ಪರೀಕ್ಷಾ ಫಲಿತಾಂಶ ಆಧರಿಸಿ ಶಾಲೆಗಳಿಗೆ ಶ್ರೇಣಿ ವ್ಯವಸ್ಥೆಗೆ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಚಿಂತನೆ

Update: 2020-12-02 18:26 GMT

ಬೆಂಗಳೂರು, ಡಿ.2: ರಾಜ್ಯಾದ್ಯಂತ ಎಸೆಸೆಲ್ಸಿ ಫಲಿತಾಂಶದ ಆಧಾರಲ್ಲಿ ಶಾಲೆಗಳಿಗೆ ಶ್ರೇಣಿ ನೀಡಲು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಮುಂದಾಗಿದ್ದು, ಅದರಂತೆ ಶ್ರೇಣೀಕೃತ ವ್ಯವಸ್ಥೆಯನ್ನು ಜಾರಿಗೆ ತರಲು ತಯಾರಿ ನಡೆಸಲಾಗುತ್ತಿದೆ.

ಪರೀಕ್ಷಾ ಆಧಾರದಲ್ಲಿ ಪ್ರತಿ ಜಿಲ್ಲೆಗೂ ಶ್ರೇಣಿಯನ್ನು ನೀಡಲಾಗಿದೆ. ಅದೇ ಮಾದರಿಯಲ್ಲಿ ಶಾಲೆಗಳಿಗೂ ಶ್ರೇಣಿ ನೀಡಲಾಗುತ್ತದೆ. ವಿದ್ಯಾರ್ಥಿಗಳ ತೇರ್ಗಡೆಯ ಪ್ರಮಾಣವನ್ನೇ ಗುರಿಯಾಗಿಟ್ಟುಕೊಳ್ಳದೆ, ಗುಣಾತ್ಮಕವಾಗಿ ಫಲಿತಾಂಶವನ್ನು ಅಳೆಯುವ ನೂತನ ಪದ್ಧತಿ ಅಳವಡಿಸಿಕೊಳ್ಳಲಾಗಿದೆ. ಇದು ಎಸೆಸೆಲ್ಸಿಯ ವಿದ್ಯಾರ್ಥಿಗಳಲ್ಲಿ ಗುಣಾತ್ಮಕ ಶಿಕ್ಷಣ ನೀತಿಯ ಅನುಷ್ಠಾನಕ್ಕೂ ಪೂರಕವಾಗಲಿದೆ.

ಪ್ರತಿವರ್ಷ ಎಸೆಸೆಲ್ಸಿ ಪರೀಕ್ಷೆ ಎದುರಿಸುವ ರೆಗ್ಯೂಲರ್ ವಿದ್ಯಾರ್ಥಿಗಳ ಸಾಧನೆಯನ್ನು ಆಧಾರವಾಗಿಟ್ಟುಕೊಂಡು ಶಾಲೆಗಳಿಗೆ ಗುಣಾತ್ಮಕ ಫಲಿತಾಂಶದ ಶ್ರೇಣಿಯನ್ನು ನೀಡಲಾಗುತ್ತದೆ ಎಂದು ಮಂಡಳಿಯ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ಶ್ರೇಣಿ ಲೆಕ್ಕಾಚಾರ ಮಾನದಂಡ: ಎಸೆಸೆಲ್ಸಿ ಪರೀಕ್ಷೆ ಬರೆಯುವ ರೆಗ್ಯುಲರ್ ವಿದಾರ್ಥಿಗಳಲ್ಲಿ ಉತ್ತೀರ್ಣವಾದ ಪ್ರಮಾಣ, ಶಾಲೆಯ ಎಲ್ಲ ವಿದ್ಯಾರ್ಥಿಗಳ ಸರಾಸರಿ ಅಂಕ, ಪ್ರಥಮ ದರ್ಜೆ ಹಾಗೂ ಅತ್ಯುನ್ನತ ದರ್ಜೆಯಲ್ಲಿ ಪಾಸಾದ ವಿದ್ಯಾರ್ಥಿಗಳ ಪ್ರಮಾಣವನ್ನು ಕ್ರೋಡೀಕರಿಸಿ ಶಾಲೆಗೆ ಶ್ರೇಣಿ ನೀಡಲಾಗುತ್ತದೆ.

ಅದರ ಮಾನದಂಡದಡಿ 75 ಅಥವಾ ಅದಕ್ಕಿಂತ ಹೆಚ್ಚು ಅಂಕ ಪಡೆದ ಶಾಲೆಗೆ ‘ಎ’, 60ರಿಂದ 75 ಅಂಕ ಪಡೆದ ಶಾಲೆಗೆ ‘ಬಿ’ ಹಾಗೂ 60ಕ್ಕಿಂತ ಕಡಿಮೆ ಅಂಕ ಪಡೆದ ಶಾಲೆಗೆ ‘ಸಿ’ ಶ್ರೇಣಿ ನೀಡಲಾಗುತ್ತದೆ ಎಂದು ಮಂಡಳಿಯ ನಿರ್ದೇಶಕಿ ವಿ.ಸುಮಂಗಳಾ ಮಾಹಿತಿ ನೀಡಿದ್ದಾರೆ.

ಅನುಕೂಲತೆ ಏನು?: ಎಸೆಸೆಲ್ಸಿ ಫಲಿತಾಂಶ ಪ್ರಕಟಗೊಂಡ ಸಂದರ್ಭದಲ್ಲಿ ಪರಿಪೂರ್ಣ ಫಲಿತಾಂಶ ಪಡೆದದ್ದು ಶೇ.100 ರಷ್ಟು ಹಾಗೂ ಅಪೂರ್ಣ ಫಲಿತಾಂಶ ಪಡೆದ ಶಾಲೆಗಳಿಗೆ ಶೂನ್ಯ ಫಲಿತಾಂಶದ ಶಾಲೆಗಳೆಂದು ಕರೆಯಲಾಗುತ್ತದೆ. ಆದರೆ, ಮುಂದಿನ ದಿನಗಳಲ್ಲಿ ಈ ಪರಿಕಲ್ಪನೆ ಇರುವುದಿಲ್ಲ. ಫಲಿತಾಂಶದ ಆಧಾರದಲ್ಲಿ ಶ್ರೇಣಿ ನೀಡುವುದರಿಂದ ಎ, ಬಿ ಅಥವಾ ಸಿ ಶ್ರೇಣಿಯ ಶಾಲೆಗಳು ಮಾತ್ರ ಉಳಿಯುತ್ತದೆ.

ಅದರಲ್ಲಿ ಎ ಶ್ರೇಣಿ ಉತ್ತಮ ಗುಣಮಟ್ಟವನ್ನು ತೋರ್ಪಡಿಸಿದರೆ ಬಿ ಮತ್ತು ಸಿ ಶ್ರೇಣಿಯ ಶಾಲೆಗಳಲ್ಲಿ ಶೈಕ್ಷಣಿಕವಾಗಿ ಆಗಬೇಕಿರುವ ಬದಲಾವಣೆಗಳೇನು ಎಂಬುದನ್ನು ಸುಲಭವಾಗಿ ಪತ್ತೆ ಹೆಚ್ಚಿ, ಗುಣಾತ್ಮಕ ಮೌಲ್ಯಮಾಪನದ ಮೂಲಕ ಉನ್ನತೀಕರಿಸಲು ಅನುಕೂಲವಾಗಲಿದೆ. ಶೂನ್ಯ ಫಲಿತಾಂಶದ ಶಾಲೆಯ ಪರಿಕಲ್ಪನೆ ಇರುವುದಿಲ್ಲ ಎಂದು ಅಧಿಕಾರಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News