ಕೆಎಚ್‍ಬಿಯಿಂದ 98 ಕಡೆಗಳಲ್ಲಿ ವಸತಿ ಬಡಾವಣೆ ನಿರ್ಮಾಣಕ್ಕೆ ಸಚಿವ ಸಂಪುಟ ಸಭೆ ಒಪ್ಪಿಗೆ

Update: 2020-11-27 11:54 GMT

ಬೆಂಗಳೂರು, ನ. 27: ಕರ್ನಾಟಕ ಗೃಹ ಮಂಡಳಿ(ಕೆಎಚ್‍ಬಿ) ವತಿಯಿಂದ 2020-21ನೆ ಸಾಲಿನಲ್ಲಿ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಒಟ್ಟು 7,275.75 ಕೋಟಿ ರೂ.ವೆಚ್ಚದಲ್ಲಿ 98 ಸ್ಥಳಗಳಲ್ಲಿ ಸಂಯುಕ್ತ ವಸತಿ ಯೋಜನೆ/ವಸತಿ ಬಡಾವಣೆಗಳನ್ನು ನಿರ್ಮಿಸುವ ಯೋಜನೆಗೆ ಸಚಿವ ಸಂಪುಟ ಒಪ್ಪಿಗೆ ನೀಡಿದೆ.

ಶುಕ್ರವಾರ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಸಿಎಂ ಬಿಎಸ್‍ವೈ ಅಧ್ಯಕ್ಷತೆಯಲ್ಲಿ ನಡೆದ ಸಂಪುಟ ಸಭೆಯ ಬಳಿಕ ಮಾಧ್ಯಮಗೋಷ್ಠಿಯಲ್ಲಿ ಮಾಹಿತಿ ನೀಡಿದ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ, ರಾಯಚೂರು ಜಿಲ್ಲೆ ಮಸ್ಕಿ ನಾಲಾ ಯೋಜನೆ ಬಲದಂಡೆ ಮತ್ತು ಎಡದಂಡೆ ಆಧುನೀಕರಣಕ್ಕೆ 52.54 ಕೋಟಿ ರೂ.ಗಳ ಯೋಜನೆಗೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ ಎಂದರು.

ರೈಲ್ವೆ ಮೇಲ್ಸೇತುವೆ: ಹುಬ್ಬಳ್ಳಿ-ಧಾರವಾಡ ರೈಲ್ವೆ ನಿಲ್ದಾಣದ ನಡುವಿನ ಧಾರವಾರ ಸ್ಟೇಷನ್ ಯಾರ್ಡ್ ನಲ್ಲಿ ರೈಲ್ವೆ ಲೆವೆಲ್ ಕ್ರಾಸಿಂಗ್ ಗೇಟ್ ಬದಲು ಮೇಲ್ವೇತುವೆ ನಿರ್ಮಾಣಕ್ಕೆ ತಗಲುವ 16.18 ಕೋಟಿ ರೂ.ಗಳ ಪೈಕಿ ರಾಜ್ಯದ ಪಾಲು 8 ಕೋಟಿ ರೂ.ಗಳನ್ನು ಒದಗಿಸಲು ಸಂಪುಟ ಸಮ್ಮತಿಸಿದೆ ಎಂದು ತಿಳಿಸಿದರು.

ವಿದ್ಮುನ್ಮಾನ, ಮಾಹಿತಿ ತಂತ್ರಜ್ಞಾನ ಇಲಾಖೆ ಎಸ್‍ಟಿಪಿಐ ಸಹಯೋಗದಲ್ಲಿ ದಕ್ಷತೆ ಹೆಚ್ಚಿಸುವ ಸಂಬಂಧ ಉತ್ಕೃಷ್ಟತಾ ಕೇಂದ್ರವನ್ನು 26.77 ಕೋಟಿ ರೂ.ವೆಚ್ಚದಲ್ಲಿ ಬೆಂಗಳೂರಿನಲ್ಲಿ ಸ್ಥಾಪಿಸಲು ಸಂಪುಟ ಅಸ್ತು ಎಂದಿದೆ. ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ಬೆಳಗಾವಿ ಸಂಸ್ಥೆ ಕೇಂದ್ರ ಕಚೇರಿ ಹಾಗೂ ವಿವಿಧ ಪ್ರಾದೇಶಿಕ ಕಚೇರಿಗಳ ಅಭಿವೃದ್ಧಿ ಕಾಮಗಾರಿಯನ್ನು 42.93 ಕೋಟಿ ರೂ.ವೆಚ್ಚದಲ್ಲಿ ಕೈಗೆತ್ತಿಕೊಳ್ಳಲು ಒಪ್ಪಿಗೆ ನೀಡಲಾಗಿದೆ ಎಂದರು.

ಶ್ರೀರಾಮುಲು ಅಧ್ಯಕ್ಷತೆಯಲ್ಲಿ ಸಮಿತಿ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ(ಎಸ್ಸಿ-ಎಸ್ಟಿ)ಗಳ ಹಿಂಬಾಕಿ(ಬ್ಯಾಕ್‍ಲಾಗ್) ಹುದ್ದೆಗಳನ್ನು ಭರ್ತಿ ಮಾಡಲು ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು ಅಧ್ಯಕ್ಷತೆಯಲ್ಲಿ ಸಚಿವ ಸಂಪುಟ ಉಪಸಮಿತಿ ಪುನರ್ ರಚಿಸಲು ಸಂಪುಟ ಸಭೆ ಸಮ್ಮತಿಸಿದೆ ಎಂದು ಅವರು ಹೇಳಿದರು.

ಕಿಂಡಿ ಅಣೆಕಟ್ಟು: ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯಿಂದ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕರ್ಪೆ ಗ್ರಾಮದ ದೋಟ ಎಂಬಲ್ಲಿ ಕಿಂಡಿ ಅಣೆಕಟ್ಟು ನಿರ್ಮಾಣ ಕಾಮಗಾರಿಯ ಪರಿಷ್ಕೃತ ಅಂದಾಜು 36.34 ಕೋಟಿ ರೂ.ಗಳಿಗೆ ಒಪ್ಪಿಗೆ ನೀಡಲಾಗಿದೆ ಎಂದು ತಿಳಿಸಿದರು.

ಕೃಷಿ ಮಾರಾಟ ಇಲಾಖೆಗೆ ಡಬ್ಲ್ಯೂಐಎಫ್ ಯೋಜನೆಯಡಿ 2014-15ನೇ ಸಾಲಿನಲ್ಲಿ ಅನುಮೋದನೆಯಾಗಿರುವ 39.36 ಕೋಟಿ ರೂ.ವೆಚ್ಚದ 2 ಕಾಮಗಾರಿಗಳಿಗೆ ಅನುಮೋದನೇ ನೀಡಲಾಗಿದೆ. ಗೆಜೆಟೆಡ್ ಪ್ರೊಬೆಷನರಿಗಳ ನೇಮಕಾತಿ ನಿಯಮಗಳು 2020ಕ್ಕೆ ತಿದ್ದುಪಡಿಗೆ ಒಪ್ಪಿಗೆ ನೀಡಲಾಗಿದೆ.

ಮೆಟ್ರೋ ರೈಲು ಯೋಜನೆ ಅನುಷ್ಟಾನಕ್ಕೆ ರಚಿಸಲಾದ ಉನ್ನತ ಸಮಿತಿಗೆ ಮೂವರು ಹೆಚ್ಚುವರಿ ಸದಸ್ಯರನ್ನು ಸೇರ್ಪಡೆ, ಬಿಬಿಎಂಪಿ ವ್ಯಾಪ್ತಿಗೆ ಮಲ್ಲಸಂದ್ರ, ಉತ್ತರಹಳ್ಳಿ ಮನವರ್ತೆಕಾವಲ್ ಗ್ರಾಮದ ಭಾಗಶಃ ಪ್ರದೇಶಗಳ ಸೇರ್ಪಡೆಗೆ ಒಪ್ಪಿಗೆ, ಬೆಂ.ಉತ್ತರ ತಾಲೂಕು ಯಶವಂತಪುರ ಹೋಬಳಿ ಸೋಮಶೆಟ್ಟಿಹಳ್ಳಿ ಗ್ರಾ.ಪಂ.ಗೆ ಸೇರಿದ ಲಕ್ಷ್ಮಿಪುರ ಕಂದಾಯ ಗ್ರಾಮ ಕಾನ್ಷಿರಾಂ ನಗರ ಮತ್ತು ಲಕ್ಷ್ಮಿಪುರ ಗ್ರಾಮದ ಎಲ್ಲ ಬಡಾವಣೆಗಳನ್ನು ದಾಸರಹಳ್ಳಿ ಕ್ಷೇತ್ರದ ಶೆಟ್ಟಿಹಳ್ಳಿ ವಾರ್ಡ್ ಸಂಖ್ಯೆ 12ನ್ನು ಬಿಬಿಎಂಪಿಗೆ ಸೇರ್ಪಡೆ ಮಾಡಲು ಒಪ್ಪಿಗೆ ನೀಡಲಾಗಿದೆ ಎಂದರು.

ಮೇಲ್ದರ್ಜೆಗೆ: ಬೆಂ.ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಬಾಶೆಟ್ಟಿಹಳ್ಳಿ ಗ್ರಾ.ಪಂ. ಪಟ್ಟಣ ಪಂಚಾಯತ್, ಕೋಲಾರ ಜಿಲ್ಲೆ ವೇಮಗಲ್ ಮತ್ತು ಕುರುಗಲ್ ಗ್ರಾ.ಪಂ. ಹಾಗೂ ಶೆಟ್ಟಿಹಳ್ಳಿ ಮತ್ತು ಚೌಡದೇವನಹಳ್ಳಿ ಗ್ರಾ.ಪಂ.ಗಳ ಕೆಲವು ಗ್ರಾಮಗಳನ್ನು ಒಗ್ಗೂಡಿಸಿ ವೇಮಗಲ್-ಕುರುಗಲ್ ಪಟ್ಟಣ ಪಂಚಾಯತ್ ಆಗಿ ಮೇಲ್ದರ್ಜೆಗೇರಿಸಲು ಸಂಪುಟ ಅನುಮೋದನೆ ನೀಡಿದೆ ಎಂದು ಅವರು ತಿಳಿಸಿದರು.

ದಾವಣಗೆರೆ ಜಿಲ್ಲೆ ಹೊನ್ನಾಳಿ ಪಟ್ಟಣ ಪಂಚಾಯತ್ ಪುರಸಭೆಯನ್ನಾಗಿ, ಬೆಳಗಾವಿ ಜಿಲ್ಲೆಯ ಪೀರನವಾಡಿ ಗ್ರಾ.ಪಂ. ಮತ್ತು ಮುಚ್ಚಿ ಗ್ರಾ.ಪಂ.ಅನ್ನು ಪಟ್ಟಣ ಪಂಚಾಯತ್ ಆಗಿ ಮೇಲ್ದರ್ಜೆಗೇರಿಸಲು ತೀರ್ಮಾನಿಸಲಾಗಿದೆ. ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಜಾಲಹಳ್ಳಿ ಮತ್ತು ಕರಡಿಗುಡ್ಡ ಗ್ರಾ.ಪಂ. ಹಾಗೂ ಕೆಲ ಗ್ರಾಮಗಳನ್ನು ಜಾಲಹಳ್ಳಿ ಪಟ್ಟಣ ಪಂಚಾಯತ್ ಆಗಿ ಮೇಲ್ದರ್ಜೆಗೇರಿಸಲು ಒಪ್ಪಿಗೆ ನೀಡಲಾಗಿದೆ ಎಂದರು.

ಬೆಂಗಳೂರಿನ ಯಲಹಂಕ ತಾಲೂಕಿನ ಜಾಲ ಹೋಬಳಿಯ ಹುಣಮಾರನಹಳ್ಳಿ ಮತ್ತು ಸೊಣ್ಣಪ್ಪನಹಳ್ಳಿ ಗ್ರಾ.ಪಂ. ಒಗ್ಗೂಡಿಸಿ ಪುರಸಭೆಯನ್ನಾಗಿ ಮೇಲ್ದರ್ಜೆಗೆ, ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಕಾಗವಾಡ ಗ್ರಾ.ಪಂ. ಪಟ್ಟಣ ಪಂಚಾಯತ್ ಆಗಿ ಮೇಲ್ದರ್ಜೆಗೇರಿಸಲು ಸಚಿವ ಸಂಪುಟ ಸಭೆ ಸಮ್ಮತಿಸಿದೆ ಎಂದು ಹೇಳಿದರು.

ಜೆಎಸ್‍ಡಬ್ಲ್ಯೂಗೆ ಭೂಮಿ: ಬಳ್ಳಾರಿಯ ಸಂಡೂರು ತಾಲೂಕಿನ ತೋರಣಗಲ್ ಬಳಿಕ 2,058 ಎಕರೆ ಭೂಮಿ ನೀಡಲು ಸಂಬಂಧ ಪುನರ್ ಪರಿಶೀಲನೆ ಸಂಬಂಧ ಸಚಿವ ಸಂಪುಟ ಉಪ ಸಮಿತಿ ರಚನೆ ಮಾಡಲು ಒಪ್ಪಿಗೆ ನೀಡಲಾಗಿದೆ ಎಂದು ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.

ರಾಜ್ಯದಲ್ಲಿ ಹತ್ತು ಸಾವಿರಕ್ಕೂ ಅಧಿಕ ಜನಸಂಖ್ಯೆಯುಳ್ಳ ಗ್ರಾಮ ಪಂಚಾಯತ್ ಗಳನ್ನು ಪಟ್ಟಣ ಪಂಚಾಯತ್ ಆಗಿ ಮತ್ತು 20 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇರುವ ಪಟ್ಟಣ ಪಂಚಾಯತ್ ಗಳನ್ನು ಪುರಸಭೆಗಳನ್ನಾಗಿ ಮೇಲ್ದರ್ಜೆಗೇರಿಸಲಾಗುತ್ತಿದೆ. ಅದೇ ರೀತಿಯಲ್ಲಿ ಸ್ಥಳೀಯರ ಕೋರಿಕೆ ಮೇಲೆ ಮೇಲ್ದರ್ಜೆಗೇರಿಸಲು ಸಂಪುಟ ಅನುಮೋದನೆ ನೀಡಿದೆ.

-ಜೆ.ಸಿ.ಮಾಧುಸ್ವಾಮಿ, ಕಾನೂನು ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News