಕೆಗಳ ಮೂಲಕ ಸಮಾಜಕ್ಕೆ ಮೌಲ್ಯದ ಸಂದೇಶ 8 ರಿಂದ 10 ಸಂಸ್ಥೆಗಳ ಯಶೋಗಾಥೆಯನ್ನು ವಿಭಿನ್ನವಾಗಿ ತೋರಿಸಲಿದ್ದೇವೆ. ಟೈ ಹುಬ್ಬಳ್ಳಿ ಗಾಟ್ ಟ್ಯಾಲೆಂಟ್‍ನಡಿ ಗಿನ್ನಿಸ್, ವರ್ಲ್ಡ್, ನ್ಯಾಷನಲ್ ದಾಖಲೆ ಮಾಡಿದ ಪ್ರತಿಭೆಗಳಿದ್ದು, ಅವರ ಅದ್ಭುತ ಸಾಧನೆಯನ್ನು ಪ್ರದರ್ಶಿಸಲಿದ್ದೇವೆ ಎಂದರು. 

ಸಂಸ್ಥೆಯ ಹುಬ್ಬಳ್ಳಿ ಶಾಖೆ ಆರಂಭವಾಗಿ 13 ವರ್ಷಗಳಾಗಿದೆ. 225ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ತರಬೇತಿ, ಮಾರ್ಗದರ್ಶನ ನೀಡುವ ಕಾರ್ಯದಲ್ಲಿ ತೊಡಗಿಸಿಕೊಂಡಿದೆ. ಅದರಲ್ಲೂ ಸ್ಟಾರ್ಟ್ ಅಪ್‍ಗಳಿಗೆ ಬಹಳ ನೆರವಾಗಿದೆ ಎಂದರು.

ಉದ್ಯಮಿ ವಿಜೇಶ ಸೈಗಲ್ ಮಾತನಾಡಿ, ಕೋವಿಡ್-19ನಿಂದಾಗಿ ಸಂಕಷ್ಟಕ್ಕೆ ಸಿಲುಕಿದ್ದ ಉದ್ಯಮಗಳು ಚೇತರಿಸಿಕೊಳ್ಳುತ್ತಿವೆ. ಪೂರ್ಣ ಪ್ರಮಾಣದ ಚೇತರಿಕೆಗೆ ಇನ್ನಷ್ಟು ಸಮಯ ಬೇಕಾಗಬಹುದು. ಕೇಂದ್ರ ಘೋಷಿಸಿದ ಆರ್ಥಿಕ ನೆರವಿನಿಂದ ಹಲವಾರು ಉದ್ಯಮಿಗಳಿಗೆ ಸಹಾಯವಾಗಿದೆ. ನುರಿತ ಕಾರ್ಮಿಕರ ಕೊರತೆ ಎದುರಿಸುತ್ತಿದ್ದೇವೆ ಎಂದು ಹೇಳಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News