ಲಿಂಗಾಯತರನ್ನು ಓಬಿಸಿಗೆ ಸೇರ್ಪಡೆ: ಸರಕಾರದ ನಡೆ ಆಧರಿಸಿ ಮುಂದಿನ ನಿರ್ಧಾರ; ಬಸವ ಜಯಮೃತ್ಯುಂಜಯ ಸ್ವಾಮೀಜಿ

Update: 2020-11-27 16:18 GMT

ಬೆಂಗಳೂರು, ನ.27: ಲಿಂಗಾಯತ ಪಂಚಮಸಾಲಿ ಸಮುದಾಯವನ್ನು ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಪ್ರವರ್ಗ 2-ಎ ಪಟ್ಟಿಗೆ ಮತ್ತು ಕೇಂದ್ರ ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸುವ ಸಂಬಂಧ ರಾಜ್ಯ ಸರಕಾರದ ನಡೆ ಆಧರಿಸಿ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು ಎಂದು ಕೂಡಲ ಸಂಗಮ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದ್ದಾರೆ.

ಶುಕ್ರವಾರ ನಗರದ ಚಿತ್ರಕಲಾ ಪರಿಷತ್‍ನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಯಡಿಯೂರಪ್ಪ ಎರಡು ದಿನಗಳೊಳಗೆ ಒಳ್ಳೆಯ ಸುದ್ದಿ ನೀಡುವುದಾಗಿ ಭರವಸೆ ನೀಡಿದ್ದಾರೆ. ಸಂಪುಟ ಸಭೆಯಲ್ಲೇ ನಿರ್ಧಾರವಾಗಬೇಕಿತ್ತು. ಅಲ್ಲಿ ಆಗುವ ತೀರ್ಮಾನಗಳನ್ನಾಧರಿಸಿ ಮುಂದಿನ ಹೆಜ್ಜೆಯಿರಿಸಲಾಗುವುದು ಎಂದು ತಿಳಿಸಿದರು.

ಶುಕ್ರವಾರ ನಡೆದ ಸಂಪುಟದಲ್ಲಿ ಆಗದಿದ್ದರೂ, ಮುಂದಿನ ಸಂಪುಟದಲ್ಲಿ ನಮ್ಮ ಬೇಡಿಕೆ ಕುರಿತು ನಿರ್ಧಾರವಾಗುವ ವಿಶ್ವಾಸವಿದೆ. ಕೇಂದ್ರಕ್ಕೆ ಶಿಫಾರಸು ಕಳಿಸುವ ಮೊದಲು ರಾಜ್ಯ ಸರಕಾರ ಅಗತ್ಯ ಸಿದ್ಧತೆ ಮಾಡಿಕೊಳ್ಳಬೇಕು. ತಜ್ಞರನ್ನು ಒಳಗೊಂಡ ಆಯೋಗದಿಂದ ವರದಿ ಪಡೆದು ಕಳುಹಿಸಿದರೆ ಉತ್ತಮ ಎಂದು ಹೇಳಿದರು.

ಬಸವಣ್ಣನ ಹೆಸರಿಡಲು ಒತ್ತಾಯ: ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಸ್ಥಾಪನೆ ಸ್ವಾಗತಾರ್ಹ ಬೆಳವಣಿಗೆ. ನಿಗಮಕ್ಕೆ ಸಮುದಾಯದ ಹೆಸರಿನ ಬದಲು ಬಸವಣ್ಣನವರ ಹೆಸರಿಡಬೇಕು ಎಂದು ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News