ಸಿದ್ದರಾಮಯ್ಯ ಇನ್ನೊಮ್ಮೆ ಹುಟ್ಟಿ ಬಂದರೂ 'ಲವ್ ಜಿಹಾದ್' ಕಾಯ್ದೆ ತಡೆಯಲು ಸಾಧ್ಯವಿಲ್ಲ: ಸಂಸದೆ ಶೋಭಾ

Update: 2020-12-01 14:44 GMT

ಚಿಕ್ಕಮಗಳೂರು, ಡಿ.1: ಲವ್ ಜಿಹಾದ್ ಎಂಬುದು ಕೇವಲ ಪ್ರೀತಿಯ ಸಂಗತಿಯಲ್ಲ. ಇದರ ಹಿಂದೆ ಮತಾಂತರದ ಷಡ್ಯಂತ್ರ ಅಡಗಿದೆ. ಲವ್‍ ಜಿಹಾದ್ ತಡೆಗೆ ಕಾನೂನು ಬರಲೇಬೇಕು. ಬಂದೇ ಬರುತ್ತದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.

ಜಿಲ್ಲೆಯ ಕೊಪ್ಪ ತಾಲೂಕಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಓಟ್‍ಬ್ಯಾಂಕ್ ಓಲೈಕೆಗಾಗಿ ಮುಸ್ಲಿಮರನ್ನು ಓಲೈಸುವ ಕೆಲಸ ಸಿದ್ದರಾಮಯ್ಯ ಅವರು ಮಾಡುತ್ತಿದ್ದಾರೆ. ಇದು ಹೊಸದಲ್ಲ, ಅವರ ಈ ಹಿಂದೆಯೂ ಇದನ್ನೇ ಮಾಡಿದ್ದಾರೆ. ಲವ್ ಜಿಹಾದ್ ಕಾನೂನು ಬರಲೇ ಬೇಕು. ಅದು ಬಂದೇ ಬರುತ್ತದೆ. ಗೋಹತ್ಯೆ ನಿಷೇಧ ಕಾನೂನು ಕೂಡಾ ಬಂದೇ ಬರುತ್ತದೆ ಎಂದರು.

ಲವ್ ಜಿಹಾದ್ ಎಂದರೇನು ಎಂಬುದನ್ನು ಸಿದ್ದರಾಮಯ್ಯ ಅವರು ಅರ್ಥ ಮಾಡಿಕೊಳ್ಳಬೇಕು. ಲವ್ ಜಿಹಾದ್ ಪರವಾಗಿ ಹೇಳಿಕೆ ನೀಡುವುದು ಇದೇ ಮೊದಲಲ್ಲ. ಓಟ್ ಬ್ಯಾಂಕ್‍ಗಾಗಿ ಕಾಂಗ್ರೆಸ್ ಯಾವಾಗಲೂ ಲವ್ ಜಿಹಾದ್ ಪರವಾಗಿಯೇ ಮಾತನಾಡುತ್ತದೆ. ಇದನ್ನು ಸಿದ್ದರಾಮಯ್ಯ ಅವರು ಮುಂದುವರಿಸಿದ್ದಾರೆ. ಸಿದ್ದರಾಮಯ್ಯ ಅವರು ಇನ್ನೊಮ್ಮೆ ಹುಟ್ಟಿ ಬಂದರೂ ಲವ್ ಜಿಹಾದ್ ತಡೆ ಕಾಯ್ದೆ ತರುವುದನ್ನು ನಿಲ್ಲಿಸೋಕೆ ಸಾಧ್ಯವಿಲ್ಲ. ಸಿದ್ದರಾಮಯ್ಯ ಕ್ರಾಸ್‍ಬ್ರೀಡ್ ಬಗ್ಗೆ ಹೇಳಿಕೆ ನೀಡಿದ್ದಾರೆ. ಈ ಬಗ್ಗೆ ಸಿದ್ದರಾಮಯ್ಯ ಹಗುರವಾಗಿ ಮಾತನಾಡಿದ್ದಾರೆ. ಅವರು ಯಾವ ಕ್ರಾಸ್ ಬಗ್ಗೆ ಮಾತನಾಡಿದ್ದಾರೆ ನನಗೆ ಗೊತ್ತಿಲ್ಲ, ಅದನ್ನು ಅವರೇ ಸ್ಪಷ್ಟನೆ ನೀಡಬೇಕು ಎಂದು ಶೋಭಾ ಹೇಳಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News