'ಮುಸ್ಲಿಮರಿಗೆ ಟಿಕೆಟ್ ಕೊಡುವುದಿಲ್ಲ' ಎಂದ ಈಶ್ವರಪ್ಪರಿಗೆ ಡಿಕೆಶಿ ನೀಡಿದ ಸಲಹೆ ಏನು ಗೊತ್ತಾ ?

Update: 2020-11-30 12:02 GMT

ಬೆಂಗಳೂರು, ನ. 30: ‘ಬೆಳಗಾವಿ ಲೋಕಸಭೆ ಉಪ ಚುನಾವಣೆಗೆ ನಾವು ಮುಸ್ಲಿಮರಿಗೆ ಟಿಕೆಟ್ ನೀಡುವುದಿಲ್ಲ ಎಂದಿರುವ ಸಚಿವ ಕೆ.ಎಸ್.ಈಶ್ವರಪ್ಪನವರು, ಸಂವಿಧಾನ ಓದಬೇಕು. ಅದರಲ್ಲಿರುವ ಆಶಯ ಏನು ಎಂದು ತಿಳಿದುಕೊಳ್ಳಬೇಕು’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸಲಹೆ ಮಾಡಿದ್ದಾರೆ.

ಸೋಮವಾರ ದೇವನಹಳ್ಳಿಯ ನಡೆದ ಕಾಂಗ್ರೆಸ್ ಹಿರಿಯ ನಾಯಕರ ಸಭೆಯಲ್ಲಿ ಭಾಗವಹಿಸಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, 'ಬಿಜೆಪಿಯವರ ಸಿದ್ಧಾಂತವೇ ಅದು. ಅವರಿಗೆ ಸಂವಿಧಾನದ ಬಗ್ಗೆ ಗೊತ್ತಿಲ್ಲ. ಅದರ ಬಗ್ಗೆ ಗೌರವವೂ ಇಲ್ಲ. ಅವರು ಸಂವಿಧಾನ ಸುಡಬೇಕು ಅಂತಲೇ ಕಾಯುತ್ತಿದ್ದಾರೆ’ ಎಂದು ಟೀಕಿಸಿದರು.

ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಅವರಿಂದ ಸಂವಿಧಾನವನ್ನು ಓದಿಸಿ. ಅವರಿಗೆ ಅದರ ಆಶಯಗಳು ಅರ್ಥವಾಗಲಿ. ಬಿಜೆಪಿಯವರು ತಮ್ಮ ಪಕ್ಷದಲ್ಲಿರುವ ಅಲ್ಪಸಂಖ್ಯಾತರ ಘಟಕವನ್ನು ವಿಸರ್ಜಿಸುವುದು ಉತ್ತಮ ಎಂದು ಡಿ.ಕೆ.ಶಿವಕುಮಾರ್ ಇದೇ ಸಂದರ್ಭದಲ್ಲಿ ಸೂಚಿಸಿದರು.

ಈಗಾಗಲೇ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಗಳು ನಡೆದಿವೆ. ಹೀಗಾಗಿ ಗ್ರಾಮ ಪಂಚಾಯತ್ ಚುನಾವಣೆ ನಡೆಸುವುದರಲ್ಲಿ ಯಾವುದೇ ಅಭ್ಯಂತರವಿಲ್ಲ. ಕೋವಿಡ್-19 ನಿಯಮ ಪಾಲನೆ, ವ್ಯಕ್ತಿಗತ ಅಂತರ ಕಾಯ್ದುಕೊಳ್ಳುವಂತೆ ಸರಕಾರ ಹಾಗೂ ಅಧಿಕಾರಿಗಳು ನೋಡಿಕೊಳ್ಳಬೇಕು ಎಂದು ಶಿವಕುಮಾರ್ ಸಲಹೆ ನೀಡಿದರು.

ಸಮೂಹ ನಾಯಕತ್ವದಲ್ಲಿ ನಂಬಿಕೆ: ರಾಜ್ಯದ ಸಮಸ್ಯೆ ಹಾಗೂ ಸರಕಾರದ ಕೆಲವು ನಿರ್ಣಯಗಳನ್ನು ನಾವು ಗಮನಿಸಿದ್ದೇವೆ. ಈ ವಿಚಾರವಾಗಿ ನಾನೊಬ್ಬನೆ ತೀರ್ಮಾನ ಮಾಡುವುದಿಲ್ಲ. ಎಲ್ಲ ಅಭಿಪ್ರಾಯ ಪಡೆದು ತೀರ್ಮಾನ ತೆಗೆದುಕೊಳ್ಳಲಾಗುವುದು. ನಾನು ಸಾಮೂಹಿಕ ನಾಯಕತ್ವದ ಮೇಲೆ ನಂಬಿಕೆ ಇಟ್ಟಿದ್ದು, ಇಂದು ಹಿರಿಯ ನಾಯಕರೆಲ್ಲ ಸೇರಿ ಚರ್ಚಿಸಿ, ಅವರ ಸಲಹೆ ಪಡೆಯುತ್ತೇನೆ ಎಂದು ಅವರು ತಿಳಿಸಿದರು.

ತನಿಖೆ ಆದರೆ ತಾನೇ ಸತ್ಯಾಂಶ ಹೊರಬರುವುದು: ಸಿಎಂ ರಾಜಕೀಯ ಕಾರ್ಯದರ್ಶಿ ಸಂತೋಷ್ ಅವರು ಈಗ ಯಾವ ಹೇಳಿಕೆ ಬೇಕಾದರೂ ನೀಡಲಿ. ತಮ್ಮ ಆಂತರಿಕ ವಿಚಾರ ಮುಚ್ಚಿಕೊಳ್ಳಲು ಏನಾದರೂ ಹೇಳಲಿ. ರಾಜಕೀಯ ಕಾರಣಕ್ಕಾಗಿ ಅವರಿಂದ ಈ ಹೇಳಿಕೆ ಕೊಡಿಸಲಾಗಿದೆ. ಸಂತೋಷ್ ಅವರು ಯಾಕೆ ಆತ್ಮಹತ್ಯೆ ಯತ್ನ ಮಾಡಿದ್ದಾರೆಂಬುದರ ಬಗ್ಗೆಯೇ ಅವರ ಪತ್ನಿ ಶಂಕೆ ವ್ಯಕ್ತಪಡಿಸಿದ್ದಾರೆ. ಈ ವಿಚಾರಕ್ಕಾದರೂ ತನಿಖೆ ನಡೆಯಬೇಕೋ ಬೇಡವೋ? ಅವರು ಯಾವುದೋ ಸಾಮಾನ್ಯ ಹುದ್ದೆಯಲ್ಲಿ ಇರುವವರಲ್ಲ, ಸಿಎಂ ರಾಜಕೀಯ ಕಾರ್ಯದರ್ಶಿ ಹುದ್ದೆಯಲ್ಲಿದ್ದಾರೆ. ಹೀಗಾಗಿ ಇವರ ಆತ್ಮಹತ್ಯೆ ಯತ್ನ ತನಿಖೆ ಆಗಬೇಕು ಎಂದು ಡಿ.ಕೆ.ಶಿವಕುಮಾರ್ ಆಗ್ರಹಿಸಿದರು.

ಸಿದ್ಧಾಂತದಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ: 'ಚುನಾವಣೆಗಳ ಗೆಲುವು, ಸೋಲಿನ ಫಲಿತಾಂಶದ ಬಗ್ಗೆ ನಾವು ಆತಂಕ ಪಡುವುದಿಲ್ಲ. ಉಪಚುನಾವಣೆಗಳೇ ಬೇರೆ, ಪ್ರಮುಖ ಚುನಾವಣೆಗಳೇ ಬೇರೆ. ನಾವು ಭವಿಷ್ಯದಲ್ಲಿ ಗೆಲುವು ಸಾಧಿಸುವ ವಿಶ್ವಾಸವಿದೆ. ಉಪ ಚುನಾವಣೆ ಫಲಿತಾಂಶದಿಂದ ನಾವು ನಮ್ಮ ಪಕ್ಷದ ಸಿದ್ಧಾಂತದಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ. ನಮಗೆ ನಮ್ಮ ಸಿದ್ಧಾಂತಗಳೇ ಮುಖ್ಯ. ಬಿಜೆಪಿಯ ಆಂತರಿಕ ವಿಚಾರವಾಗಿ ನಾವು ಮಾತನಾಡುವುದಿಲ್ಲ' ಎಂದು ಶಿವಕುಮಾರ್ ಸ್ಪಷ್ಟನೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News