ಸಾರಾಯಿ ಕೊರೋನ ಸೋಂಕು ನಿವಾರಕ: ಸರಕಾರಕ್ಕೆ ಮತ್ತೊಮ್ಮೆ ಸಲಹೆ ನೀಡಿದ ವಕೀಲ

Update: 2020-11-30 16:28 GMT

ಬೆಂಗಳೂರು, ನ.30: ಕೊರೋನ ಸೋಂಕಿನಿಂದ ಜನರನ್ನು ರಕ್ಷಿಸಲು ಸಾರಾಯಿ ಬಳಕೆ ಮಾಡಲು ಕೇಂದ್ರ ಹಾಗೂ ರಾಜ್ಯ ಸರಕಾರಕ್ಕೆ ಮನವಿ ಮಾಡಿಕೊಂಡಿದ್ದರೂ ಸಕಾರಾತ್ಮಕವಾಗಿ ಸ್ಪಂದಿಸದಿರುವುದು ದುರದೃಷ್ಟಕರವಾಗಿದೆ. ಈಗಲಾದರೂ ಸರಕಾರಗಳು ಸಲಹೆಯನ್ನು ಬಳಸಿಕೊಂಡು ಗಂಟಲು ದ್ರವದ ಮೇಲೆ ಪರೀಕ್ಷೆ ನಡೆಸಬೇಕೆಂದು ತುಮಕೂರಿನ ಶಿರಾ ಮೂಲದ ವಕೀಲ ಎಲ್.ರಾಜಣ್ಣ ಅವರು ಮತ್ತೊಮ್ಮೆ ಮನವಿ ಮಾಡಿಕೊಂಡಿದ್ದಾರೆ.

ಕೇಂದ್ರ ಹಾಗೂ ರಾಜ್ಯ ಸರಕಾರ ಈ ಕುರಿತು ಆಲೋಚಿಸಬೇಕು. ಡಿಸ್ಟಿಲರಿಗಳು ಸರಕಾರಗಳ ನಿಯಂತ್ರಣದಲ್ಲಿ ಇರುವುದರಿಂದ ಸಾರಾಯಿ ಉತ್ಪಾದನೆ ಮಾಡಿಸುವುದು ಸುಲಭ. ಗುಣಮಟ್ಟದ ಸಾರಾಯಿ ಉತ್ಪಾದಿಸಿ ರೋಗಿಗಳ ದೈಹಿಕ ಸಾಮರ್ಥ್ಯ ಆಧರಿಸಿ ಸಿರಪ್ ರೀತಿಯಲ್ಲಿ ಅಲ್ಪ ಪ್ರಮಾಣದಲ್ಲಿ ನೀಡಿದರೆ ಅತ್ಯಂತ ವೇಗವಾಗಿ ಸೋಂಕು ನಿವಾರಿಸಬಹುದು ಎಂದು ತಿಳಿಸಿದ್ದಾರೆ.

ಆಲ್ಕೋಹಾಲ್ ವೈರಸ್ ಹಾಗೂ ಬ್ಯಾಕ್ಟೀರಿಯಾಗಳನ್ನು ವೇಗವಾಗಿ ಕೊಲ್ಲುತ್ತದೆ ಎಂದು ಈಗಾಗಲೇ ಸಾಬೀತಾಗಿದೆ. ಅದಕ್ಕಾಗಿಯೇ ಸ್ಯಾನಿಟೈಸರ್ ಗಳಲ್ಲಿಯೂ ಆಲ್ಕೋಹಾಲ್ ಸೇರಿಸಲಾಗುತ್ತದೆ. ಸಾರಾಯಿ ಹಾಗೂ ಸೇಂದಿಗಳಲ್ಲಿಯೂ ಆಲ್ಕೋಹಾಲ್ ಇರುತ್ತದೆ. ಸೇಂದಿಗಿಂತ ಸಾರಾಯಿ ಕೊರೋನ ಚಿಕಿತ್ಸೆಗೆ ಹೆಚ್ಚು ಸೂಕ್ತ ಹಾಗೂ ಪರಿಣಾಮಕಾರಿ. ಹೀಗಾಗಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಗುಣಮಟ್ಟದ ಸಾರಾಯಿ ತಯಾರಿಸಿ ಕೊರೋನ ಚಿಕಿತ್ಸೆಗೆ ಬಳಸಬಹುದು ಎಂದು ಸಲಹೆ ನೀಡಿದ್ದಾರೆ.

ಸದ್ಯಕ್ಕೆ ಸರಕಾರಗಳು ಸಾರಾಯಿ ತಯಾರಿಕೆಯನ್ನು ನಿಷೇಧಿಸಿವೆ. ಹೀಗಾಗಿ ಸರಕಾರಗಳೇ ಡಿಸ್ಟಿಲರಿಗಳ ಮೂಲಕ ಗುಣಮಟ್ಟದ ಸಾರಾಯಿ ಉತ್ಪಾದಿಸಿ, ಸೋಂಕು ನಿವಾರಿಸಲು ಕ್ರಮ ಕೈಗೊಳ್ಳಬೇಕು ಎಂದು ವಕೀಲ ರಾಜಣ್ಣ ಅವರು ಪತ್ರಿಕಾ ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News