ಮೈಸೂರು: ದಿಲ್ಲಿ ಚಲೋ ರೈತರ ಮೇಲಿನ ದೌರ್ಜನ್ಯ ಖಂಡಿಸಿ ರೈತರ ಪ್ರತಿಭಟನೆ

Update: 2020-12-01 18:21 GMT

ಮೈಸೂರು,ಡಿ.1: ದಿಲ್ಲಿ ಚಲೋ ರೈತರ ಮೇಲಿನ ಕೇಂದ್ರ ಸರ್ಕಾರದ ದೌರ್ಜನ್ಯ ಖಂಡಿಸಿ ರೈತ-ಕಾರ್ಮಿಕ ವಿರೋಧಿ ಮಸೂದೆಗಳನ್ನು ವಾಪಸ್ ಪಡೆಯುವಂತೆ ಆಗ್ರಹಿಸಿ ಮೈಸೂರಿನಲ್ಲಿ ರೈತ-ಕಾರ್ಮಿಕ-ದಲಿತ-ಹಾಗೂ ಪ್ರಗತಿಪರ ಸಂಘಟನೆಗಳ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಮಂಗಳವಾರ ಜಮಾಯಿಸಿದ ಪ್ರತಿಭಟನಾಕಾರರು, ದಿಲ್ಲಿ ಚಲೋ ರೈತರ ಮೇಲಿನ ಕೇಂದ್ರ ಸರ್ಕಾರದ ದೌರ್ಜನ್ಯ ಖಂಡಿಸಿ ಪ್ರತಿಭಟನೆ ನಡೆಸಿದರು. ಈ ವೇಳೆ ಪ್ರತಿಭಟನಾ ಸ್ಥಳದ ವಿಚಾರವಾಗಿ ಪೊಲೀಸರ ಜತೆ ಪ್ರತಿಭಟನಾನಿರತ ರೈತರು ವಾಗ್ವಾದ ನಡೆಸಿದ ಘಟನೆ ನಡೆಯಿತು.

ಡಿಸಿ ಕಚೇರಿಯ 100 ಮೀಟರ್ ವ್ಯಾಪ್ತಿ ಹೊರಗಡೆ ಪ್ರತಿಭಟನೆ ನಡೆಸುವಂತೆ ಮೈಸೂರು ಜಿಲ್ಲಾಧಿಕಾರಿ ಸೂಚನೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಡಿಸಿ ಕಚೇರಿ 100 ಮೀಟರ್ ವ್ಯಾಪ್ತಿಯ ಹೊರಗೆ ಪ್ರತಿಭಟನೆ ನಡೆಸಬೇಕೆಂದು ಪೊಲೀಸರು ಸೂಚನೆ ನೀಡಿದ್ದು, ಈ ವೇಳೆ ಡಿಸಿ ಆದೇಶಕ್ಕೆ ರೈತ ಮುಖಂಡರು ಕಿಡಿಕಾರಿದರು.

ಈ ಸಮಯದಲ್ಲಿ ಪೊಲೀಸರ ಜತೆ ವಾಗ್ವಾದಕ್ಕಿಳಿದ ರೈತ ಮುಖಂಡರು, ನಾವೇನು ಟೆರರಿಸ್ಟ್ ಗಳಾ ಎಂದು ಪ್ರಶ್ನಿಸಿ ಡಿಸಿ ಆದೇಶಕ್ಕೆ ಸೆಡ್ಡು ಹೊಡೆದು ರೈತರು ತೀರ್ಮಾನಿಸಿದ ಸ್ಥಳದಲ್ಲೇ ರೈತರು, ಕಾರ್ಮಿಕರು, ಧರಣಿ ನಡೆಸಿದರು. ಪೊಲೀಸರು ಬೇರೆಡೆ ಪ್ರತಿಭಟನೆ ನಡೆಸುವಂತೆ ಸೂಚಿಸಿದರೂ ಕ್ಯಾರೇ ಅನ್ನಲಿಲ್ಲ.

ರೈತ ಮುಖಂಡರ ಎಚ್ಚರಿಕೆ: ದಿಲ್ಲಿ ಚಲೋ ರೈತರ ಮೇಲಿನ ಕೇಂದ್ರ ಸರ್ಕಾರದ ದೌರ್ಜನ್ಯ ಖಂಡಿಸಿ ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ ಕರೆ ಹಿನ್ನೆಲೆಯಲ್ಲಿ ಪ್ರತಿಭಟನೆ ನಡೆಸಿದ ರೈತರು, ''ರೈತರ ಹೋರಾಟಗಳನ್ನು ಕೇಂದ್ರ ಸರ್ಕಾರ ಹತ್ತಿಕ್ಕುವ ಪ್ರಯತ್ನ ಮಾಡುತ್ತಿದೆ. ಕಳೆದ ತಿಂಗಳು 26 ರಂದು ದಿಲ್ಲಿ ಚಲೋಗೆ ತೆರಳಿದ್ದ ರೈತರ ಮೇಲೆ ಲಾಠಿ ಚಾರ್ಜ್ ಮಾಡಿಸಿದ್ದಾರೆ. ಅಮಾನುಷವಾಗಿ ರೈತರ ಮೇಲೆ ದಾಳಿ ನಡೆಸುವ ಮೂಲಕ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ರೈತ ವಿರೋಧಿಗಳಾಗಿವೆ. ಇದು ಕೇವಲ ರೈತ ವಿರೋಧಿಯಲ್ಲ, ಪ್ರಜಾಪ್ರಭುತ್ವ ವಿರೋಧಿ ಸರ್ಕಾರವಾಗಿದೆ. ಈ ಕೂಡಲೇ ಪ್ರಧಾನಿ ರೈತರ ಕ್ಷೇಮ ಕೇಳಬೇಕು. ಕೃಷಿ ವಿರೋಧಿ ಕಾಯ್ದೆಗಳನ್ನು ಹಿಂಪಡೆಯಬೇಕು. ಸಾಲ ಮನ್ನಾ, ಬಡ್ಡಿ ಮನ್ನಾ ಸೇರಿದಂತೆ ಋಣ ಮುಕ್ತ ಕಾಯ್ದೆಯನ್ನು ಜಾರಿಗೆ ತರಬೇಕು ಎಂದು ಕೇಂದ್ರ ಸರ್ಕಾರಕ್ಕೆ ಪ್ರತಿಭಟನಾ ನಿರತ ರೈತ ಮುಖಂಡರು ಎಚ್ಚರಿಕೆ ನೀಡಿದರು.

ಪ್ರತಿಭಟನೆಯಲ್ಲಿ ಹಿರಿಯ ಪ್ರಗತಿಪರ ಹೋರಾಟಗಾರ ಪ.ಮಲ್ಲೇಶ್, ರೈತ ಮುಖಂಡರಾದ ಬಡಗಲಪುರ ನಾಗೇಂದ್ರ, ಹೊಸಕೋಟೆ ಬಸವರಾಜ್, ಪಿ.ಮರಂಕಯ್ಯ, ಸ್ವರಾಜ್ ಇಂಡಿಯಾದ ಉಗ್ರ ನರಸಿಂಹೆಗೌಡ ,ಕಾರ್ಮಿಕ ಮುಖಂಡರಾದ ಚಂದ್ರಶೇಖರ್ ಮೇಟಿ, ಸಿಪಿಐನ ಬಸವರಾಜು, ಮಾಜಿ ಮೇಯರ್ ಪುರುಷೋತ್ತಮ್, ಪ್ರೊ.ಶಬ್ಬೀರ್ ಮುಸ್ತಾಫ, ಸ್ವರಾಜ್ ಇಂಡಿಯಾದ ಪುನೀತ್, ಉಗ್ರನರಸಿಂಹೇಗೌಡ, ದಸಂಸ ಮುಖಂಡರುಗಳಾದ ಬೆಟ್ಟಯ್ಯ ಕೋಟೆ, ಆಲಗೂಡು ಶಿವಕುಮಾರ್, ಕಲ್ಲಹಳ್ಳಿ ಕುಮಾರ್, ಪಿಯುಸಿಎಲ್‍ನ ಡಾ.ಲಕ್ಷ್ಮಿನಾರಾಯಣ್, ರತಿರಾವ್, ಪಂಡಿತಾರಾಧ್ಯ, ನಾ.ದಿವಾಕರ, ಸಂಧ್ಯಾ, ಉಮಾದೇವಿ, ನೆಲೆಹಿನ್ನಲೆ ಗೋಪಾಲಕೃಷ್ಣ ಸೇರಿದಂತೆ ಹಲವರು ಭಾಗವಹಿಸಿದ್ದರು.

ದಿಲ್ಲಿ ಯಾರದ್ದೂ ಅಲ್ಲ: ಬಡಗಲಪುರ ನಾಗೇಂದ್ರ ಆಕ್ರೋಶ

ದಿಲ್ಲಿ ನರೇಂದ್ರ ಮೋದಿಯದ್ದೂ ಅಲ್ಲ, ಅಮಿತ್ ಶಾದೂ ಅಲ್ಲ ನಮ್ಮ ದೇಶದ ರಾಜಧಾನಿ. ಅಲ್ಲಿ  ಪ್ರತಿಭಟನೆಗೆ ಮುಂದಾದ ರೈತರನ್ನು ತಡೆಯಲು ಇವರಿಗೆ ಯಾವ ಹಕ್ಕೂ ಇಲ್ಲ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಆಕ್ರೋಶ ವ್ಯಕ್ತಪಡಿಸಿದರು.

ನಗರದ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಮಂಗಳವಾರ ನಡೆದ ಪ್ರತಿಭಟನೆಯಲ್ಲಿ ಮಾತನಾಡಿದ ಅವರು, ಜೂನ್ ತಿಂಗಳಿನಿಂದಲೂ ಹರಿಯಾಣ, ಪಂಜಾಬ್ ರಾಜ್ಯದಲ್ಲಿ ಚಳುವಳಿಗಳು ನಡೆಯುತ್ತಿದೆ. ಅದಕ್ಕೆ ಸ್ಪಂಧಿಸಿದ್ದರೆ ನಾವು ದಿಲ್ಲಿಗೆ ಹೋಗುವ ಪ್ರಮೇಯವೇ ಬರುತ್ತಿರಲಿಲ್ಲ, ದಿಲ್ಲಿ ರಾಜಧಾನಿಯಲ್ಲಿ ನಮ್ಮ ಆಡಳಿತ ವ್ಯವಸ್ಥೆ ಇರುವುದರಿಂದ ದಿಲ್ಲಿಗೆ ನಾವು ಹೋಗಿದ್ದೆವು. ರೈತರ ಸಮಸ್ಯೆಯನ್ನು ಕೇಳದ ಅವರ ಮೇಲೆ ಹಲ್ಲೆ ನಡೆಸುವುದು, ಕಂದಕ ತೋಡುವುದು. ಜಲಫಿರಂಗಿ ಹಾರಿಸುವುದು, ಕೊರೆಯುವ ಚಳಿಯಲ್ಲಿ ರೈತರನ್ನು ಅಮಾನವೀಯವಾಗಿ ನಡೆಸಿಕೊಳ್ಳುತ್ತಿರುವುದು ಇಡೀ ಪ್ರಪಂಚವೇ ತಲೆ ತಗ್ಗಿಸುವಂತದ್ದು ಎಂದು ಕಿಡಿಕಾರಿದರು.

ನಮ್ಮದು ಪ್ರಜಾಪ್ರಭುತ್ವ ದೇಶ, ಒಳ್ಳೆಯ ಸಂವಿಧಾನ ಇರುವ ದೇಶ. ಹೋರಾಟದ ಮೂಲಕ ಸ್ವತಂತ್ರ ಪಡೆದಿರುವುದು. ಗಾಂಧಿ ನಾಡಿನಲ್ಲಿ ಹುಟ್ಟಿದ ಮೋದಿ ಚರಕದ ಮುಂದೆ ಕುಳಿತುಕೊಳ್ಳುತ್ತಾರೆ. ಆದರೆ ಚಳುವಳಿ ನಡೆಸುವವರನ್ನು ನಡೆಸಿಕೊಳ್ಳೂತ್ತಿರುವ ರೀತಿ ಅತ್ಯಂತ ದುರದೃಷ್ಟಕರ ಎಂದು ಹರಿಹಾಯ್ದರು.

ರೈತರನ್ನು ತಡೆಯಲು ಅದೇನು ಅವರ ಸ್ವಂತ ಊರಲ್ಲ. ಅದು ನಮ್ಮ ರಾಜಧಾನಿ ಅಲ್ಲಿ ಚಳುವಳಿ ನಡೆಸಲು ಎಲ್ಲರಿಗೂ ಹಕ್ಕಿದೆ. ನಾವೇನು ಬಾಂಬ್ ಹಿಡಿದುಕೊಂಡು ಹೋಗುತ್ತಿಲ್ಲ. ನಮ್ಮ ಸಮಸ್ಯೆ ಹೇಳಿಕೊಳ್ಳಲು ಹೋಗುತ್ತಿದ್ದೇವೆ. ಪ್ರಧಾನಿ ಸಂಸತ್‍ನಲ್ಲೂ ಚರ್ಚೆ ಮಾಡುವುದಿಲ್ಲ. ಮಾಧ್ಯಮದವರ ಬಳಿಯೂ ಚರ್ಚೆ ಮಾಡುವುದಿಲ್ಲ. ಇನ್ನೂ ಚಳುವಳಿಗಾರರ ಬಳಿಯೂ ಮಾತುಕತೆ ನಡೆಸುವುದಿಲ್ಲ. ಆದರೆ ಒಳ್ಳೆಯದಾಗುತ್ತದೆ ಎಂದು ಮನ್‍ಕೀ ಬಾತ್‍ನಲ್ಲಿ ಹೇಳುತ್ತಾರೆ. ರೈತರಿಗೆ ಒಳ್ಳೆಯದಾಗುವುದಾದರೆ ಲಕ್ಷಾಂತರ ಮಂದಿ ಏಕೆ ಬೀದಿಗಿಳಿಯುತ್ತಾರೆ ಎಂದು ಪ್ರಶ್ನಿಸಿದರು.

ಕರ್ನಾಟದಲ್ಲಿ ದೊಡ್ಡ ಚಳುವಳಿಯನ್ನು ರೂಪಿಸುತ್ತೇವೆ. ಚಳಿಗಾಲದ ಅದಿವೇಶನ 7 ರಿಂದ 15ರವರೆಗೆ ನಡೆಯಲಿದ್ದು ಎಲ್ಲಾ ಸಂಘಟನೆಗಳೊಡಗೂಡಿ ದೊಡ್ಡ ಹೋರಾಟ ಮಾಡುವ ಮೂಲಕ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಲಾಗುವುದು ಎಂದು ಹೇಳಿದರು.

ನಮ್ಮ ಉತ್ತರ ಭಾರತದಲ್ಲಿ ಕೆಲವು ರೈತ ಸಂಘಟನೆಗಳು ನರೇಂದ್ರ ಮೊದಿ ಅವರಿಗೆ ಬೆಂಬಲ ನೀಡಿದ್ದವು. ಆದರೆ ಈಗ ನರೇಂದ್ರ ಮೋದಿ ಅವರ ಭಾವಚಿತ್ರವನ್ನು ಕಿತ್ತು ಕಿತ್ತು ಬಿಸಾಕಿ ಕ್ಯಾಕರಿಸಿ ಉಗಿದು ತುಳಿದು ಬೆಂಕಿ ಹಚ್ಚಿದ್ದಾರೆ. ಇದರ ಅರ್ಥ ಮುಂದೆ ಬಿಜೆಪಿಗೆ ತಿರುಗುಬಾಣವಾಗಿ ದಿಲ್ಲಿ ಗದ್ದುಗೆಗೆ ಕುಂದುಂಟಾಗುವ ಸನಿಹ ಬಂದಿದೆ ಎಂದು ಹೇಳಿದರು.

ನಮ್ಮನ್ನು ಆಳುತ್ತಿರುವುದು ಭೂತ ಮನುಷ್ಯನಲ್ಲ. ಹಾಗಾಗಿಯೇ ಮನುಷ್ಯತ್ವ ಇಲ್ಲದೆ ಅನ್ನದಾತರ ಮೇಲೆ ಅಮಾನುಷವಾಗಿ ಹಲ್ಲೆ ನಡೆಸಲಾಗಿದೆ.
-ಆಲಗೂಡು ಶಿವಕುಮಾರ್, ದಸಂಸ ಜಿಲ್ಲಾ ಸಂಚಾಲಕ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News