ಸಕಾಲ ಸಪ್ತಾಹದಲ್ಲಿ ಮಂಡ್ಯ ಜಿಲ್ಲೆ ರಾಜ್ಯದಲ್ಲೇ ಪ್ರಥಮ: ಬೆಂಗಳೂರು ನಗರಕ್ಕೆ ಕೊನೆಯ ಸ್ಥಾನ

Update: 2020-11-30 17:35 GMT

ಮಂಡ್ಯ, ನ.30: ಸಕಾಲ ವಿಲೇವಾರಿ ಪ್ರಮಾಣದಲ್ಲಿ ಮಂಡ್ಯ ಜಿಲ್ಲೆ ಉತ್ತಮ ಪ್ರದರ್ಶನ ಹಾಗೂ ಸಕಾಲ ಸಪ್ತಾಹದಲ್ಲಿ ಮಂಡ್ಯ ಪ್ರಥಮ ಸ್ಥಾನ ಪಡೆದ ಹಿನ್ನೆಲೆಯಲ್ಲಿ ಸಕಾಲ ಹಾಗೂ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್‍ ಕುಮಾರ್ ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಅವರನ್ನು ಅಭಿನಂದಿಸಿದ್ದಾರೆ.

ಸಕಾಲ ಸಪ್ತಾಹವನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಇ-ಆಡಳಿತ) ಅಡಿಯಲ್ಲಿ ರಾಜ್ಯದಾದ್ಯಂತ ನ.30 ರಿಂದ ಡಿ.5ರವರೆಗೆ ಆಚರಿಸಲಿರುವ ಸಕಾಲ ಸಪ್ತಾಹ ಸಂಬಂಧ ಸೋಮವಾರ ವೀಡಿಯೋ ಕಾನ್ಫರೆನ್ಸ್ ಮೂಲಕ ಸಕಾಲ ಸಭೆಯನ್ನು ಸಚಿವರು ನಡೆಸಿದರು.

ಸಕಾಲ ಅಡಿಯಲ್ಲಿ ಒಟ್ಟು 98 ಇಲಾಖೆಗಳು ಮತ್ತು 1,025 ಸೇರ್ಪೆಡೆಯಾದ ಸೇವೆಗಳಿದ್ದು, ಸಕಾಲ ಅರ್ಜಿಗಳ ವಿಲೇವಾರಿ ಪ್ರಮಾಣವು ಅಕ್ಟೋಬರ್ ಮಾಹೆಯಲ್ಲಿ ಶೇ.95.78 ಆಗಿದೆ. ಈ ಮಾಹೆಯಲ್ಲಿ 22,21,919 ಅರ್ಜಿಗಳು ಸ್ವೀಕೃತಗೊಂಡು, 22,41,057 ಅರ್ಜಿಗಳು ವಿಲೇವಾರಿಯಾಗಿವೆ ಮತ್ತು 21,46,380 ಅರ್ಜಿಗಳು ನಿಗದಿತ ಸಮಯದಲ್ಲಿ ವಿಲೇವಾರಿಗೊಂಡಿವೆ.

ಸಕಾಲ ಸಪ್ತಾಹ ಕುರಿತು ಮಾತನಾಡಿದ ಸಕಾಲ ಸಚಿವರು, ರಾಜ್ಯದ 30 ಜಿಲ್ಲೆಯಲ್ಲಿ ಮಂಡ್ಯ ಜಿಲ್ಲೆಯು ಸಕಾಲ ಸಪ್ತಾಹದಲ್ಲಿ ಉತ್ತಮ ಪ್ರದರ್ಶನ ತೋರಿ ಪ್ರಥಮ ಸ್ಥಾನವನ್ನು ಪಡೆದಿದೆ. ಎರಡನೇ ಸ್ಥಾನವು ಚಿಕ್ಕಮಗಳೂರು, ಮೂರನೇ ಸ್ಥಾನ ಚಿಕ್ಕಬಳ್ಳಾಪುರ, ರಾಯಚೂರು 28, ಬೀದರ್ 29 ಹಾಗೂ ಬೆಂಗಳೂರು ನಗರದ ಕೊನೆಯ ಸ್ಥಾನವನ್ನು ಪಡೆದಿದೆ ಎಂದರು.

ವೀಡಿಯೋ ಕಾನ್ಫರೆನ್ಸ್ ಸಭೆಯ ನಂತರ ಮಾತನಾಡಿದ ಜಿಲ್ಲಾಧಿಕಾರಿ ಡಾ.ವೆಂಕಟೇಶ್, ಮಂಡ್ಯ ಜಿಲ್ಲೆಯು ಮೊದಲನೇ ಸ್ಥಾನ ಪಡೆದಿರುವುದು ಸಂತೋಷದ ವಿಷಯವಾಗಿದೆ. ಜಿಲ್ಲೆಯ ವಿವಿಧ ಇಲಾಖೆಗಳು ಸಕಾಲ ಸಪ್ತಾಹದಡಿಯಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸಿದ್ದು, ಇದನ್ನು ನಿರಂತರವಾಗಿ ಉಳಿಸಿಕೊಂಡು ಹೋಗಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಶೈಲಜಾ, ಜಿಪಂ ಉಪ ಕಾರ್ಯದರ್ಶಿ ಡಿ.ಪ್ರಕಾಶ್ ಮತ್ತು ಇತರ ಅಧಿಕಾರಿಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News